ಎಪ್ಪತ್ತ ನಾಲ್ಕನೇ ಸ್ವಾತಂತ್ರ್ಯೋತ್ಸವದ ದಿನಕ್ಕೆ ವಿಶೇಷತೆಯಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರತೆ ಅಂದರೆ ಸ್ವಾವಲಂಬನೆಯತ್ತ ಭಾರತವು ದಿಟ್ಟ ಹೆಜ್ಜೆ ಇರಿಸಬೇಕು, ಇದಕ್ಕಾಗಿ ಭಾರತೀಯರೆಲ್ಲರೂ ಕೈಜೋಡಿಸಬೇಕು ಅಂತ ಸಂದೇಶ ರವಾನಿಸಿದ್ದಾರೆ.
ಹೌದು, ಅವರದೇ ಮಾತುಗಳನ್ನು ಕೇಳಿದರೆ, ಮಿಲೇನಿಯಲ್ಸ್ ಅಂತ ಕರೆಸಿಕೊಳ್ಳುವ ನಮಗೆ, ನಮ್ಮ ತಂದೆ-ತಾಯಿ ಅಥವಾ ಯಾವುದೇ ಹಿರಿಯರೂ ಹೇಳುತ್ತಿದ್ದುದು ಒಂದೇ ಮಾತು – ನಿಮ್ಮ ಕಾಲಿನಲ್ಲಿ ನೀವು ನಿಲ್ಲುವಂತಾಗಬೇಕು, ಬೇರೆಯವರೆದುರು ಕೈ ಚಾಚುವಂತಾಗಬಾರದು. ಏನಿದು?
ಇದುವೇ ಆತ್ಮನಿರ್ಭರತೆ. ಅಷ್ಟೇ. ಇದನ್ನೇ ಸ್ವಾವಲಂಬನೆ ಅನ್ನುವುದು. ನಮ್ಮ ಕಾಲಲ್ಲೇ ನಾವು ನಿಲ್ಲುವ ಬಗ್ಗೆ ಪ್ರತಿಯೊಬ್ಬರೂ ಕೈಜೋಡಿಸಿದರೆ, ಭಾರತವೇ ತನ್ನ ಕಾಲ ಮೇಲೆ ತಾನೇ ಗಟ್ಟಿಯಾಗಿ, ಎದೆ ತಟ್ಟಿಕೊಂಡು ನಿಲ್ಲಬಲ್ಲುದು. ಇಂಥದ್ದೊಂದು ಆತ್ಮಶಕ್ತಿ ನೀಡುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೆಂಪುಕೋಟೆಯಿಂದ 7ನೇ ಬಾರಿ ತ್ರಿವರ್ಣ ಧ್ವಜ ಹಾರಿಸುತ್ತಾ, ಭಾರತೀಯರ ಆತ್ಮಪ್ರಜ್ಞೆಯನ್ನು ಜಾಗೃತಿಗೊಳಿಸಿದ್ದಾರೆ.
ಇದೇ ದಿಸೆಯಲ್ಲಿ ನಾವು ಒಂದಿಷ್ಟು ಸ್ನೇಹಿತರು, ಸ್ನೇಹಿತೆಯರು ಸೇರಿಕೊಂಡು ಜನರಿಗೆ ಒಳ್ಳೆಯ ಕೆಲಸಗಳನ್ನು, ಒಳ್ಳೆಯ ಬೆಳವಣಿಗೆಗಳನ್ನು ತಿಳಿಸಿಕೊಡುತ್ತಾ, ತಪ್ಪು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ಕಹಳೆಯೂದುವ ಉಪಯುಕ್ತ ಕೆಲಸವನ್ನು ಮಾಡಲು ನಿರ್ಧರಿಸಿದ ಪರಿಣಾಮ ಹುಟ್ಟಿಕೊಂಡಿದ್ದೇ ಐಡೆಫೀ ಡಾಟ್ ಇನ್.
ಅಪಪ್ರಚಾರಗಳನ್ನೆಲ್ಲ ದೂರೀಕರಿಸಿ, ಸತ್ಯವೇನು ಎಂಬುದನ್ನು ಜನತೆಯ ಮುಂದಿಡುವ ಪ್ರಯತ್ನವಿದು. ಐಡೆಫೀ ಎಂದರೆ, ಮಾಮೂಲಿಯಾಗಿ ಎಡ ಚಿಂತನೆ, ಬಲ ಚಿಂತನೆ ಮುಂತಾದವುಗಳಿಂದ ‘ದಾರಿ ತಪ್ಪುತ್ತಿರುವ ಮಾಧ್ಯಮ ಉದ್ಯೋಗದ ಈ ಪ್ರಕ್ರಿಯೆಯನ್ನು ನಾನು ಎದುರು ಹಾಕಿಕೊಳ್ಳುತ್ತೇನೆ’ ಎಂಬರ್ಥವೂ ಹೌದು. I defy the normal media procedures of aligning left or right. ಒಂದು ರೀತಿಯಲ್ಲಿ ನಾವು ರೈಟಿಸ್ಟ್ಗಳು. ಅಂದರೆ ರೈಟ್ ಆಗಿರುವುದನ್ನಷ್ಟೇ ತಿಳಿಸುವವರಷ್ಟೇ.
ಈಗ ಸಿಕ್ಯುಲರ್ ಎಂದು ಕರೆಸಿಕೊಳ್ಳುವ ಸೆಕ್ಯುಲರ್ಗಳಂತಹಾ ಎಡಬಿಡಂಗಿಗಳೂ ನಾವಾಗುವುದಿಲ್ಲ. ಸೆಕ್ಯುಲರ್ ಎಂದರೇನು? ತನ್ನ ಧರ್ಮವನ್ನು ಪ್ರೀತಿಸುವವನು, ಆದರೆ ಪರ ಧರ್ಮವನ್ನು ನಿಂದಿಸದವನು ಅಂತ ನಾವು ಈಗಿನ ಪರಿಸ್ಥಿತಿಯಲ್ಲಿ ವ್ಯಾಖ್ಯಾನಿಸಲೇಬೇಕಾಗುತ್ತದೆ. ವಾಸ್ತವದಲ್ಲಿ ಅದು ಜಾತಿ ಭೇದವಿಲ್ಲದ ಮನೋಭಾವ ಎಂದಷ್ಟೇ. ಮನುಷ್ಯ ಜನಾಂಗದಲ್ಲಿರೋದು ಎರಡೇ ಜಾತಿ, ಒಂದು ತಪ್ಪು ಮಾಡುವವರದು ಮತ್ತೊಂದು ಸರಿಯನ್ನೇ ಮಾಡುವವರದು ಎಂಬ ನಂಬಿಕೆ ನಮ್ಮ ಸಂಪಾದಕೀಯ ಟೀಂನದು.
ಈಗಿನ ಸಮಾಜ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಜಾತ್ಯತೀತರು ಎಂದು ಹೇಳಿಕೊಳ್ಳುವವರು ಒಂದು ಜಾತಿ, ವರ್ಗ ಅಥವಾ ಸಮುದಾಯವನ್ನು ಮಾತ್ರ ಓಲೈಸುತ್ತಿರುತ್ತಾರೆ. ಏನೇ ತಪ್ಪು ಮಾಡಿದರೂ, ಬೆಂಕಿಯಿಕ್ಕಿದರೂ, ಆಸ್ತಿಪಾಸ್ತಿ ಧ್ವಂಸ ಮಾಡಿದರೂ, ಅವರು ಶಾಂತಿಪ್ರಿಯರು, ಅಮಾಯಕರು ಎಂದು ಬೆಂಬಲಕ್ಕೆ ನಿಲ್ಲುತ್ತಾರೆ. ಹಾಗಿದ್ದರೆ ಜಾತ್ಯತೀತತೆ ಎಲ್ಲಿಗೆ ಬಂತು? ಹಿಂಸಾಚಾರಕ್ಕೆ ಧರ್ಮವಿಲ್ಲ. ಹಿಂಸೆ, ದೊಂಬಿ, ಗಲಭೆಗೆ ಯಾರೇ ಇಳಿದರೂ ಅವರು ಶಿಕ್ಷಾರ್ಹರು. ಇದರಲ್ಲಿ ಜಾತಿ, ಧರ್ಮ ನೋಡಬಾರದು ಎಂಬ ಮೂಲಭೂತ ನಿಯಮವನ್ನೇ ಇವರು ಮುರಿಯುತ್ತಾರೆ.
ಅದೇ ರೀತಿ, ಈ ರೀತಿಯ ಹಿಂಸಾಚಾರವನ್ನು ವಿರೋಧಿಸುವವರಿಗೆ; ಕಾನೂನು ಕೈಗೆತ್ತಿಕೊಳ್ಳದೆ, ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು, ನೆಲದ ಕಾನೂನುರೀತ್ಯಾ ಕ್ರಮಕ್ಕೆ ಮುಂದಾಗುವವರಿಗೆ ‘ಕೋಮುವಾದಿ’ಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ನಿಜವಾಗಿ ಜಾತ್ಯತೀತರು ಅಂತ ಕರೆಸಿಕೊಳ್ಳುವವರು ಕೋಮುವಾದಿಗಳಾಗಿರುತ್ತಾರೆ; ಅವರ ಒಂದು ಬೆರಳು ಮತ್ತೊಬ್ಬರತ್ತ ತೋರಿಸುತ್ತಿದ್ದರೆ, ಉಳಿದ ನಾಲ್ಕೂ ಬೆರಳುಗಳು ತಮ್ಮತ್ತವೇ ಮುಖ ಮಾಡಿರುತ್ತವೆ ಎಂಬುದನ್ನು ಅರಿಯದವರು ಅವರು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸತ್ಯ ಯಾವುದು ಮಿಥ್ಯೆ ಯಾವುದು, ಕಾಳು ಯಾವುದು ಜೊಳ್ಳು ಯಾವುದು ಎಂಬುದನ್ನು ಮುಂದಿಡುವ ಪ್ರಯತ್ನ ಈ “ಟೀಂ ಐಡೆಫೀ”ಯದು.
ಸಾಧ್ಯವಾದಷ್ಟೂ ಧನಾತ್ಮಕ ಸುದ್ದಿಗಳಿಗೆ ಇಲ್ಲಿ ಆದ್ಯತೆ. ಕೆರಳಿಸುವುದಿಲ್ಲ, ಸತ್ಯ ಮುಂದಿಡುತ್ತೇವೆ ಎಂಬ ವಾಗ್ದಾನದೊಂದಿಗೆ, 15 ಆಗಸ್ಟ್ 2020ರ 74ನೇ ಸ್ವಾತಂತ್ರ್ಯೋತ್ಸವದ ಈ ಶುಭವಸರದಲ್ಲಿ ಐಡೆಫೀಯನ್ನು ಓದುಗರ ಮುಂದಿಡುತ್ತಿದ್ದೇವೆ.
ಈ ಮಗುವನ್ನು ಮಡಿಲಲ್ಲಿರಿಸಿಕೊಂಡು ಲಾಲಿಸಿ, ಪಾಲಿಸಿ, ಪೋಷಿಸಿ; ತಪ್ಪಿದಾಗ ಚಿವುಟಿ ಬುದ್ಧಿ ಹೇಳಿ, ಬೆಳೆಸಿ. ಉತ್ತಮ ಸಂಸ್ಕಾರ ಕೊಡಿಸಿ, ಸಮಾಜದ ಆಸ್ತಿಯನ್ನಾಗಿಸುವ ಹೊಣೆ ಓದುಗ ದೊರೆಗಳದು. ಇಲ್ಲಿ ಕ್ಷಣ ಕ್ಷಣದ ತಾಜಾ ಸುದ್ದಿಯನ್ನು ನೀಡುವ ಧಾವಂತವಿರುವುದಿಲ್ಲ, ಉತ್ಪ್ರೇಕ್ಷೆ ಇರುವುದಿಲ್ಲ; ಆದರೆ ಓದಿದ ಮನಸ್ಸುಗಳಿಗೆ ಸಂತೃಪ್ತಿ, ಆತ್ಮವಿಶ್ವಾಸ ಹಾಗೂ ಧನಾತ್ಮಕ ಭಾವನೆ ತರುವ ಪ್ರಯತ್ನವಿರುತ್ತದೆ.
ಕೊರೊನಾ ಸಂಕಷ್ಟದ ಈ ಕಾಲದಲ್ಲಿ, ಆತ್ಮನಿರ್ಭರತೆ ಅಂದರೆ ಸ್ವಾವಲಂಬನೆಯ ಉತ್ತೇಜನದ ಗುರಿಯೊಂದಿಗೆ ಅತ್ಯಂತ ಸರಳ ಸಮಾರಂಭದಲ್ಲಿ ಐಡೆಫೀಡಾಟ್ಇನ್ ತಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವೇ ಬಿಡುಗಡೆಗೊಳಿಸಿದೆ ಎಂಬ ನಂಬಿಕೆಯೊಂದಿಗೆ, ಎಲ್ಲರಿಗೂ 74ರ ಸ್ವಾತಂತ್ರ್ಯೋತ್ಸವದ ಶುಭಕಾಮನೆಗಳನ್ನು ಕೋರುತ್ತಾ,
ನಿಮ್ಮೆಲ್ಲರ ಆಶೀರ್ವಾದದ ನಿರೀಕ್ಷೆಯಲ್ಲಿ
‘ಟೀಂ ಐಡೆಫೀ’
15 ಆಗಸ್ಟ್ 2020

Shubhavaagali snehitare.
Nice. ಪ್ರಯತ್ನಕ್ಕೆ ಶುಭವಾಗಲಿ.