ಹೊಸದಿಲ್ಲಿ: ದೇಶದ ಮಹತ್ವಾಕಾಂಕ್ಷೆಯ ಮತ್ತು ಯುವ ಜನತೆಯಲ್ಲಿ ರಾಷ್ಟ್ರಪ್ರೇಮದ ಜೊತೆಗೆ ಸ್ವಾವಲಂಬನೆ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುವ ಅಗ್ನಿಪಥ (Agnipath) ಯೋಜನೆಗೆ ಸೇರ್ಪಡೆಯಾಗಲು ಜಾತಿಯನ್ನು ಕೇಳಲಾಗುತ್ತದೆ, ಇದು ಕೂಡ ನರೇಂದ್ರ ಮೋದಿ ಸರಕಾರದ ಉದ್ಧಟತನ ಎಂದು ವಿರೋಧ ಪಕ್ಷಗಳು ಮತ್ತೊಂದು ಸುಳ್ಳನ್ನು ಪೋಣಿಸಿರುವುದು ಬಯಲಾಗಿದೆ.
ಆಮ್ ಆದ್ಮೀ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು, ಬಿಜೆಪಿಯನ್ನು ಹಳಿಯಲು ಸದಾ ಬಳಸುವ ಜಾತಿ ಮತ್ತು ಧರ್ಮದ ಕಾರ್ಡ್ ಬಳಸಿ ಸಿಕ್ಕಿಬಿದ್ದಿದ್ದಾರೆ.
ಅಗ್ನಿಪಥ ಯೋಜನೆಯನ್ನೇ ವಿರೋಧಿಸಿದ್ದ ಅವರು, ಇದೀಗ ಅಗ್ನಿಪಥ ಎಂಬ ಸೇನಾ ನೇಮಕಾತಿ ಯೋಜನೆಯಲ್ಲಿ “ಭಾರತದ ಚರಿತ್ರೆಯಲ್ಲೇ ಮೊದಲ ಬಾರಿಗೆ” ಜಾತಿ ಪ್ರಮಾಣಪತ್ರ ಕೇಳಲಾಗುತ್ತದೆ ಎಂದು ಸುಳ್ಳನ್ನು ಹರಿಯಬಿಟ್ಟಿದ್ದಾರೆ.
ಅವರು ಪ್ರಚೋದನಕಾರಿಯಾಗಿಯೇ ಟ್ವೀಟ್ ಮಾಡಿ, ‘ದಲಿತರು, ಹಿಂದುಳಿದವರು, ಬುಡಕಟ್ಟು ಜನರನ್ನು ಸೇನಾ ನೇಮಕಾತಿಗೆ ಮೋದಿ ಪರಿಗಣಿಸುವುದಿಲ್ಲವೇ? ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಸೇನಾ ನೇಮಕಾತಿಯಲ್ಲಿ ಜಾತಿಯನ್ನು ಕೇಳಲಾಗುತ್ತಿದೆ. ಮೋದೀಜೀ, ನೀವು ಅಗ್ನಿವೀರರನ್ನು ರಚಿಸುತ್ತೀರೋ, ಜಾತಿವೀರರನ್ನೋ’ ಎಂದು ಕೇಳಿದ್ದಾರೆ.
ಇದಕ್ಕೆ ಪೂರಕವಾಗಿ, ಸೇನಾ ನೇಮಕಾತಿ ಅರ್ಜಿಯ ಪ್ರತಿಯಲ್ಲಿ ಜಾತಿ ಕಾಲಂ ಅನ್ನು ಗುರುತು ಮಾಡಿ ಫೋಟೋ ಶೇರ್ ಮಾಡಿಕೊಂಡಿದ್ದರು.
ಇದಕ್ಕೆ ಪೂರಕವಾಗಿ, ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಬಿಜೆಪಿಯಲ್ಲೇ ಇರುವ ವರುಣ್ ಗಾಂಧಿ ಕೂಡ ಟ್ವೀಟ್ ಮಾಡಿ, ಸರಕಾರವನ್ನು ಪ್ರಶ್ನಿಸಿದ್ದರು. ವಿದ್ಯಾವಂತರೂ ಈ ರೀತಿ ಮಾಡುವುದನ್ನು ಅರಿತ ಸಾರ್ವಜನಿಕ ಮಾಹಿತಿ ಇಲಾಖೆ ಪಿಐಬಿ, ತಕ್ಷಣವೇ ಇದು ಸುಳ್ಳು ಮಾಹಿತಿ ಎಂದು ಸ್ಪಷ್ಟಪಡಿಸಿದೆ.
ಇದೇನೂ ಭಾರತದ ಇತಿಹಾಸದಲ್ಲೇ ಮೊದಲ ಬಾರಿಯ ಕ್ರಮ ಅಲ್ಲ. ಸೇನಾ ನೇಮಕಾತಿ ಅರ್ಜಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾತಿ ಧರ್ಮದ ಕಾಲಂ ಸ್ವಾತಂತ್ರ್ಯಪೂರ್ವದಿಂದಲೂ ಇತ್ತು. ಅದನ್ನೇ ಮುಂದುವರಿಸಲಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ತಕ್ಷಣವೇ ಪ್ರತಿಕ್ರಿಯಿಸಿ, ಇದೊಂದು ಗಾಳಿಸುದ್ದಿ. ನಾವು ಯಾವುದೇ ಬದಲಾವಣೆ ಮಾಡಿಲ್ಲ. ಹಿಂದಿನ ವ್ಯವಸ್ಥೆಯನ್ನಷ್ಟೇ ನಾವೂ ಮುಂದುವರಿಸಿದ್ದೇವೆ. ಹೊಸದಾಗಿ ಏನನ್ನೂ ಸೇರಿಸಿಲ್ಲ. ಜಾತಿ ಧರ್ಮದ ಪ್ರಮಾಣಪತ್ರ ಸಲ್ಲಿಕೆಯು ಹಿಂದಿನಿಂದಲೂ ಬಂದ ಪದ್ಧತಿ ಎಂದು ಸ್ಪಷ್ಟಪಡಿಸಿದ್ದರು.
ಯುವಕರನ್ನು ಸೇನೆಗೆ ಸೇರಲು ಪ್ರೇರೇಪಿಸುವ ಮತ್ತು ದೇಶ ರಕ್ಷಣೆಗೆ ಯುವಶಕ್ತಿಯನ್ನು ಸಜ್ಜುಗೊಳಿಸುವ ಅಗ್ನಿಪಥ ಯೋಜನೆ ಘೋಷಣೆಯಾದಂದಿನಿಂದಲೂ ಈ ಉತ್ತಮ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಾ, ಯುವಜನರನ್ನು ದಂಗೆ, ಹಿಂಸಾಚಾರಕ್ಕೆ ಪ್ರಚೋದಿಸಲಾಗಿತ್ತು. ಸೇನೆಯ ಪರವಾಗಿ ನಿಲ್ಲಬೇಕಾಗಿದ್ದ ವಿರೋಧ ಪಕ್ಷಗಳ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕೂಡ ಅಗ್ನಿಪಥದ ವಿರುದ್ಧ ಹೇಳಿಕೆ ನೀಡುತ್ತಾ ಬಂದರು. ಸುಳ್ಳುಗಳ ಕಾರಣದಿಂದಾಗಿ ಬಿಹಾರ ಹಾಗೂ ಉತ್ತರ ಭಾರತದ ಹಲವೆಡೆ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು. ಹಿಂಸಾಚಾರವು ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳಾದ ಪಶ್ಚಿಮ ಬಂಗಾಳ, ತೆಲಂಗಾಣ ಮಾತ್ರವಲ್ಲದೆ ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶಕ್ಕೂ ಹಬ್ಬಿತ್ತು. ಇದರ ಹಿಂದೆ ಸುಳ್ಳುಗಳ ಮೂಲಕ ಯುವಜನರನ್ನು ನರೇಂದ್ರ ಮೋದಿ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರವೂ ಇತ್ತು, ಈ ಸುಳ್ಳರ ಮಾತಿಗೆ ಕಿವಿಗೊಟ್ಟು ಭವಿಷ್ಯ ಹಾಳುಮಾಡಿಕೊಳ್ಳದಿರಿ ಎಂದು ಬಿಜೆಪಿ ಮುಖಂಡರು ಪರಿಪರಿಯಾಗಿ ಕೇಳಿಕೊಂಡಿದ್ದರು. ನಿವೃತ್ತ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ಜ. ವಿ.ಕೆ.ಸಿಂಗ್ ಕೂಡ ‘ಇವೆಲ್ಲ ರಾಜಕೀಯ ಷಡ್ಯಂತ್ರಗಳು. ಯುವಜನತೆಯ ದಾರಿತಪ್ಪಿಸಲಾಗುತ್ತಿದೆ. ಯುವಜನರು ಇದಕ್ಕೆಲ್ಲ ಬಲಿಯಾಗಬೇಡಿ’ ಎಂದು ಕೇಳಿಕೊಂಡಿದ್ದರು. ಇದಲ್ಲದೆ, ದೇಶ ರಕ್ಷಣೆ ಮಾಡಬೇಕಾದ ಯೋಧರಾಗಲು ಹೊರಟವರೇ ಕಾನೂನು ಕೈಗೆತ್ತಿಕೊಂಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಥವರನ್ನು ಎಂದಿಗೂ ಸೇನೆಗೆ ನೇಮಿಸಿಕೊಳ್ಳಬಾರದು ಎಂಬ ಒತ್ತಾಯವೂ ಕೇಳಿಬಂದಿತ್ತು.

Average Rating