ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಕ್ತದಲ್ಲೇ ಅಂಟಿಕೊಂಡಿರುವ ದ್ವೇಷ, ಸುಳ್ಳು, ಅಪಪ್ರಚಾರಗಳ ಮೂಲಕವೇ ಚುನಾವಣೆಗಳನ್ನು ಗೆಲ್ಲಬಹುದೆಂಬ ವಿರೋಧ ಪಕ್ಷಗಳ ತಂತ್ರಕ್ಕೆ ಪ್ರಜ್ಞಾವಂತ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಆದರೂ ಕೊನೆಗೆ ಇದಕ್ಕೆಲ್ಲಾ ಎಲೆಕ್ಟ್ರಾನಿಕ್ ಮತ ಯಂತ್ರಗಳೇ ಕಾರಣ ಎಂದು ಕಾಂಗ್ರೆಸ್ ತಗಾದೆ ಎತ್ತಿದೆ.
ಚಂದ್ರ, ಮಂಗಳನಲ್ಲಿರುವ ಉಪಗ್ರಹವನ್ನೇ ಭೂಮಿಯಿಂದ ನಿಯಂತ್ರಿಸಬಹುದಾಗಿದ್ದರೆ, ಅವುಗಳೆದುರು ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಯಾವ ಲೆಕ್ಕ? ಇತ್ತೀಚಿನ ಹರ್ಯಾಣ ಚುನಾವಣೆಗಳಲ್ಲಿ ಕೆಲವು ಹುಡುಗರು ಬ್ಲೂಟೂತ್ ಮೂಲಕ ಇವಿಎಂಗಳನ್ನು ಹ್ಯಾಕ್ ಮಾಡುವಾಗ ಸಿಕ್ಕಿಬಿದ್ದರು. ಇದು ಬಿಹಾರಕ್ಕಾಗಿ ಮಾತ್ರವೇ ಅಲ್ಲ, ಎಲ್ಲ ಚುನಾವಣೆಗೂ ಹೇಳುತ್ತಲೇ ಬಂದಿದ್ದೇನೆ. ಕಾಂಗ್ರೆಸ್ ಗೆದ್ದರೂ ಕೂಡ ಇವಿಎಂಗಳನ್ನು ನಿವಾರಿಸಿಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಇವಿಎಂ ಹ್ಯಾಕ್ ಮಾಡಲಾಗುತ್ತಿದೆ ಎಂಬುದು ಕಾಂಗ್ರೆಸ್ನ ಇಂದು-ನಿನ್ನೆಯ ಆರೋಪವಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ, ಪ್ರತಿ ಬಾರಿಯೂ ತನಗೆ ಸೋಲಾಗುತ್ತಿದ್ದಾಗ ಈ ಧ್ವನಿಯನ್ನು ಅದು ಎತ್ತುತ್ತಲೇ ಇತ್ತು.
ಈ ಕಾರಣಕ್ಕಾಗಿ ಚುನಾವಣಾ ಆಯೋಗವು ಈ ಹಿಂದೆ, ಇವಿಎಂ ಹ್ಯಾಕ್ ಮಾಡಿ ತೋರಿಸಿ ಅಂತ ಸವಾಲು ಹಾಕಿತ್ತಲ್ಲದೆ, ಹ್ಯಾಕ್ ಹೇಗೆ ಮಾಡಬಹುದು ಅಂತ ತೋರಿಸುವಂತೆ ಎಲ್ಲ ಪಕ್ಷಗಳನ್ನೂ ಕರೆದಿತ್ತು. ಆದರೆ ಈ ಸಭೆಗೆ ಕಾಂಗ್ರೆಸ್ ಹಾಗೂ ಬಿಎಸ್ಪಿಗಳು ಈ ಆರೋಪವನ್ನು ನಿಲ್ಲಿಸಿ, ಸವಾಲು ಸ್ವೀಕರಿಸಲು ಮುಂದೆ ಬಂದಿರಲಿಲ್ಲ.
ಉದಿತ್ ರಾಜ್ ಅವರು ಮಾಜಿ ಬಿಜೆಪಿ ನಾಯಕ. 2019ರಲ್ಲಿ ಲೋಕಸಭೆ ಟಿಕೆಟ್ ಸಿಗದ ಕಾರಣ ಕಾಂಗ್ರೆಸಿಗೆ ನೆಗೆದಿದ್ದರು.
ಇದನ್ನೂ ಓದಿ: Election Result 2020 | ದೇಶಾದ್ಯಂತ ಮೋದಿ ಮೆಚ್ಚಿದ ಜನತೆ, ಬಿಜೆಪಿಗೆ ಭರ್ಜರಿ ಜನಾದೇಶ
ಮತ್ತೊಂದೆಡೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕೂಡ, ತಮ್ಮ ರಾಜ್ಯದಲ್ಲಿ ತಮ್ಮ ಪಕ್ಷಕ್ಕಾಗುವ ಉಪಚುನಾವಣೆಯ ಸೋಲಿನ ಸುಳಿವರಿತು, ಇವಿಎಂ ಹ್ಯಾಕ್ ಮಾಡಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನದ ಈ ಯುಗದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇವಿಎಂಗಳನ್ನು ನಂಬುವುದಿಲ್ಲ. ಆದರೆ ಭಾರತ ಮತ್ತಿತರ ಚಿಕ್ಕ ಪುಟ್ಟ ದೇಶಗಳಲ್ಲಿ ಇವಿಎಂ ಮೂಲಕವೇ ಮತದಾನ ಮಾಡಿಸಲಾಗುತ್ತಿದೆ. ಅವರೇಕೆ ಇವಿಎ ಬಳಸುವುದಿಲ್ಲ? ಯಾಕಂದರೆ ಅದರೊಳಗೆ ಚಿಪ್ ಇದೆ, ಅದನ್ನು ಹ್ಯಾಕ್ ಮಾಡಬಹುದು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, 2018ರಲ್ಲಿ ಕಾಂಗ್ರೆಸಿಗೆ 114 ಸ್ಥಾನಗಳನ್ನು ನೀಡಿದ್ದು ಇದೇ ಇವಿಎಂಗಳಲ್ಲವೇ? ಛತ್ತೀಸಗಢ, ರಾಜಸ್ಥಾನಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಇದೇ ಇವಿಎಂಗಳ ಮೂಲಕವಲ್ಲವೇ ಎಂದು ಕೇಳಿದ್ದಾರೆ.
ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿ, ದಿಗ್ವಿಜಯ ಅವರು ಇವಿಎಂ ಬಗ್ಗೆ ಸಂದೇಹ ಎತ್ತಿದ್ದಾರೆಂದರೆ, ಬಿಜೆಪಿ ಗೆಲುವು ನಿಶ್ಚಿತ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಳೆದುಕೊಳ್ಳುವಂಥದ್ದೇನಿಲ್ಲ. ಸೋಲುವವರು ಈ ಬಗ್ಗೆ ಪ್ರಶ್ನಿಸುತ್ತಾರೆ. ದಿಗ್ವಿಜಯ್ ಇವಿಎಂ ಬಗ್ಗೆ ಪ್ರಶ್ನಿಸುತ್ತಿದ್ದಾರೆಂದರೆ, ಬಿಜೆಪಿ ಗೆಲ್ಲುತ್ತಿದೆ ಎಂದರ್ಥ. ಇಬ್ಬರು ವಯೋವೃದ್ಧರು (ದಿಗ್ವಿಜಯ್ ಸಿಂಗ್ ಮತ್ತು ಕಮಲನಾಥ್) ದೆಹಲಿಗೆ ಹೋಗುತ್ತಾರೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
230 ಸದಸ್ಯಬಲದ ಮಧ್ಯಪ್ರದೇಶದಲ್ಲಿ ಬಿಜೆಪಿಗೆ 116ರ ಬಹುಮತಕ್ಕಾಗಿ 9 ಸ್ಥಾನಗಳ ಅಗತ್ಯವಿತ್ತು. 28 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 21ರಲ್ಲಿ ಭಾರಿ ಮುನ್ನಡೆ ಸಾಧಿಸಿದೆ.
ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ, ಇವಿಎಂ ಮೇಲೆ ಸಂದೇಹ ವ್ಯಕ್ತಪಡಿಸುವರ ಬಗ್ಗೆ ಭಾರತದ ಚುನಾವಣಾ ಆಯೋಗ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಪಷ್ಟನೆಯನ್ನೂ ನೀಡಿದೆ.
ಇವಿಎಂಗಳು ಕ್ಷಮತೆ ಹೊಂದಿವೆ ಮತ್ತು ಟ್ಯಾಂಪರ್-ಪ್ರೂಫ್ ಕೂಡ ಹೌದು ಅಂತ ಹಲವು ಬಾರಿ ಸಾಬೀತು ಮಾಡಿ ತೋರಿಸಲಾಗಿದೆ. 2017ರಲ್ಲಿ ಇವಿಎಂ ಹ್ಯಾಕ್ ಮಾಡಿ ತೋರಿಸುವಂತೆ ಸವಾಲನ್ನೂ ಕೂಡ ರಾಜಕೀಯ ಪಕ್ಷಗಳಿಗೆ ಹಾಕಲಾಗಿತ್ತು. ಇವಿಎಂಗಳ ಕಾರ್ಯವಂತೂ ನಿಸ್ಸಂದೇಹವಾಗಿ ಪಕ್ಕಾ ಇದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ಅಗತ್ಯವಿಲ್ಲವೆನಿಸುತ್ತದೆ ಎಂದು ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ಹೇಳಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating