ಮುಂಬಯಿ: ಇವತ್ತು ನನ್ನ ಮನೆಯನ್ನು ಕೆಡವಿ ಹಾಕಿದ್ದೀರಿ, ನಾಳೆ ನಿಮ್ಮ ಅಹಂಕಾರಕ್ಕೂ ಈ ಸ್ಥಿತಿ ಬರುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೊ ಸಹಿತ ಆಕ್ರೋಶ ಹೊರಗೆಡಹಿರುವ ನಟಿ ಕಂಗನಾ ರಾಣಾವತ್ ಅವರು ಬಾಲಿವುಡ್ನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ.
90ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಹೊಡೆದೋಡಿಸಿದಾಗ ಅವರಿಗೆ ಯಾವ ಸ್ಥಿತಿ ಎದುರಾಗಿತ್ತು ಎಂಬುದು ಇಂದು ನನ್ನ ಅನುಭವಕ್ಕೆ ಬಂದಿತು ಎಂದಿರುವ ಕಂಗನಾ, ನಾನು ಅಯೋಧ್ಯೆಯ ಕುರಿತಾಗಿಯಷ್ಟೇ ಅಲ್ಲ, ಕಾಶ್ಮೀರದ ಬಗ್ಗೆಯೂ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.
ಕಂಗನಾ ರಾಣಾವತ್ ಅವರ ಕಚೇರಿಯ ಭಾಗವನ್ನು ನಿಯಮಬಾಹಿರವಾಗಿ ವಿಸ್ತರಿಸಲಾಗಿದೆ ಎಂದು ಆರೋಪಿಸಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಅದನ್ನು ಕೆಡಹಲು ಮುಂದಾಗಿತ್ತು. ಆದರೆ, ಇದಕ್ಕೆ ಬಾಂಬೇ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿತ್ತು.
ಬುಧವಾರ ಬೆಳಗ್ಗೆಯೇ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿರುವ ಕಚೇರಿ ಕಟ್ಟಡವು ಅಕ್ರಮ ಎಂಬ ನೆಪವೊಡ್ಡಿ ಬಿಎಂಸಿ ಅಧಿಕಾರಿಗಳು ಬಂದು ಕಟ್ಟಡ ಕೆಡಹುವಿಕೆ ಆರಂಭಿಸಿದ್ದರು. ಕಂಗನಾ ಆಗಷ್ಟೇ ಚಂಡೀಗಢದಿಂದ ಮುಂಬಯಿಗೆ ವಿಮಾನದಲ್ಲಿ ಬಂದಿಳಿದಿದ್ದರು. ಅಷ್ಟರಲ್ಲಿ, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಂಗನಾ ವಕೀಲ ರಿಜ್ವಾನ್ ಸಿದ್ದಿಕಿ ಅವರು ಬಾಂಬೇ ಹೈಕೋರ್ಟ್ಗೆ ಮನವಿ ಸಲ್ಲಿಸಿ, ತಡೆಯಾಜ್ಞೆ ತಂದಿದ್ದರು.
ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರ ಬೆದರಿಕೆಯಿಂದ ಆಕ್ರೋಶಗೊಂಡಿದ್ದ ಕಂಗನಾ, ನಾವೇನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದ್ದರು. ಮುಂಬಯಿ ಪೊಲೀಸರ ಮೇಲೆ ನಂಬಿಕೆಯಿಲ್ಲದಿದ್ದರೆ ಮುಂಬಯಿಗೆ ಬರಬೇಡ ಎಂದು ರಾವುತ್ ಬೆದರಿಸಿದ್ದರು.
ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಪ್ರಕರಣದಿಂದ ಬಾಲಿವುಡ್ನಲ್ಲಿನ ಡ್ರಗ್ಸ್ ಜಾಲದ ಎಳೆಗಳನ್ನು ಕಂಗನಾ ಅವರು ಬಿಚ್ಚಿಡಲಾರಂಭಿಸಿದ್ದರು. ಹಲವು ಬಾಲಿವುಡ್ ದೊಡ್ಡ ಕುಳಗಳ ಸ್ವಜನಪಕ್ಷಪಾತತನವನ್ನೂ ಆಕೆ ಬಹಿರಂಗಪಡಿಸಿದ್ದರು.
ಮುಂಬಯಿಗೆ ಬಾರದಂತೆ ಆಡಳಿತಾರೂಢ ಶಿವಸೇನೆ ತಡೆಯೊಡ್ಡುತ್ತಿರುವ ಕಾರಣದಿಂದಾಗಿ ಸೆ.9ರಂದು ಮುಂಬಯಿಗೆ ಭೇಟಿ ನೀಡುತ್ತಿರುವ ಆಕೆಗೆ ಕೇಂದ್ರವು ಸೋಮವಾರವೇ ವೈ ಕೆಟಗರಿ ಭದ್ರತೆ ಒದಗಿಸಿತ್ತು. ಇದರಲ್ಲಿ ಸಿಆರ್ಪಿಎಫ್, ಗುಪ್ತ ದಳ ಹಾಗೂ ಹಿಮಾಚಲ ಪ್ರದೇಶ ಪೊಲೀಸರು ಇರುತ್ತಾರೆ.
ಹಲವು ಸೆಲೆಬ್ರಿಟಿಗಳು ಕಂಗನಾ ಬೆಂಬಲಕ್ಕೆ ಬಂದಿದ್ದು, ಮಹಾರಾಷ್ಟ್ರದ ಕಾಂಗ್ರೆಸ್ – ಶಿವಸೇನಾ- ಎನ್ಸಿಪಿ ಮಿತ್ರಕೂಟದ ಸರ್ಕಾರದ ವಿರುದ್ಧ Death Of Democracy ಹೆಸರಿನಲ್ಲಿ ಟ್ವಿಟರ್ನಲ್ಲಿ ಆಕ್ರೋಶ ಹೊರಗೆಡಹಿದ್ದಾರೆ.
ಇದೀಗ ಸುಶಾಂತ್ ಸಿಂಗ್ ನಿಗೂಢ ಹತ್ಯೆಯ ವಿವಾದದ ಬಗ್ಗೆಯಿದ್ದ ದೇಶದ ಗಮನವನ್ನು ಕಂಗನಾ ಅವರತ್ತ ತಿರುಗಿಸಲಾಗಿದೆ.
ಸುಶಾಂತ್ ಸ್ನೇಹಿತೆಯೇ ಆತನಿಗೆ ಡ್ರಗ್ ಪೂರೈಸುತ್ತಿದ್ದಳು ಮತ್ತು ಆತನ ಸಾವಿಗೂ ಕಾರಣ ಎಂಬ ಆರೋಪದಲ್ಲಿ ಮತ್ತೊಬ್ಬ ನಟಿ ರಿಯಾ ಚಕ್ರವರ್ತಿ ವಿರುದ್ಧ ಮಾಧ್ಯಮಗಳು ತಿರುಗಿಬಿದ್ದಾಗಲಷ್ಟೇ ಕಾಣಿಸಿಕೊಂಡಿದ್ದ ‘ಪುರುಷ ಪ್ರಧಾನ ಸಮಾಜ’ ಎಂಬ ಅರಚಾಟ, ಕಂಗನಾ ಎಂಬ ನಟಿಯ ಬಗ್ಗೆ ಯಾಕಿಲ್ಲ ಎಂಬ ಮಾತು ಟ್ವಿಟರ್ನಲ್ಲಿ ಹರಿದಾಡುತ್ತಿದೆ.
ಕೇವಲ 24 ಗಂಟೆಯ ನೋಟಿಸ್ ನೀಡಿ ಕಟ್ಟಡ ಕೆಡಹಲು ಆರಂಭಿಸಿರುವುದಕ್ಕೆ ವಿಡಿಯೊ ಸಹಿತ ಆಕ್ರೋಶ ವ್ಯಕ್ತಪಡಿಸಿರುವ ಕಂಗನಾ, ಹಿಂದಿ ಮೂವೀ ಮಾಫಿಯಾದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ನನ್ನ ತೀರ್ಮಾನ ಸರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಇಡೀ ದಿನ ಕಂಗನಾ ಅವರು ಮಾಧ್ಯಮಗಳಿಗೆ, ಜನತೆಗೆ ಮಾಹಿತಿ ನೀಡುತ್ತಲೇ ಇದ್ದರು.

Average Rating