ಮಂಗಳೂರು: ದೇಶ, ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಾಕಷ್ಟು ಬೆಳವಣಿಗೆಗಳಾಗಿವೆ. ಮಂಗಳವಾರ (25 ಆಗಸ್ಟ್ 2020) ಟಾಪ್-10 ಸುದ್ದಿಗಳು ಇಲ್ಲಿವೆ.
- ದುಷ್ಟರಿಗೆ ಸಿಂಹಸ್ವಪ್ನರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳೀಧರ ರಾವ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
- ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
- ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡು, ಸದ್ದಿಲ್ಲದೇ ತಣ್ಣಗಾಗಿದ್ದರೂ, ಕಪಿಲ್ ಸಿಬಲ್ ಮಂಗಳವಾರವೂ ಗೂಢಾರ್ಥದ ಟ್ವೀಟ್ ಮಾಡಿ ಎಲ್ಲರನ್ನೂ ಯೋಚನೆಗೀಡಾಗುವಂತೆ ಮಾಡಿದ್ದಾರೆ. ಬಹುಶಃ ಅವರು ನಿನ್ನೆ ಅಳಿಸಿರುವ ಟ್ವೀಟ್ ಪೋಸ್ಟ್ನ ಬಗ್ಗೆ ಹೇಳಿರಬಹುದು. ಅವರು ಇಂದು ಬರೆದಿದ್ದು : “ಅದೊಂದು ಪೋಸ್ಟ್ ಮಾತ್ರವೇ ಆಗಿರಲಿಲ್ಲ, ನನ್ನ ನನಗೆ ಅತ್ಯಂತ ಹೆಚ್ಚು ಕಾಳಜಿ ಇರುವ ನನ್ನ ದೇಶದ ಕುರಿತಾಗಿತ್ತು”. ಜನ ಅದಕ್ಕೆ ಅಪಾರ ಅರ್ಥಗಳನ್ನು ಕಲ್ಪಿಸುತ್ತಿದ್ದಾರೆ.
- ಕಾಂಗ್ರೆಸ್ ಅಧ್ಯಕ್ಷತೆಗೆ ಮತ್ತೆ ಚಮಚಾಗಿರಿ ನಡೆದಂತೆ ತೋರುತ್ತಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಧ್ಯಕ್ಷರಾದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಸಂಕಷ್ಟವಾಗಲಿದೆ ಎಂದು ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಪುತ್ರ, ಹಿರಿಯ ಕಾಂಗ್ರೆಸಿಗ ಅನಿಲ್ ಶಾಸ್ತ್ರಿ ಹೇಳಿದ್ದಾರೆ. ಇದೇ ವೇಳೆ, ಪಕ್ಷದ ಸಾಂಸ್ಥಿಕ ಬದಲಾವಣೆಗಾಗಿ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರಲ್ಲೊಬ್ಬರಾದ ಮಾಜಿ ಸಿಎಂ ವೀರಪ್ಪ ಮೊಯಿಲಿ, ಸೋನಿಯಾ ಗಾಂಧಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದೂ ಹೇಳಿದ್ದಾರೆ.
- 2019ರ ಫೆ.14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದ್ದ ಉಗ್ರಗಾಮಿಗಳ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಮಂಗಳವಾರ ಜಮ್ಮು ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಪಾಕಿಸ್ತಾನದ ಜೈಷ್ ಎ ಮೊಹಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿ 19 ಜನರ ಹೆಸರಿದೆ.
- ನೋಕಿಯಾ ಸಿ3 (7499 ರೂ ಮತ್ತು 8999 ರೂ.), ನೋಕಿಯಾ 5.3 (13,999ರಿಂದ 15,499 ರೂ.) ಎಂಬ ಸ್ಮಾರ್ಟ್ ಫೋನ್ಗಳು ಹಾಗೂ ನೋಕಿಯಾ 150 (2299 ರೂ.), 125 (1999 ರೂ.) ಹೆಸರಿನ ಫೀಚರ್ ಫೋನ್ಗಳನ್ನು ಮಂಗಳವಾರ ಅದರ ತಯಾರಕ ಸಂಸ್ಥೆಯಾದ ಎಚ್ಎಂಡಿ ಗ್ಲೋಬಲ್, ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
- ಆ್ಯಪಲ್ ಕಂಪನಿಯ ಅಗ್ಗದ ಐಫೋನ್ ಎಸ್ 2020 ಮಾದರಿಯ ಫೋನ್ಗಳನ್ನು ಬೆಂಗಳೂರಿನಲ್ಲೇ ಅಸೆಂಬಲ್ ಮಾಡುವ ಕಾರ್ಯವನ್ನು ತೈವಾನ್ ಮೂಲದ ವಿಸ್ಟ್ರನ್ ಕಂಪನಿಯು ಆರಂಭಿಸಿದ್ದು, ಶೀಘ್ರದಲ್ಲೇ ಇದರ ಆನ್ಲೈನ್ ಮಾರಾಟವೂ ಆರಂಭವಾಗಲಿದೆ. ಇದರಿಂದ ಆಮದು ತೆರಿಗೆಯೂ ಉಳಿತಾಯವಾಗಿ, ಗ್ರಾಹಕರಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಆ್ಯಪಲ್ ಐಫೋನ್ ದೊರೆಯುವ ವಿಶ್ವಾಸವಿದೆ. ಐಫೋನ್ ಎಸ್ಇ ಆರಂಭಿಕ ಬೆಲೆ 42,500 ರೂ.
- ಮೋಟೋರೋಲ ಕೂಡ ಮೋಟೋ ಜಿ9 ಹೆಸರಿನ ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಭಾರತದಲ್ಲೇ ತಯಾರಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 5000 mAh ಬ್ಯಾಟರಿ, 20W ಟರ್ಬೋ ಚಾರ್ಜಿಂಗ್, ತ್ರಿವಳಿ ಕ್ಯಾಮೆರಾ, ಆಂಡ್ರಾಯ್ಡ್ 10 ಇದ್ದು, ಫ್ಲಿಪ್ಕಾರ್ಟ್ನಲ್ಲಿ ಆ.31ರಿಂದ ಲಭ್ಯ. ಬೆಲೆ 11,999 ರೂ.
- ಕೋವಿಡ್ನಿಂದಾಗಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿರುವ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ತೃಪ್ತಿದಾಯಕ ಸುಧಾರಣೆ ಕಂಡುಬಂದಿದ್ದು, ಅವರೀಗ ವೈದ್ಯರನ್ನು ಗುರುತು ಹಿಡಿಯುತ್ತಿದ್ದಾರೆ ಎಂದು ಅವರ ಪುತ್ರ, ನಿರ್ಮಾಪಕ ಎಸ್.ಪಿ.ಚರಣ್ ಅವರು ವಿಡಿಯೊ ಸಂದೇಶದಲ್ಲಿ ದೃಢಪಡಿಸಿದ್ದಾರೆ.
- ಭಾರತದ ಕೋವಿಡ್ ಅಂಕಿ ಅಂಶಕ್ಕೆ ಸಂಬಂಧಿಸಿದಂತೆ ಸಮಾಧಾನಕರ ಸುದ್ದಿ. ಇಲ್ಲಿ ಮರಣ ಪ್ರಮಾಣವು ವಿಶ್ವದಲ್ಲೇ ಅತ್ಯಂತ ಕಡಿಮೆ ಅಂದರೆ ಕೇವಲ ಶೇ. 1.58 ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಶೇ.22.2ರಷ್ಟಿದೆ. ಇದುವರೆಗೆ 3.68 ಕೋಟಿ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating