ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಕಟ್ಟುನಿಟ್ಟಿನ ಕ್ರಮಗಳಿಗಾಗಿ ಹಲವು ಇಲಾಖೆಗಳಿಗೆ ವರ್ಗವಾದವರು. ಇದೀಗ ರೈಲ್ವೇ ಇಲಾಖೆಯಲ್ಲಿ ಐಜಿಪಿಯಾಗಿರುವ ಅವರು ಹಾಗೂ ಐಎಎಸ್ ಅಧಿಕಾರಿ ಹರ್ಷ ಗುಪ್ತ ಸೇರಿಕೊಂಡು, ಕೋವಿಡ್-19 ಸಂಕಷ್ಟ ಕಾಲದಲ್ಲಿ ಸುಲಿಗೆ ದಂಧೆಗಿಳಿದಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಬಿಸಿಮುಟ್ಟಿಸಿದ್ದಾರೆ, ಮಾತ್ರವಲ್ಲದೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಿರುವ ಕುರಿತು ಸಚಿವ ಕೆ.ಸುಧಾಕರ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ರೂಪಾ, ನಮಗೆ ಜವಾಬ್ದಾರಿ ಕೊಡಿ ಅಂತ ಕೇಳಿಕೊಂಡಿದ್ದರು.
ಇದರ ಅನುಸಾರ, ಆಸ್ಪತ್ರೆಗಳ ಉಸ್ತುವಾರಿಗಾಗಿ ಸರ್ಕಾರವು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳ 7 ತಂಡಗಳನ್ನು ರಚಿಸಿತ್ತು.
ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರ ತಂಡದಲ್ಲಿ ರೂಪಾ ಹಾಗೂ ನೋಡಲ್ ಅಧಿಕಾರಿ ಅಶೋಕ್ ಗೌಡ ಅವರಿದ್ದಾರೆ.
ಸರ್ಕಾರಿ ಆದೇಶದ ಹೊರತಾಗಿಯೂ ಹಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಯದ್ವಾತದ್ವಾ ಶುಲ್ಕ ವಿಧಿಸುತ್ತಿದ್ದವು. ಇದೀಗ 22 ರೋಗಿಗಳಿಂದ ಸುಲಿಗೆ ಮಾಡಿದ್ದ 24 ಲಕ್ಷ ರೂ. ವಾಪಸ್ ಮಾಡುವಂತೆ ಈ ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ.
ರೂಪಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಗಳು ಸರ್ಕಾರಿ ಶುಲ್ಕವನ್ನೇ ಅನುಸರಿಸುವಂತೆ ಮಾಡುವಲ್ಲಿ ತಾನು ಹಾಗೂ ಹರ್ಷ ಗುಪ್ತ ಕ್ರಮ ಕೈಗೊಂಡಿದ್ದೇವೆ. ಎಇಇ ಅಶೋಕ್ ಗೌಡ ಅವರು 22 ರೋಗಿಗಳ ಮಾಹಿತಿ ಪಡೆದುಕೊಂಡಿದ್ದಾರೆ ಮತ್ತು ಈ ರೋಗಿಗಳ ಖಾತೆಗಳಿಗೆ 24 ಲಕ್ಷ ರೂ. ಮರಳಿಸಲಾಗುತ್ತಿದೆ ಎಂದಿದ್ದಾರೆ ರೂಪಾ.
ಸುವರ್ಣ ಆರೋಗ್ಯ ಟ್ರಸ್ಟ್ (SAST) ಗೆ ನಿಗದಿ ಪಡಿಸಿದ ಶುಲ್ಕವನ್ನು ವಿಧಿಸಲಾಗಿದೆ. ಸರ್ಕಾರದ ಶಿಫಾರಸಿನಿಂದ ಬಂದವರಲ್ಲದೆ, ಖಾಸಗಿ ಕೋವಿಡ್ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಆ ಆಸ್ಪತ್ರೆಗಳಿಗೆ ಧನ್ಯವಾದ ಎಂದಿದ್ದಾರೆ ಡಿ.ರೂಪಾ.
ಧನದಾಹಿ ಆಸ್ಪತ್ರೆಗಳಿಗೆ ಅಂಕುಶ ಹಾಕಿ, ಜನ ಸಾಮಾನ್ಯರಿಗೆ ನೆರವು ನೀಡುತ್ತಿರುವ ಡಿ.ರೂಪಾ ಅವರನ್ನು ನೂರಾರು ಮಂದಿ ಟ್ವಿಟರ್ ಖಾತೆಯಲ್ಲಿ ಅಭಿನಂದಿಸಿದ್ದಾರೆ. ಬೆಂಗಳೂರಿಗಷ್ಟೇ ಸೀಮಿತವಾಗದೆ ರಾಜ್ಯದ ವಿವಿಧೆಡೆಯ ಆಸ್ಪತ್ರೆಗಳಲ್ಲಿಯೂ ಇಂಥ ಪರಿಸ್ಥಿತಿ ಇದೆ. ಸರ್ಕಾರ ತಕ್ಷಣ ಗಮನ ಹರಿಸಬೇಕಾಗಿದೆ ಎಂದು ಟ್ವೀಟಿಗರು ಆಗ್ರಹಿಸುತ್ತಿದ್ದಾರೆ.

Average Rating