ಡೆಹ್ರಾಡೂನ್: ದಟ್ಟಣೆಯಿರುವ ನಗರಗಳಲ್ಲಿ ಶ್ವಾನ ಪ್ರೇಮಿಗಳು ಪಕ್ಕದ ಮನೆಯವರಿಗೆ ಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ. ನಾಯಿಯನ್ನು ಮನೆಯೊಳಗೆ ಸಾಕಿ, ನಸುಕಿನಲ್ಲಿ ಅಥವಾ ರಾತ್ರಿ – ಯಾರೂ ನೋಡದಿದ್ದಾಗ ಪಕ್ಕದ ಮನೆಯೆದುರು ನಾಯಿ (Dog) ಮಲವಿಸರ್ಜನೆ ಮಾಡುವಂತೆ ಅನುವು ಮಾಡಿಕೊಡುವ, ಇಡೀ ರಾತ್ರಿ ಬೊಗಳುತ್ತಲೇ ಪಕ್ಕದ ಮನೆಯವರಿಗೆ ತೊಂದರೆಯುಂಟು ಮಾಡುವ ನಾಯಿಗಳನ್ನು ಸಾಕುವವರಿಗೆ ಹೊಸ ನಿಯಮ ಬರಲಿದೆ.
ಅದೆಂದರೆ, ನೀವು ನಾಯಿ ಸಾಕುವುದಾದರೆ, ಪಕ್ಕದ ಮನೆಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಒಪ್ಪಿಸಬೇಕು!
ಹೌದು, ಇಂಥದ್ದೊಂದು ಕಾನೂನನ್ನು ಉತ್ತರಾಖಂಡ ರಾಜ್ಯದ ಉದ್ಧಾಮ ಸಿಂಗ್ ನಗಪ ಜಿಲ್ಲೆಯ ರುದ್ರಪುರ ನಗರಪಾಲಿಕೆ ಜಾರಿಗೆ ತರಲು ನಿರ್ಧರಿಸಿದೆ.
ಸಾಕುಪ್ರಾಣಿಯ ಜವಾಬ್ದಾರಿಯುತ ಮಾಲೀಕತ್ವವನ್ನು ಪ್ರೇರೇಪಿಸುವ ಹಾಗೂ ಸಾಮುದಾಯಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ನಾಯಿಗಳ ಪರವಾನಗಿ ಕಾಯ್ದೆ 2022 ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಈ ಕಾಯ್ದೆಯ ಪ್ರಧಾನ ವಿಧಿಗಳಲ್ಲೊಂದು ಎಂದರೆ, ನಾಯಿ ಸಾಕುವವರು ನೆರೆಹೊರೆಯವರಿಂದ NOC (ನಿರಾಕ್ಷೇಪಣಾ ಪ್ರಮಾಣಪತ್ರ) ಪಡೆದುಕೊಳ್ಳಬೇಕು ಎಂಬುದು. ಇದರ ಅನುಸಾರ, ನಾಯಿ ಮಾಲೀಕರು ನಾಯಿ ಸಾಕಲು ಪರವಾನಗಿ ಪಡೆಯಬೇಕು. ಹೊಸದಾಗಿ ನೋಂದಾಯಿಸುವವರು ಮತ್ತು ಈಗಾಗಲೇ ನೋಂದಾಯಿಸಿದವರೂ ಎನ್ಒಸಿ ಸಲ್ಲಿಸಬೇಕಾಗುತ್ತದೆ. ನೆರೆಮನೆಯವರು ಆಕ್ಷೇಪ ಎತ್ತಿದರೋ, ನಾಯಿ ಸಾಕುವಂತಿಲ್ಲ!
ಈಗಿರುವ ನಿಯಮದ ಪ್ರಕಾರ, ನಾಯಿ ಸಾಕಬೇಕಿದ್ದರೆ ಪ್ರತಿವರ್ಷವೂ ₹500 ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತಾಪಿತ ನಿಯಮಾವಳಿಯಲ್ಲಿ ವಿಳಂಬ ನವೀಕರಣಕ್ಕೆ ₹100 ದಂಡ ಹಾಗೂ 3 ತಿಂಗಳಿಗಿಂತ ಹೆಚ್ಚು ವಯಸ್ಸಿನ ನಾಯಿಗಳನ್ನು ನೋಂದಾಯಿಸದಿದ್ದರೆ ₹700 ದಂಡ ವಿಧಿಸಲಾಗುತ್ತದೆ. ನಾಯಿಯ ಕುತ್ತಿಗೆಗೆ ಟೋಕನ್ ಪಟ್ಟಿಯನ್ನೂ ಹಾಕಬೇಕಾಗುತ್ತದೆ. ಇಲ್ಲದಿದ್ದರೆ, ನಗರಪಾಲಿಕೆಯೇ ನಾಯಿಗಳನ್ನು ಎಳೆದುಕೊಂಡು ಹೋಗಲಿದೆ. ಈ ಕುರಿತು ಈಗಾಗಲೇ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಹಾಗಂತ,ನೆರೆಕರೆಯವರಿಂದ ನಿರಾಕ್ಷೇಪಣಾ ಪತ್ರ ತರುವ ನಿಯಮ ಮಾಡಿರುವುದರಲ್ಲಿ ಉತ್ತರಾಖಂಡವೇ ಮೊದಲ ರಾಜ್ಯವೇನಲ್ಲ. 2016ರಲ್ಲೇ ಕೇರಳದಲ್ಲಿ ಈ ನಿಯಮವಿತ್ತು. ಕೊಚ್ಚಿ ನಗರ ಪಾಲಿಕೆಯು ಕೂಡ, ನಾಯಿ ಸಾಕಬೇಕಿದ್ದರೆ ಪಕ್ಕದ ಮನೆಯವರಿಂದ ನಿರಾಕ್ಷೇಪಣಾ ಪತ್ರ ತರಬೇಕು ಎಂಬ ನಿಯಮವಿತ್ತು. ಅದುವರೆಗೆ ನಾಯಿಗಳ ದೇಹದೊಳಗೆ ಮೈಕ್ರೋಚಿಪ್ ಅಳವಡಿಸಿ, ನೋಂದಾಯಿಸಿಕೊಳ್ಳಬೇಕಿತ್ತು. ಅಲ್ಲಿಗೆ ನಾಯಿಗೆ ಪರವಾನಗಿ ದೊರೆತಂತೆ.
ಇತರರಿಂದ ಭಾರಿ ಪ್ರಮಾಣದಲ್ಲಿ ದೂರುಗಳು ಬಂದ ಬಳಿಕ, ನೆರೆಮನೆಯವರಿಂದ ನಿರಾಕ್ಷೇಪಣಾ ಪತ್ರ ತರಬೇಕು ಎಂದು ನಿಯಮ ಜಾರಿಗೊಳಿಸಲಾಯಿತು.

Average Rating