ನವದೆಹಲಿ: ಬಿಹಾರ ವಿಧಾನಸಭೆ ಹಾಗೂ ಇತರ ರಾಜ್ಯಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಬಳಿಕ ಕಾಂಗ್ರೆಸ್ನಲ್ಲಿ ಸಾಕಷ್ಟು ತಳಮಳಗಳು ಸೃಷ್ಟಿಯಾಗಿವೆ.
ರಾಹುಲ್ ಗಾಂಧಿಯನ್ನು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ‘ಅಪಕ್ವ’ ಎಂದು ಕರೆದ ಬೆನ್ನಿಗೆ, ಒಬಾಮ ಅವರನ್ನೂ ‘ಬಾವಿಯೊಳಗಿನ ಕಪ್ಪೆ’ ಎಂದು ಕರೆದಿತ್ತು ಕಾಂಗ್ರೆಸ್.
ಚುನಾವಣೆಗಳ ಕಾಲದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಪಿಕ್ನಿಕ್ಗೆ ತೆರಳಿದ್ದರು ಎಂಬ ಬಿಹಾರದ ‘ಮಹಾ ಗಠಬಂಧನ’ದ ಮೈತ್ರಿ ಪಕ್ಷ ಆರ್ಜೆಡಿ ಆರೋಪ ಮಾಡಿದ್ದು, ಕಾಂಗ್ರೆಸ್ ಮತ್ತೆ ಕೆಂಡಾಮಂಡಲವಾಗಿದೆ.
ಬಿಹಾರ ಚುನಾವಣೆಗಳಲ್ಲಿ ಮೈತ್ರಿಕೂಟವು ಸೋಲನ್ನಪ್ಪುತ್ತಿದ್ದರೆ ರಾಹುಲ್ ಗಾಂಧಿ ಶಿಮ್ಲಾದಲ್ಲಿ ಪಿಕ್ನಿಕ್ ಆಚರಿಸುತ್ತಿದ್ದರು ಎಂದು ರಾಷ್ಟ್ರೀಯ ಜನತಾ ದಳ ಮುಖಂಡ ಶಿವಾನಂದ ತಿವಾರಿ ಟೀಕಿಸಿದ್ದರು.
ಇದಕ್ಕೆ ಸೋಮವಾರ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿಯನ್ನು ಟೀಕಿಸುವುದೊಂದು ಇವರಿಗೆ ಫ್ಯಾಶನ್ ಆಗಿಬಿಟ್ಟಿದೆ ಎಂದಿದೆ.
ಟ್ವೀಟ್ ಮೂಲಕ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, “ರಾಹುಲ್ರನ್ನು ಟೀಕಿಸುವುದು ಫ್ಯಾಶನ್ ಆಗಿಬಿಟ್ಟಿದೆ. ಪಟನಾದಲ್ಲಿ ಎಐಸಿಸಿಯ ಪ್ರಮುಖ ನಾಯಕರೆಲ್ಲ ಚುನಾವಣೆ ಸಂದರ್ಭದಲ್ಲಿ ಪ್ರಚಾರ ನಡೆಸಿದ್ದರು. ಭರವಸೆಯ ನಾಯಕರೆಲ್ಲರೂ ಕಾರ್ಯತತ್ಪರರಾಗಿದ್ದರು. ಅವರಿಗೆ ಹೊಣೆಗಾರಿಕೆಯಿರಲಿಲ್ಲವೇ? ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿಲ್ಲ, ಆದರೂ ಅವರನ್ನೇ ಗುರಿಯಾಗಿಸಿ ಟೀಕಿಸಲಾಗುತ್ತಿದೆ” ಎಂದು ಸಂಜಯ್ ಬರೆದಿದ್ದಾರೆ.
‘ಕಾಂಗ್ರೆಸ್ ಈ ಮಹಾ ಗಠಬಂಧನಕ್ಕೊಂದು ಕಪ್ಪು ಚುಕ್ಕೆ. ಅವರು 70 ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು, ಆದರೆ 70 ರ್ಯಾಲಿಗಳನ್ನೂ ಮಾಡಿರಲಿಲ್ಲ. ರಾಹುಲ್ ಗಾಂಧಿ 3 ದಿನ ಬಂದರು, ಪ್ರಿಯಾಂಕಾ ಬರಲೇ ಇಲ್ಲ. ಬಿಹಾರದ ಬಗ್ಗೆ ಏನೂ ಗೊತ್ತಿಲ್ಲದವರು ಇಲ್ಲಿ ಬಂದರು. ಇದು ಸರಿಯಲ್ಲ’ ಎಂದು ಶಿವಾನಂದ ತಿವಾರಿ ಭಾನುವಾರ ಟೀಕಿಸಿದ್ದರು.
ಚುನಾವಣಾ ಕಣದಲ್ಲಿ ಭಾರಿ ತುರುಸಿನ ಸ್ಫರ್ಧೆ ಏರ್ಪಡುತ್ತಿದ್ದರೆ, ರಾಹುಲ್ ಗಾಂಧಿ ಅವರು ಶಿಮ್ಲಾದಲ್ಲಿರುವ ಪ್ರಿಯಾಂಕಾ ಮನೆಗೆ ಪಿಕ್ನಿಕ್ ಹೋಗಿದ್ದರು. ಪಕ್ಷವು ಹೀಗೂ ನಡೆಯುತ್ತದೆಯೇ? ಇಂಥವುಗಳಿಂದ ಬಿಜೆಗೇ ಲಾಭವಾಗುತ್ತಿದೆ ಎಂದು ಅವರು ಹೇಳಿದ್ದರು.
ಇದರ ನಡುವೆಯೇ, ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ, ವಕೀಲ ಕಪಿಲ್ ಸಿಬಲ್ ಅವರೂ ಪಕ್ಷದ ನಾಯಕತ್ವವನ್ನು ಟೀಕಿಸಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating