ಒಂದು ಕಾಲದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೆಸರು ಗಳಿಸಿದ್ದ ವಕೀಲ ಪ್ರಶಾಂತ್ ಭೂಷಣ್, ಇದೀಗ ತಾವೇ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡುವ ಮೂಲಕ, ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ತೂಗುಗತ್ತಿಯ ಅಡಿಯಲ್ಲಿದ್ದಾರೆ. ಜೂನ್ 22 ಹಾಗೂ 29ರಂದು ಮಾಡಿದ ಎರಡು ಟ್ವೀಟ್ಗಳ ಆಧಾರದಲ್ಲಿ ಸುಪ್ರೀಂ ಕೋರ್ಟು ಸು ಮೋಟೋ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿ, ವಿಚಾರಣೆ ಆರಂಭಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಸಾರಿದ್ದಾರೆ ಮತ್ತು ಶಿಕ್ಷೆಯ ಪ್ರಮಾಣ ಘೋಷಿಸುವುದಕ್ಕೆ ಮುನ್ನ, “ನಾನು ಕ್ಷಮೆ ಕೇಳುವುದಿಲ್ಲ” ಎಂದು ಭಂಡತನ ತೋರಿದ ಭೂಷಣ್ಗೂ ಪರಮೋಚ್ಚ ನ್ಯಾಯಾಲಯವು ಮತ್ತೊಮ್ಮೆ ಯೋಚಿಸುವಂತೆ ಕಾಲಾವಕಾಶವನ್ನೂ ದಯಪಾಲಿಸಿದೆ.

ಅಚ್ಚರಿಗೆ ಕಾರಣವಾಗಿರುವ ಅಂಶವೆಂದರೆ, ವಿಚಾರಣೆ ನಡೆಯುತ್ತಿರುವಂತೆಯೇ, ಪ್ರಶಾಂತ್ ಭೂಷಣ್, ಅರುಣ್ ಶೌರಿ ಮತ್ತು ಎನ್.ರಾಂ ಅವರು ಸೇರಿಕೊಂಡು, ನ್ಯಾಯಾಂಗ ನಿಂದನೆಯನ್ನು ಕ್ರಿಮಿನಲ್ ಆಗಿ ಪರಿಗಣಿಸುವುದರ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ! ಈ ಅರ್ಜಿಯನ್ನೂ ಹಿಂತೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ಕಾಲಾವಕಾಶ ನೀಡಿ, ಈ ಬಗ್ಗೆ ಹೈಕೋರ್ಟಿನಲ್ಲಿ ಬೇರೆ ಯಾವತ್ತಾದರೂ ಅರ್ಜಿ ಸಲ್ಲಿಸುವಿರಂತೆ ಎಂದೂ ಸಲಹೆ ನೀಡಿದೆ.
ವಿಶೇಷ ಕೇಳಿ. ನ್ಯಾಯಾಂಗ ನಿಂದನೆಯನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸುವುದಕ್ಕೆ ಪ್ರಶಾಂತ್ ಭೂಷಣ್ ಹಿಂದೆ ವಿರೋಧಿಸಿದ್ದಿಲ್ಲ. ತನ್ನ ಮೇಲೆಯೇ ಈ ಕೇಸು ಬಿದ್ದಾಗಲಷ್ಟೇ ಈ ಆಮ್ ಆದ್ಮೀ ಪಾರ್ಟಿಯ ಮಾಜಿ ರಾಜಕಾರಣಿಗೆ, ಈ ಕಾನೂನು ಸರಿಯಿಲ್ಲ ಎಂಬಂತೆ ಅನ್ನಿಸಲಾರಂಭಿಸಿದೆ. ಹಿಂದೆಲ್ಲಾ, ಇದುವೇ ನ್ಯಾಯ ಎನ್ನುತ್ತಿದ್ದ ಅವರೀಗ, ತನಗೆ ಮಾತ್ರ ‘ಅನ್ಯಾಯವಾಗಿದೆ’ ಎಂದು ಹೇಳಲಾರಂಭಿಸಿದ್ದಾರೆ.
ಉದಾಹರಣೆಗೆ, ಹಿಂದೆ ಕಲ್ಕತ್ತಾ ಹೈಕೋರ್ಟ್ನ ಹಿಂದಿನ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರು ನ್ಯಾಯಾಂಗ ನಿಂದನೆ ಆರೋಪದಲ್ಲಿ ಜೈಲು ಸೇರಬೇಕಾಗಿಬಂದಾಗ, ಈ ಐತಿಹಾಸಿಕ ತೀರ್ಪನ್ನು ಇದೇ ಪ್ರಶಾಂತ್ ಭೂಷಣ್ ಕೊಂಡಾಡಿದ್ದರು. ನ್ಯಾಯಾಧೀಶರೇ ಜೈಲುಪಾಲಾಗಿರುವುದು ಇದೇ ಮೊದಲು. ಈ ‘ಹೋರಾಟಗಾರ’ ಈ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು. 2017ರಲ್ಲಿ ಅದನ್ನು ಅವರೇ ಘೋಷಿಸಿಕೊಂಡಿದ್ದರು.
ಅವರು ಬರೆದದ್ದನ್ನೇ ನೋಡಿ: ನ್ಯಾಯಾಂಗ ನಿಂದನೆಗಾಗಿ ಕರ್ಣನ್ಗೆ ಕೊನೆಗೂ ಜೈಲಾಗಿರುವುದರಿಂದ ಸಂತೋಷವಾಗಿದೆ. ನ್ಯಾಯಾಧೀಶರ ವಿರುದ್ಧ ಅವರು ತಳಬುಡವಿಲ್ಲದ ಆರೋಪಗಳನ್ನು ಮಾಡಿದ್ದರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಅಸಂಬದ್ಧ ತೀರ್ಪನ್ನೂ ನೀಡಿದ್ದರು ಅಂತ ಬರೆದಿದ್ದರವರು!
ಇದೇ ರೀತಿ, 2019ರ ಸಿಬಿಐ Vs ಸಿಬಿಐ ಪ್ರಕರಣದಲ್ಲಿಯೂ ಪ್ರಕರಣವೊಂದರಲ್ಲಿ ತನಿಖಾಧಿಕಾರಿಯನ್ನೇ ಬದಲಿಸುವ ಮೂಲಕ ಸಿಬಿಐಯ ತತ್ಕಾಲೀನ ಮುಖ್ಯಸ್ಥ ಎಂ.ನಾಗೇಶ್ವರ ರಾವ್ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬರೆದಿದ್ದರು.
ಇದನ್ನು ನೋಡಿದರೆ, ತಮಗೊಂದು ಕಾನೂನು, ಉಳಿದವರಿಗೊಂದು ಕಾನೂನು ಅಂತ ವಕೀಲರೇ ಹೇಳುತ್ತಿರುವುದು ವಿಚಿತ್ರ ಎನ್ನಿಸುತ್ತಿದೆ. ಈಗ ಪ್ರಶಾಂತ್ ಭೂಷಣ್ ಮಾಡಿರುವ ನಿಂದನೆಯನ್ನು ಬೆಂಬಲಿಸುತ್ತಿರುವುದು, ಅವರಿಗೆ ವಿದೇಶದಿಂದಲೂ ಕೆಲವು ಭಾರತ ವಿರೋಧಿ ಶಕ್ತಿಗಳ ಬೆಂಬಲ ದೊರೆತಿರುವುದು ಆತಂಕಕಾರಿ ವಿದ್ಯಮಾನವೂ ಹೌದು.

Average Rating