ನವದೆಹಲಿ: ಸಂಸದರೂ ಸೇರಿದಂತೆ 100ರಷ್ಟು ಕಾಂಗ್ರೆಸ್ ನಾಯಕರು, ಪಕ್ಷದೊಳಗಿನ ವ್ಯವಹಾರಗಳ ಬಗ್ಗೆ ರೋಸಿ ಹೋಗಿದ್ದು, ರಾಜಕೀಯ ನಾಯಕತ್ವ ಬದಲಾಯಿಸುವಂತೆ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಾರದರ್ಶಕ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಆಗ್ರಹಿಸಿದ್ದಾರೆ.
ಈ ಒಂದು ಸುದ್ದಿಯನ್ನು ಕಾಂಗ್ರೆಸ್ನ ಉಚ್ಚಾಟಿತ ಮುಖಂಡ, ಮಾಜಿ ವಕ್ತಾರ ಸಂಜಯ್ ಝಾ ಅವರು ಟ್ವೀಟ್ ಮಾಡುತ್ತಿದ್ದಂತೆಯೇ, ಕಾಂಗ್ರೆಸ್ನೊಳಗೆ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಕಾಂಗ್ರೆಸ್ ವಕ್ತಾರನಾಗಿ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಯಲ್ಲೂ ಕಾಡುತ್ತಿದ್ದ ಸಂಜಯ್ ಝಾ, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಕಳೆದ ತಿಂಗಳು ಲೇಖನವೊಂದನ್ನು ಬರೆದಿದ್ದರು. ಇದರ ಆಧಾರದಲ್ಲಿ ಕಾಂಗ್ರೆಸ್ ಅವರನ್ನು ವಕ್ತಾರ ಹುದ್ದೆಯಿಂದ ಕಿತ್ತು ಹಾಕಿತ್ತು.
ಝಾ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಫೇಸ್ಬುಕ್ ಹಾಗೂ ಬಿಜೆಪಿಗೆ ಲಿಂಕ್ ಇದೆ ಎಂಬ ಬಗ್ಗೆ ರಾಹುಲ್ ಗಾಂಧಿ ಮಾಡಿದ ಆರೋಪಗಳಿಂದ ಗಮನ ಬೇರೆಡೆ ಸೆಳೆಯಲು ಇದು ಬಿಜೆಪಿಯ ತಂತ್ರವಾಗಿದೆ ಎಂದು ತಳ್ಳಿಹಾಕಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ವರ್ಚುವಲ್ ಪತ್ರಿಕಾಗೋಷ್ಠಿಯ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಜೆಪಿಯ ಒತ್ತಾಸೆಯಿಂದ ಕೆಲವರು ಈ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದರು.
ಆದರೆ, ಝಾ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿ ಹಾಕುತ್ತಿದ್ದರೂ, ಪಕ್ಷದೊಳಗೆ ನಾಯಕತ್ವ ಬದಲಾವಣೆ ಬಗ್ಗೆ ಧ್ವನಿ ಎದ್ದಿರುವುದು ಸುಳ್ಳಲ್ಲ ಎಂದು ಪಕ್ಷದೊಳಗಿನ ಮೂಲಗಳೇ ಹೇಳುತ್ತಿವೆ. 2019ರ ಚುನಾವಣೆಗಳಲ್ಲಿನ ಹೀನಾಯ ಸೋಲಿನಿಂದ ಕಂಗೆಟ್ಟ ಬಳಿಕ ಪಕ್ಷಾಧ್ಯಕ್ಷತೆಯ ಪೂರ್ಣಾವಧಿ ಹುದ್ದೆಗೆ ಯಾರೂ ನೇಮಕಗೊಂಡಿಲ್ಲ.
ಕಳೆದ ವಾರ ಮತ್ತೊಬ್ಬ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಕೂಡ ಈ ಬಗ್ಗೆ ಸುಳಿವು ನೀಡಿದ್ದರು. “ಸೋನಿಯಾ ಗಾಂಧಿಯವರೇ ಪಕ್ಷದ ತತ್ಕಾಲೀನ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಸದ್ಯೋಭವಿಷ್ಯದಲ್ಲಿ ಪಕ್ಷಾಧ್ಯಕ್ಷರ ಆಯ್ಕೆಗೆ “ಸೂಕ್ತ ಕಾರ್ಯನೀತಿಯನ್ನು” ಅಳವಡಿಸಲಾಗುತ್ತದೆ” ಎಂದಿದ್ದರು.
ಕೆಲವರು ರಾಹುಲ್ ಗಾಂಧಿ ನಾಯಕತ್ವವನ್ನು ವಿರೋಧಿಸುತ್ತಿದ್ದರೆ, ಮತ್ತೆ ಕೆಲವರು, ಅವರೇ ಮರಳಿ ಪಕ್ಷಾಧ್ಯಕ್ಷರಾಗಿ ನೇಮಕಗೊಳ್ಳಬೇಕು ಎಂಬ ಒಲವು ಹೊಂದಿದ್ದಾರೆ. ಪಕ್ಷಕ್ಕೆ ಗೊತ್ತುಗುರಿಯಿಲ್ಲದಂತಾಗಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಬೆಳೆಯುತ್ತಿದ್ದು, ಇದು ಮತ್ತಷ್ಟು ಬೆಳೆಯದಂತಾಗಲು ಕಾಂಗ್ರೆಸ್ ಪಕ್ಷವು ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರಿಗಾಗಿನ ಹುಡುಕಾಟವನ್ನು ತ್ವರಿತಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಇತ್ತೀಚೆಗೆ ಹೇಳಿದ್ದರು. ಇದೇ ಮಾತನ್ನು ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಕೂಡ ಪ್ರತಿಧ್ವನಿಸಿದ್ದರು.

ಮೂರ್ಖರ ಸ್ವರ್ಗದಲ್ಲಿ ನಾಯಕತ್ವದ ಹುಡುಕಾಟವೇ?