ಬೆಂಗಳೂರು: ಮಂಗಳವಾರ ರಾತ್ರಿ ಮನೆಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯ ಎಸಗಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ದಾಂಧಲೆಯನ್ನು, ತಮ್ಮದೇ ಪಕ್ಷದ ಒಬ್ಬ ದಲಿತ ಶಾಸಕರ ಮನೆಯ ಮೇಲಾದ ದಾಳಿಯನ್ನು ಕಾಂಗ್ರೆಸ್ ಖಂಡಿಸದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ಕಂಡುಬಂದಿದೆ. ಈ ನಡುವೆ, ಯೋಗಿ ಸರ್ಕಾರದಂತೆ, ದಂಗೆಕೋರರಿಂದಲೇ ನಷ್ಟ ಭರ್ತಿ ಮಾಡಿಸಿಕೊಡುವಂತೆಯೂ ಕೂಗು ಕೇಳಿಬಂದಿದೆ.
ಕಾಂಗ್ರೆಸ್ನ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ಕಲ್ಲು ತೂರಿ, ಬೆಂಕಿ ಹಚ್ಚುವ ಪ್ರಯತ್ನವೂ ನಡೆದಿದೆ. ಪೊಲೀಸ್ ಠಾಣೆಯಲ್ಲೂ ದಾಂಧಲೆ ನಡೆಸಿ, ವಾಹನಗಳನ್ನು ಪುಡಿಗಟ್ಟಲಾಗಿದೆ. ಇದು ದೊಂಬಿಯಾಗಿದ್ದು, ಇದನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆಯೇ ಎಂದು ಪ್ರಶ್ನಿಸಿರುವ ಸಂತೋಷ್ ಕುಮಾರ್, ತುಷ್ಟೀಕರಣವೇ ಪಕ್ಷದ ಅಧಿಕೃತ ನೀತಿಯೇ ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಉತ್ತರ ಪ್ರದೇಶದ ಆದಿತ್ಯ ಯೋಗಿ ಸರ್ಕಾರ ಕೈಗೊಂಡ ಕ್ರಮವನ್ನೂ ಟ್ವೀಟಿಗರು ನೆನಪಿಸಿಕೊಂಡಿದ್ದಾರೆ. ಸಾರ್ವಜನಿಕ ಹಾಗೂ ಸರ್ಕಾರಿ ಸೊತ್ತುಗಳನ್ನು ಸುಟ್ಟು ಹಾನಿಗೆಡಹುವ ದೊಂಬಿಕೋರರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ನಷ್ಟ ತುಂಬಿಸಿಕೊಡುವ ಕ್ರಮವನ್ನೇಕೆ ಕರ್ನಾಟಕದಲ್ಲಿಯೂ ಅನುಷ್ಠಾನಗೊಳಿಸಬಾರದು ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕ್ರಿಮಿನಲ್ಗಳನ್ನು ಬಂಧಿಸಿ, ಕಠಿಣವಾದ ಕ್ರಿಮಿನಲ್ ಕೇಸು ದಾಖಲಿಸಿ, ದೊಂಬಿಕೋರರಿಂದಲೇ ನಷ್ಟ ಭರ್ತಿ ಮಾಡಿಸಿಕೊಳ್ಳಿ. ತೊಂದರೆಗೀಡಾದವರಿಗೆ ನಷ್ಟ ಪರಿಹಾರ ನೀಡಬೇಕಿದ್ದರೆ ಅದನ್ನೂ ದೊಂಬಿಕೋರರಿಂದಲೇ ವಸೂಲಿ ಮಾಡಿದರೆ, ಮುಂದೆಂದೂ ಇಂಥ ಕೃತ್ಯಗಳು ನಡೆಯಲಾರವು ಎಂದು ಟ್ವೀಟಿಗರು ಸಲಹೆ ನೀಡಿದ್ದಾರೆ.
ಸಮಾಜ ಘಾತುಕ ಶಕ್ತಿಗಳನ್ನು ಬೆಳೆಸಿರುವುದೇ ಕಾಂಗ್ರೆಸ್ ಮತ್ತಿತರ ಸಿಕ್ಯುಲರ್ ಪಕ್ಷಗಳು. ಒಬ್ಬ ದಲಿತ ಶಾಸಕರೊಬ್ಬರ ಮನೆಯ ಮೇಲೆ ದಾಳಿ ನಡೆದಾಗ ಜೈಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳು ಧ್ವನಿಯೆತ್ತುವುದಿಲ್ಲವೇಕೆ? ಎಂಬುದಾಗಿಯೂ ಸಾಕಷ್ಟು ಮಂದಿ ಟ್ವೀಟ್ ಮಾಡಿದ್ದಾರೆ.

Average Rating