Bihar Bridge Collapse | ಪಟ್ನಾ: ಜೂ.4ರ ಭಾನುವಾರ ಬಿಹಾರದ ಭಗಲ್ಪುರದಲ್ಲಿ ಗಂಗಾನದಿಗೆ ಕಟ್ಟಲಾಗಿದ್ದ 1700 ಕೋಟಿ ರೂ. ವೆಚ್ಚದ ಸೇತುವೆ ಕೆಲವೇ ಸೆಕೆಂಡುಗಳಲ್ಲಿ ಧ್ವಂಸವಾಗಿ ಉರುಳಿಬಿದ್ದಿದೆ. ಆದರೆ, ಇದಕ್ಕೆ ಬಿಜೆಪಿಯೇ ಧ್ವಂಸ ಮಾಡಿದೆ ಎಂಬುದಾಗಿ ಆರೋಪಿಸಿದ್ದಾರೆ ಬಿಹಾರದ ಮಂತ್ರಿ, ಲಾಲು ಪ್ರಸಾದ್ ಯಾದವ್ ಪುತ್ರ ತೇಜಪ್ರತಾಪ್ ಯಾದವ್! ನಾವು ಸೇತುವೆ ಕಟ್ಟುತ್ತಿದ್ದೇವೆ, ಇದನ್ನು ಬಿಜೆಪಿ ಉರುಳಿಸುತ್ತಿದೆ ಎಂದವರು ಆರೋಪಿಸಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣದಲ್ಲಿ ನರೇಂದ್ರ ಮೋದಿ ಆಗಿದ್ದರೆ ಎರಡು ಸಂಸತ್ ಕಟ್ಟಡವನ್ನೇ ಕಟ್ಟುತ್ತಿದ್ದರು. ಬಿಹಾರದ ನಿತೀಶ್ ಕುಮಾರ್ ಸರಕಾರವು ತೆರಿಗೆದಾರರ ಹಣವನ್ನು ನೀರುಪಾಲು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಬಿಹಾರದ ಸಂಸದ, ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್.
ಹಾಗಿದ್ದರೆ, ಬಿಹಾರದಲ್ಲಿ ಸೇತುವೆಗಳು ಕಳಪೆ ಕಾಮಗಾರಿಯಿಂದಾಗಿ ಧರಾಶಾಯಿಯಾಗಿರುವುದು ಇದೇ ಮೊದಲಾ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ, ಭ್ರಷ್ಟಾಚಾರದ ವಾಸನೆಯೇ ಕಾಣಿಸುತ್ತದೆ.
ಭಾನುವಾರ ಧ್ವಂಸವಾಗಿ ಉರುಳಿದ ಸೇತುವೆಯು ಅಗುವಾನಿ-ಸುಲ್ತಾನ್ಗಂಜ್ ನಡುವೆ ಗಂಗಾನದಿಗೆ ಕಟ್ಟತಾಗಿತ್ತು. ಇದೇ ಸೇತುವೆಯು 14 ತಿಂಗಳ ಹಿಂದೆಯೇ ಉರುಳಿಬಿದ್ದಿತ್ತು. ಅದನ್ನು ಬಿಹಾರ ಸರಕಾರ ಪುನಃ ನಿರ್ಮಿಸಿತ್ತು. ಭಾನುವಾರ ಅದು ಕೂಡ ಉರುಳಿಬಿದ್ದಿದೆ.
ಬಿಹಾರದಲ್ಲಿ ಕಳೆದ ಒಂದು ವರ್ಷದಲ್ಲಿ ಕನಿಷ್ಠ 8 ಸೇತುವೆಗಳು ಕುಸಿದುಬಿದ್ದಿವೆ ಎಂಬುದು ಸ್ವಲ್ಪ ಹಿನ್ನೋಟ ಹರಿಸಿದಾಗ ತಿಳಿದುಬರುವ ವಿಚಾರ.
- ಪುರ್ನಿಯಾದಲ್ಲಿ ಮೇ 16ರಂದು ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕಾಂಕ್ರಿಟೀಕರಣ ಪೂರೈಸಿದ ನಾಲ್ಕು ಗಂಟೆಗಳಲ್ಲೇ ಉರುಳಿಬಿತ್ತು.
- ಮಾ.19ರಂದು ಸರಣ್ ಎಂಬಲ್ಲಿ ಬ್ರಿಟಿಷರ ಕಾಲದ ರಸ್ತೆ ಸೇತುವೆಯೊಂದು ಓವರ್ಲೋಡೆಡ್ ಟ್ರಕ್ ಹಾದುಹೋದ ಕಾರಣದಿಂದ ಬಿದ್ದಿತ್ತು.
- ಪಟನಾದಲ್ಲಿ ಫೆ.19ರಂದು ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿತ್ತು.
- ಜ.16ರಂದು, ದರ್ಭಾಂಗದಲ್ಲಿ ಓವರ್ಲೋಡೆಡ್ ಟ್ರಕ್ ಹಾದುಹೋದ ಪರಿಣಾಮವಾಗಿ ಉಕ್ಕಿನ ಸೇತುವೆಯು ಉರುಳಿಬಿದ್ದಿತ್ತು.
- 2022ರ ನವೆಂಬರ್ ತಿಂಗಳಲ್ಲಿ ನಳಂದಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿಯಿತು. ಅದರಲ್ಲೊಬ್ಬರು ಮೃತಪಟ್ಟಿದ್ದರು.
- 2022ರ ಜುಲೈ ತಿಂಗಳಲ್ಲಿ ಕಟಿಹಾರ್ ಎಂಬಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದುಬಿತ್ತು.
- 2022ರ ಜೂನ್ ತಿಂಗಳಲ್ಲಿ ಸಹರ್ಸಾ ಸೇತುವೆಯ ಭಾಗವೊಂದು ಕುಸಿಯಿತು.
- 2022ರ ಮೇ ತಿಂಗಳಲ್ಲಿ, ಪಟ್ನಾದ 136 ವರ್ಷದ ಸೇತುವೆಯೊಂದು ಭಾರೀ ಮಳೆಯಿಂದಾಗಿ ಕುಸಿದು ಬಿತ್ತು.
ಹೆಚ್ಚಿನವು ನಿರ್ಮಾಣ ಹಂತದ ಸೇತುವೆಗಳು. ಇದರಲ್ಲಿ ಕಳಪೆ ಸಾಮಗ್ರಿಗಳನ್ನು ಬಳಸಿದ್ದೇ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಕೆಲವು ಸಂದರ್ಭಗಳಲ್ಲಿ ನಿರ್ಮಾಣದ ವಿಧಾನದ ಸಮಸ್ಯೆಯಿಂದಾಗಿಯೇ ಕುಸಿತವಾಯಿತು ಎಂದು ದೂರಲಾಯಿತು.
ಭಾಗಲ್ಪುರದಲ್ಲಿಯೂ ಇದೇ ಕಾರಣದಿಂದ, ನಾವೇ ಅದನ್ನು ಧ್ವಂಸ ಮಾಡಿ ಪುನಃ ರಚಿಸಬೇಕೆಂದಿದ್ದೆವು ಎಂದು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದರು! ಭಾಗಲ್ಪುರದಲ್ಲಿ ಕಳೆದ ಬಾರಿ ಸೇತುವೆ ಕುಸಿತಕ್ಕೆ ಬಲವಾದ ಗಾಳಿ ಬೀಸಿದ್ದೇ ಕಾರಣ ಎಂದು ನೆಪ ಹೇಳಲಾಗಿತ್ತು!
ಪೂರ್ವ ಚಂಪಾರನ್ನಲ್ಲಿ 2020ರಲ್ಲಿ ಸೇತುವೆ ಕುಸಿದಾಗ, ಗಂಡಕಿ ನದಿಯ ಪ್ರವಾಹದ ವೇಗವನ್ನು ಸೇತುವೆ ತಡೆದುಕೊಳ್ಳಲಿಲ್ಲ ಎಂದು ದೂರಲಾಯಿತು.
ಇಷ್ಟೇ ಅಲ್ಲ, 2022ರ ಏಪ್ರಿಲ್ ತಿಂಗಳಲ್ಲಿ, ಸಿನಿಮೀಯ ರೀತಿಯಲ್ಲಿ ಸಾಸರಾಮ್ನಿಂದ ಇಡೀ ಉಕ್ಕಿನ ಸೇತುವೆಯನ್ನೇ ಕಳವು ಮಾಡಿದ್ದರು ಐದು ಮಂದಿ ಸೇರಿಕೊಂಡು! ಅರ್ಥ್ ಮೂವರ್ ಹಾಗೂ ಮೆಟಲ್ ಕಟ್ಟಿಂಗ್ ಗ್ಯಾಸ್ ಟಾರ್ಚ್ಗಳೊಂದಿಗೆ ಬಂದಿದ್ದ ಅವರು, ಮೂರು ದಿನ ಕೆಲಸ ಮಾಡಿ, 60 ಅಡಿ ಉದ್ದ, 12 ಅಡಿ ಎತ್ತರದ ಸೇತುವೆಯನ್ನು ಕತ್ತರಿಸಿ ಗುಜರಿಗೆ ತೆಗೆದುಕೊಂಡು ಹೋಗಿದ್ದರು. ಇದನ್ನು 1976ರಲ್ಲಿ ನಿರ್ಮಿಸಲಾಗಿತ್ತು.

Average Rating