ನವದೆಹಲಿ: ‘ಫೈವ್ ಸ್ಟಾರ್’ ಸಂಸ್ಕೃತಿಯಿದ್ದರೆ ಚುನಾವಣೆ ಗೆಲ್ಲಲಾಗದು. ಪಕ್ಷದ ಪದಾಧಿಕಾರಿಗಳ ಚುನಾವಣೆ ಆಗಲೇಬೇಕಿದೆ ಎಂದು ಹಿರಿಯ ಕಾಂಗ್ರೆಸಿಗ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬೀ ಆಜಾದ್ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮತ್ತೆ ಗುಡುಗಿದ್ದಾರೆ.
ಬಿಹಾರ ಚುನಾವಣೆಗಳಲ್ಲಿ ಕೇವಲ 19 ಸ್ಥಾನಗಳನ್ನು ಗೆದ್ದು ಕಳಪೆ ಪ್ರದರ್ಶನ ನೀಡಿದ ಬಳಿಕ ಕಾಂಗ್ರೆಸ್ನಲ್ಲಿ ಆತ್ಮವಿಮರ್ಶೆಯಾಗಬೇಕೆಂದು ಹಲವಾರು ಮುಖಂಡರು ಈಗಾಗಲೇ ಧ್ವನಿಯೆತ್ತಿದ್ದಾರೆ. ಕಪಿಲ್ ಸಿಬಲ್, ಆಜಾದ್ ಸಹಿತ 23 ಕಾಂಗ್ರೆಸಿಗರು ಸಾಕಷ್ಟು ಹಿಂದೆಯೇ ಈ ಕುರಿತು ಪಕ್ಷದ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಪತ್ರ ಬರೆದು, ಪಕ್ಷದ ಹೈಕಮಾಂಡ್ನ ಕೆಂಗಣ್ಣಿಗೆ ಗುರಿಯಾಗಿದ್ದರು.
ಕೋವಿಡ್-19ನಿಂದಾಗಿ ನಾಯಕತ್ವಕ್ಕೆ ಪಕ್ಷದ ಆಂತರಿಕ ಚುನಾವಣೆಗಳನ್ನು ನಡೆಸಲಾಗಲಿಲ್ಲ ಎಂಬುದು ಸತ್ಯ. ಆದರೆ, ಮುಂದಿನ ಆರು ತಿಂಗಳೊಳಗಾದರೂ ಇದು ನಡೆಯಬೇಕಿದೆ ಎಂದು ಆಜಾದ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಮಗಾದ ಸೋಲುಗಳ ಬಗ್ಗೆ, ವಿಶೇಷವಾಗಿ ಬಿಹಾರ ಮತ್ತು ಉಪಚುನಾವಣೆಗಳಲ್ಲಾದ ಪರಿಸ್ಥಿತಿಯ ಬಗ್ಗೆ ನಮಗೆ ಚಿಂತೆಯಿದೆ. ಇದಕ್ಕೆ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ನಾಯಕತ್ವವನ್ನು ದೂಷಿಸಲಾರೆ. ಪಕ್ಷದಲ್ಲಿ ಪದಾಧಿಕಾರಿಗಳ ನೇಮಕವಾದ ತಕ್ಷಣ ಅವರು ಜವಾಬ್ದಾರಿ ಅರಿತು ಪಕ್ಷವನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಬಿಜೆಪಿಗೆ ಸಮರ್ಥ ಎದುರಾಳಿ ಕಾಂಗ್ರೆಸ್ ಅಲ್ಲ: ಕಪಿಲ್ ಸಿಬಲ್ ಮತ್ತೆ ಅಸಮಾಧಾನ
ಸದ್ಯಕ್ಕೆ ಪಕ್ಷದಲ್ಲಿ ಯಾರು ಬೇಕಿದ್ದರೂ ಯಾವುದೇ ಹುದ್ದೆಗೆ ಏರಬಹುದು. ನಮ್ಮ ಜನರು ತಳಮಟ್ಟದ ಕಾರ್ಯಕರ್ತರೊಂದಿಗಿನ ಸಂಪರ್ಕ ಕಳೆದುಕೊಂಡಿದ್ದಾರೆ. ಈ ರೀತಿಯ ಫೈವ್ ಸ್ಟಾರ್ ಸಂಸ್ಕೃತಿಯಿಂದ ಚುನಾವಣೆ ಗೆಲ್ಲಲಾಗದು. ಈಗ ಹೇಗಾಗಿಬಿಟ್ಟಿದೆಯೆಂದರೆ, ಪಕ್ಷದ ಟಿಕೆಟ್ ಸಿಕ್ಕ ತಕ್ಷಣ ನಾಯಕರು ಮೊದಲು ಫೈವ್ ಸ್ಟಾರ್ ಹೋಟೆಲ್ ಬುಕ್ ಮಾಡುತ್ತಾರೆ. ರಸ್ತೆ ಸರಿ ಇಲ್ಲದಿದ್ದರೆ ಅವರು ಅಲ್ಲಿ ಹೋಗುವುದಿಲ್ಲ ಎಂದು ನಾಯಕರ ಬಗ್ಗೆ ಕೆಂಡ ಕಾರಿದರು ಆಜಾದ್.
ಇದನ್ನೂ ಓದಿ: ಎಲೆಕ್ಷನ್ ವೇಳೆ ‘ಪಿಕ್ನಿಕ್’: ‘ರಾಹುಲ್ ಗಾಂಧಿಯನ್ನು ಟೀಕಿಸೋದು ಫ್ಯಾಶನ್’ ಎಂದ ಕಾಂಗ್ರೆಸ್
ಪಕ್ಷಕ್ಕೆ ಅಧ್ಯಕ್ಷರೇ ಇಲ್ಲವೆಂಬ ನಂಬಿಕೆ ಜನರಲ್ಲಿ ಬಂದುಬಿಟ್ಟಿದೆ. ಪಕ್ಷದಲ್ಲಿ ಚುನಾವಣೆಯಾಗಬೇಕು. ಅಕ್ಟೋಬರ್ನಲ್ಲಿ ಚುನಾವಣೆಯಾಗಬೇಕೆಂದು ರಾಹುಲ್, ಸೋನಿಯಾ ಹೇಳಿದ್ದರು. ಆದರೀಗ ಕೋವಿಡ್, ಆರು ತಿಂಗಳ ಬಳಿಕವಾದರೂ ಚುನಾವಣೆ ನಡೆಯಲಿ. ನಂತರ ಬ್ಲಾಕ್ ಮಾಟ್ಟದ ಚುನಾವಣೆಯಾಗಬೇಕಿದೆ. ಬಿಹಾರದಲ್ಲಿ ಬ್ಲಾಕ್ ಮಟ್ಟದ ಸಾವಿರಾರು ಹುದ್ದೆಗಳು ಖಾಲಿ ಇರುವಾಗ, ನಾವು ಚುನಾವಣೆ ಗೆಲ್ಲುವುದಾದರೂ ಹೇಗೆ ಸಾಧ್ಯ ಎಂದು ಆಜಾದ್ ಪ್ರಶ್ನಿಸಿದರು.
ಕಾಂಗ್ರೆಸ್ ವಿಸರ್ಜಿಸಲು ಗಾಂಧೀಜಿಯೇ ಹೇಳಿದ್ದರಲ್ಲ: ಬಿಜೆಪಿ
ಇನ್ನೊಂದೆಡೆ, ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಾತನಾಡುತ್ತಾ, ‘ಕಾಂಗ್ರೆಸ್ ಸಾಯುತ್ತಿದೆ ಅಂತ ನಾವು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೆವು. ಕೊನೆಗೂ ಆಜಾದ್ಜೀ, ಕಪಿಲ್ ಸಿಬಲ್ಜೀ ಮತ್ತು ಚಿದಂಬರಂಜೀ ಅವರೂ ಅದನ್ನು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಪುನಶ್ಚೇತನವಾಗುತ್ತದೆಂದು ನಮಗೆ ಕಾಣುವುದಿಲ್ಲ’ ಎಂದು ಅವರು ಸುದ್ದಿಗಾರರಲ್ಲಿ ಮಾತನಾಡುತ್ತಾ ಹೇಳಿದರು.
ಸ್ವತಃ ಗಾಂಧೀಜಿಯೇ ಪಕ್ಷವನ್ನು ವಿಸರ್ಜಿಸಬೇಕು ಎಂದು ಅಂದೇ ಹೇಳಿದ್ದರು ಎಂದು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಮಹಾತ್ಮ ಗಾಂಧಿಜಿಯ ಮಾತುಗಳನ್ನು ಉಲ್ಲೇಖಿಸಿ ಮಿಶ್ರಾ ಹೇಳಿದರು.
ಇದನ್ನೂ ಓದಿ: Rajya Sabha: 10ರಲ್ಲಿ ಒಂದು ಸ್ಥಾನವೂ ಇಲ್ಲ: ಕಾಂಗ್ರೆಸ್ ಮಹಾಪತನಕ್ಕೆ ಸಾಕ್ಷಿಯಾದ ಮೇಲ್ಮನೆ ಚುನಾವಣೆ
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating