ನೇಪಾಳದ ಜಾನಕಿ ಹಾಗೂ ಭಾರತದ ಶ್ರೀರಾಮ – ಇವರಿಬ್ಬರ ವೈವಾಹಿಕ ಸಂಬಂಧವೇರ್ಪಟ್ಟು ಯುಗಗಳೇ ಕಳೆದಿವೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಠಾಪನೆಯ ಸಡಗರವಾದರೆ, ಜನಕಪುರಿಯ ಜನರಿಗೆ ತಮ್ಮೂರಿನ ಮಗಳು ಬೆಳಗಿದ ಊರಿಗೆ ಉಡುಗೊರೆ ಒಯ್ಯುವ ಸಂಭ್ರಮ. Ayodhya Ram Mandir ಉದ್ಘಾಟನೆಯ ಸಂದರ್ಭ ಅನೂಹ್ಯ ಅನುಭವವಿದು.
ಶ್ರೀರಾಮನ ಮಡದಿ ಸೀತಾಮಾತೆಯ ಜನ್ಮಸ್ಥಳವಾದ ಜನಕಪುರಿಯಿಂದ ಸುಮಾರು 1,100 ಸಾಲಂಕೃತ ಬುಟ್ಟಿಗಳಲ್ಲಿ ಉಡುಗೊರೆ ವಸ್ತುಗಳು ಇದೀಗ ಸುಮಾರು 458 ಕಿ.ಮೀ. ಕ್ರಮಿಸಿ ಭಾರತದ ಅಯೋಧ್ಯೆ ತಲುಪಿವೆ. 2024ರ ಜನವರಿ 22ರಂದು ಶ್ರೀರಾಮ ಮಂದಿರದ ಉದ್ಘಾಟನೆ, ಶ್ರೀರಾಮ ಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಇಡೀ ಜಗತ್ತೇ ಇದಿರು ನೋಡುತ್ತಿರುವಂತೆಯೇ, ಭಾರತದ ದೈವೀಕ ವರ ಮಹಾಶಯ ಮತ್ತು ನೇಪಾಳದ ಅಳಿಯ ಶ್ರೀರಾಮನಿಗೆ ಅಲ್ಲಿನ ಜನ ಪ್ರೀತಿಯಿಂದ ಉಡುಗೊರೆ ಹೊತ್ತು ತಂದಿದ್ದಾರೆ. ಈ ಮೂಲಕ ರಾಮಾಯಣ ಕಾಲದ ಈ ದೈವೀಕ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ ಉಭಯ ಊರುಗಳ ಜನ.
ಈ ಉಡುಗೊರೆ ಬುಟ್ಟಿಗಳನ್ನು ಭಾರ್ (Bhar) ಎಂದು ಕರೆಯಲಾಗುತ್ತದೆ. ಹಿಂದೂ ವೈವಾಹಿಕ ವಿಧಿಗಳಿಗೆ ಅತ್ಯಗತ್ಯವಾಗಿರುವ ಚಿನ್ನ, ಬೆಳ್ಳಿಯ ಆಭರಣಗಳು, ಧಾನ್ಯಗಳು ಹಾಗೂ ಪ್ರಸಾಧನ ಸಾಮಗ್ರಿಗಳಿವೆ. ಜೊತೆಗೆ, ಸೀತೆಯ ತವರು ಮಿಥಿಲೆಯ ವಿಶಿಷ್ಟ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳೂ ಇವೆ.
ಸುಮಾರು 3000ದಷ್ಟಿದ್ದ ಈ ಉಡುಗೊರೆಗಳನ್ನು ಹೊತ್ತುಕೊಂಡ ಸುಮಾರು 500 ಜನರಿರುವ ತಂಡವು ಜ.7ರಂದು ಗಡಿ ದಾಟಿ ಬಂದು ಆಯೋಧ್ಯೆಯ ಶ್ರೀರಾಮ ಮಂದಿರದ ಅಧಿಕಾರಿಗಳಿಗೆ ಈ ಉಡುಗೊರೆಗಳನ್ನು ಹಸ್ತಾಂತರಿಸಿದೆ. ನೇಪಾಳದ ಜನಕಪುರಿಯ ರಾಮ ಜಾನಕಿ ಮಂದಿರದ ಅರ್ಚಕ ರಾಮ ರೋಶನ್ ದಾಸ್ ನೇತೃತ್ವದ ಈ ತಂಡವನ್ನು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಜ.7ರಂದು ಅಯೋಧ್ಯೆಯ ಕರಸೇವಕಪುರಂನಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ಮಿಥಿಲೆಯ ಸಾಂಪ್ರದಾಯಿಕ ಕಲಾವಿದರು ದಾರಿಯುದ್ದಕ್ಕೂ ಕುಣಿತ, ಭಜನೆ ಮೂಲಕ ಜನಕಪುರದಿಂದ ಅಯೋಧ್ಯೆಗೆ ಸಾಗುವ ಮಾರ್ಗವನ್ನು ಕ್ರಮಿಸಿದ್ದಾರೆ. ಪ್ರಭು ಶ್ರೀರಾಮಚಂದ್ರ ಹಾಗೂ ಸೀತಾಮಾತೆಯನ್ನು ಭಜಿಸುತ್ತಾ ಅವರು ಅಯೋಧ್ಯೆಗೆ ತಲುಪಿದ್ದಾರೆ. ಈ ಯಾತ್ರೆಯಲ್ಲಿ ಸುಮಾರು 30 ಕಾರುಗಳು ಹಾಗೂ 5 ದೊಡ್ಡ ಬಸ್ಸುಗಳಿದ್ದವು. ಇವನ್ನೆಲ್ಲ ಪ್ರಾಯೋಜಿಸಿರುವುದು ವಿಶ್ವ ಹಿಂದೂ ಪರಿಷತ್ ಹಾಗೂ ನೇಪಾಳದ ಜನಕಪುರಿ ಧಾಮದ ರಾಮ ಜಾನಕಿ ಮಂದಿರದ ಭಕ್ತರು.
ಈ ಉಡುಗೊರೆಯು ಧಾರ್ಮಿಕ, ಕೌಟುಂಬಿಕ ಸಂಬಂಧವಷ್ಟೇ ಅಲ್ಲದೆ, ಭಾರತ – ನೇಪಾಳ ನಡುವಿನ ನಾಗರಿಕತೆಯ ಬಾಂಧವ್ಯದ ಪ್ರತೀಕವಾಗಿಯೂ ಗಮನ ಸೆಳೆಯುತ್ತದೆ. ಉಭಯ ರಾಷ್ಟ್ರಗಳ ನಡುವೆ ರಾಮಾಯಣ ಕಾಲದಿಂದಲೂ ಇದ್ದ ಸಂಬಂಧವನ್ನು ಇದು ಮತ್ತಷ್ಟು ಗಟ್ಟಿಯಾಗಿಸಿದೆ. ಅತ್ತ ನೇಪಾಳದ ಜನಕಪುರಿಯೂ ಸೀತೆಯಿಂದಾಗಿ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದ್ದರೆ, ಅಯೋಧ್ಯೆ – ಮಿಥಿಲೆ ನಡುವಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ದೊರೆಯಲಿದೆ.

Average Rating