
ನವದೆಹಲಿ: ಜಿಎಸ್ಟಿ ಎಂದರೆ ಸರಕು ಮತ್ತು ಸೇವಾ ತೆರಿಗೆಗಳ ವಿಭಾಗದಲ್ಲಿ ಕ್ರಾಂತಿಕಾರಿ ಸುಧಾರಣೆಗೆ ಮುಂದಾಗಿರುವ ನರೇಂದ್ರ ಮೋದಿ ಸರಕಾರವು, ‘ಆರೋಗ್ಯವಂತ ಭಾರತ’ ದೃಷ್ಟಿಕೋನದಲ್ಲಿ ತೆರಿಗೆಗಳನ್ನು ಸರಳೀಕರಿಸಿರುವುದು ಇಲ್ಲಸಲ್ಲದ ಕಾಯಿಲೆಗಳು, ದಿಢೀರ್ ಸಾವುಗಳಿಂದ ತತ್ತರಿಸಿರುವ ಜನಸಾಮಾನ್ಯರ ಮೊಗದಲ್ಲಿ ಮಂದಹಾಸ ತಂದಿದೆ.
ಆರೋಗ್ಯವಂತರಾಗಿರಬೇಕಿದ್ದರೆ ದೈಹಿಕ ವ್ಯಾಯಾಮದ ಜೊತೆಗೆ, ಜಂಕ್ ಫುಡ್ಗಳನ್ನು ಸೇವಿಸುವುದನ್ನೇ ಬಿಡಬೇಕು ಎಂಬ ಕಾಮನ್ ಸೆನ್ಸ್ ಇದೀಗ ಎಲ್ಲರಲ್ಲಿಯೂ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ, ಆಹಾರದಲ್ಲಿ ಬಳಸುವ ಸನ್ಫ್ಲವರ್ ಆಯಿಲ್ ಮುಂತಾದ ಅಡುಗೆ ಎಣ್ಣೆಗಳ ಬಳಕೆಯನ್ನು ಕನಿಷ್ಠ ಶೇ.10ರಷ್ಟು ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಲೇ ಬಂದಿದ್ದಾರೆ. ಅವರ ಈ ಸಂಕಲ್ಪಕ್ಕೆ ಪೂರಕವಾಗಿ ಜಿಎಸ್ಟಿ ತೆರಿಗೆಗಳಲ್ಲಿಯೂ ಸುಧಾರಣೆಗಳನ್ನು ಮಾಡಲಾಗಿದೆ.
ಹೀಗಾಗಿ, ಆರ್ಥಿಕತೆಯನ್ನು ಸುಧಾರಿಸುವುದಕ್ಕಷ್ಟೇ ಈ ಜಿಎಸ್ಟಿ ಬದಲಾವಣೆಯು ಸೀಮಿತವಾಗಿಲ್ಲ, ದೇಹದ ಮತ್ತು ಈ ಮೂಲಕ ದೇಶದ ಸ್ವಾಸ್ಥ್ಯ ಕಾಪಾಡುವುದಕ್ಕೆ, ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ಸಂಕಲ್ಪಿಸಿದ್ದ ಸ್ವಸ್ಥ ಭಾರತಕ್ಕೆ ಪೂರಕವಾಗಿದೆ.
ಮುಖ್ಯವಾಗಿ ಸ್ಥೂಲಕಾಯ ಎಂಬುದು ಕಾಯಿಲೆಯಾಗಿಯೇ ಕಾಡುತ್ತಿದೆ. ಇದನ್ನು ನಿಯಂತ್ರಿಸಲು ನೆರವಾಗುವ ಫಿಟ್ನೆಸ್ ಮತ್ತು ಸ್ವಾಸ್ಥ್ಯದ ಉತ್ಪನ್ನಗಳಿಗೆ ಹಾಗೂ ಸೇವೆಗಳಿಗೆ ತೆರಿಗೆಯನ್ನು ಕನಿಷ್ಠ ಮಟ್ಟಕ್ಕೆ ಎಂದರೆ ಶೇ.5ಕ್ಕೆ ಇಳಿಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ, ಆರೋಗ್ಯಕ್ಕೆ ಮತ್ತು ದೈಹಿಕ ಸ್ವಾಸ್ಥ್ಯ ವೃದ್ಧಿಗೆ ಜನ ಸಾಮಾನ್ಯರು ಸಾಮಾನ್ಯವಾಗಿ ಬಳಸುವ ಜಿಮ್ಗಳು, ಯೋಗ ಕೇಂದ್ರಗಳು, ಸಲೂನ್ಗಳು, ಸೈಕಲ್ಗಳು – ಈ ಸೇವೆಗಳ ತೆರಿಗೆ ಶೇ.18 ಇದ್ದದ್ದನ್ನು ಶೇ.5ಕ್ಕೆ ಇಳಿಸಲಾಗಿದೆ. ಅಲ್ಲದೆ, ಆರೋಗ್ಯ ಸಂಬಂಧಿತ ಹಲವಾರು ಇತರ ವಸ್ತುಗಳ ತೆರಿಗೆಯನ್ನೂ ಕಡಿಮೆ ಮಾಡಲಾಗಿದೆ.
ದೈನಂದಿನ ನಮ್ಮ ದೇಹಕ್ಕೆ ಬಳಸುವ ಹೇರ್ ಆಯಿಲ್, ಸಾಬೂನು, ಶಾಂಪೂ, ಟೂತ್ ಬ್ರಶ್, ಟೂತ್ ಪೇಸ್ಟ್ ಮುಂತಾದವುಗಳ ತೆರಿಗೆಯನ್ನು ಕೂಡ ಶೇ.5ರ ವ್ಯಾಪ್ತಿಗೆ ತರಲಾಗಿದೆ. ಹಿಂದೆ ಇವುಗಳ ಮೇಲಿನ ತೆರಿಗೆ ಶೇ.18 ಅಥವಾ ಶೇ.12ರಷ್ಟಿತ್ತು.
ಆರೋಗ್ಯಕರ ಆಹಾರ ಸೇವನೆಗೆ ಪೂರಕವಾಗಿ, ಹಲವಾರು ಆಹಾರ ಉತ್ಪನ್ನಗಳ ತೆರಿಗೆಯನ್ನೂ ಶೇ.5ರ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಆರೋಗ್ಯಕರ ಡಯಟ್ ಮತ್ತಷ್ಟು ಅಗ್ಗವಾಗಿದೆ. ಅಂತೆಯೇ, ಇಡೀ ದೇಶವನ್ನು ಕಾಡುತ್ತಿರುವ ಮಧುಮೇಹಕ್ಕೆ (ಸಕ್ಕರೆ ಕಾಯಿಲೆ) ಅಗತ್ಯವಿರುವ ಪಥ್ಯಾಹಾರಗಳ ಮೇಲಿನ ಸುಂಕವನ್ನೂ ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ.
ಅದೇ ರೀತಿ, ಸ್ಥೂಲಕಾಯ, ಸಕ್ಕರೆ ಕಾಯಿಲೆ, ಹೃದಯದ ಕಾಯಿಲೆ ಮುಂತಾದವುಗಳನ್ನು ಪ್ರಚೋದಿಸುವ ಸಕ್ಕರೆ, ರುಚಿಗಾಗಿ ಬಳಸುವ ರಾಸಾಯನಿಕಗಳು ಅಥವಾ ಕಾರ್ಬೊನೇಶನ್ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.40ಕ್ಕೆ ಏರಿಸಲಾಗಿದೆ. ಇದು ಜನಸಾಮಾನ್ಯರ ಕೈಗೆಟುಕದಂತೆ ಮಾಡುವ ಮೂಲಕ ಅವರ ಆರೋಗ್ಯ ರಕ್ಷಣೆಗೆ ಸಹಾಯಕ.
ಹಿಂದಿನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥೂಲಕಾಯ ಅಥವಾ ಬೊಜ್ಜು ಕಾಯಿಲೆಯ ಬಗ್ಗೆ ಪ್ರಸ್ತಾಪಿಸಿ, ಮುಂಬರುವ ವರ್ಷಗಳಲ್ಲಿ ಮೂರರಲ್ಲಿ ಒಬ್ಬರು ಈ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಎಚ್ಚರಿಸಿದ್ದರು. ಇದಕ್ಕಾಗಿಯೇ ಶೇ.10ರಷ್ಟು ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡುತ್ತಾ ಬನ್ನಿ ಎಂದು ತಮ್ಮ ದೇಶದ ಪ್ರಜೆಗಳಿಗೆ ಕರೆ ನೀಡಿದ್ದರು. ಇದಕ್ಕೂ ಹಿಂದೆಯೂ ಮಾರ್ಚ್ ತಿಂಗಳಲ್ಲಿ ಮೋದಿ ಅವರು, ಸಮೀಕ್ಷಾ ವರದಿಯೊಂದನ್ನು ಉಲ್ಲೇಖಿಸಿ, 2050ರ ವೇಳೆಗೆ ದೇಶದ ಜನಸಂಖ್ಯೆಯ ಶೇ.44ರಷ್ಟು ಮಂದಿ ಬೊಜ್ಜು ಕಾಯಿಲೆಪೀಡಿತರಾಗಿರುತ್ತಾರೆ ಎಂದು ಎಚ್ಚರಿಸಿದ್ದರು. ಇದು ಅಪಾಯಕಾರಿ ಮತ್ತು ಆಘಾತಕಾರಿ ವಿಚಾರ ಎಂದು ಜನರ ಗಮನ ಸೆಳೆದಿದ್ದರು.

Average Rating