ನವದೆಹಲಿ: ದೇಶದ ರೈತರ ಸ್ವಾವಲಂಬನೆಗೆ ಪೂರಕವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯಿದೆಗಳನ್ನು ನರೇಂದ್ರ ಮೋದಿಯ ವಿರೋಧ ಎಂಬ ಏಕೈಕ ಕಾರಣಕ್ಕೆ ವಿರೋಧಿಸುವಂತೆ ರೈತರನ್ನು ಎತ್ತಿ ಕಟ್ಟಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ.
ಆದರೆ, ಸಾವಿರಾರು ರೈತರು ದೆಹಲಿ, ಹರ್ಯಾಣ, ಪಂಜಾಬ್ಗಳಲ್ಲಿ ಕಾಂಗ್ರೆಸ್ನಿಂದ ಪ್ರೇರಣೆ ಪಡೆದು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ, ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಇದೀಗ ಕದಡಿದ ಕೊಳದಲ್ಲಿ ಮೀನು ಹಿಡಿಯಲು ಹೊರಟಿದೆ.
ಖಲಿಸ್ತಾನ್ ಎಂಬ ಪ್ರತ್ಯೇಕ ಪಂಜಾಬಿ ದೇಶಕ್ಕಾಗಿ ನಡೆಯುವ ಹೋರಾಟ ಬೆಂಬಲಿಸಿದರೆ ರೈತರಿಗೆ 10 ಲಕ್ಷ ಡಾಲರ್ ಹಣಕಾಸು ನೀಡುವುದಾಗಿ ಘೋಷಿಸಿರುವ ಅಂಶವನ್ನು ಸುದ್ದಿಸಂಸ್ಥೆ IANS ಸೆಪ್ಟೆಂಬರ್ ತಿಂಗಳಲ್ಲೇ ವರದಿ ಮಾಡಿತ್ತು.
ಇದನ್ನೂ ಓದಿ: Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಈ ರೀತಿಯ ಭರ್ಜರಿ ಕೊಡುಗೆಯಿಂದ ಭದ್ರತೆ ಮತ್ತು ಗುಪ್ತ ದಳಗಳು ಎಚ್ಚೆತ್ತುಕೊಂಡಿದ್ದು, ಎರಡೂ ರಾಜ್ಯಗಳ ಕಾನೂನು ಪರಿಪಾಲನಾ ಸಂಸ್ಥೆಗಳಿಗೆ ಈ ಮಾಹಿತಿಯನ್ನು ಹಂಚಿಕೊಂಡು, ಎಚ್ಚರಿಕೆಯಲ್ಲಿರುವಂತೆ ಸೂಚಿಸಿವೆ.
ರೈತರ ಹೋರಾಟದಂತಹಾ ಮಹತ್ವದ ವಿಚಾರದಲ್ಲಿ ಭಾರತ-ವಿರೋಧೀ ಅಜೆಂಡಾವನ್ನು ತೂರಿಸಲು ಪ್ರಯತ್ನಿಸುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೆಪ್ಟೆಂಬರ್ ತಿಂಗಳಲ್ಲೇ ಎರಡೂ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಸೂಚಿಸಲಾಗಿತ್ತು.
ಕೃಷಿ ಸಾಲ ತೆಗೆದುಕೊಂಡು ಕಟ್ಟಲಾಗದಿರುವ ರೈತರಿಗೆ 10 ಲಕ್ಷ ಡಾಲರ್ ವಿತರಿಸುವುದಾಗಿಯೂ ಖಲಿಸ್ತಾನ್ ನಿಷೇಧಿತ ಸಂಘಟನೆ ಘೋಷಿಸಿದೆ. ಅದರ ಘೋಷಣೆಯ ಪ್ರಕಾರ, ಅಕ್ಟೋಬರ್ 1ರಿಂದ 8ರ ನಡುವೆ, ಖಲಿಸ್ತಾನ್ ರೆಫರೆಂಡಮ್ 2020ಗೆ 25 ಮತಗಳನ್ನು ದಾಖಲಿಸುವ ಯಾವುದೇ ರೈತನಿಗೆ ಕೃಷಿ ಸಾಲ ತೀರಿಸಲು ಅನುಕೂಲವಾಗುವಂತೆ ತಲಾ 5 ಸಾವಿರ ರೂ. ಸಹಾಯ ನೀಡಲಾಗುತ್ತದೆ.
ಇದನ್ನೂ ಓದಿ: ರೈತರ ಹೋರಾಟದಲ್ಲಿ ಸಮಾಜಘಾತುಕರು: ಬಿಜೆಪಿ, ಮೋದಿ ಗಮನಿಸಬೇಕಿದೆ
ಕೃಷಿ ಕಾನೂನುಗಳನ್ನು ‘ರೈತರಿಂದ ಭೂಮಿ ಕಿತ್ತುಕೊಳ್ಳುವ ವಸಾಹತುಶಾಹಿ ಅಜೆಂಡಾ’ ಎಂಬ ಕಾಂಗ್ರೆಸ್ ಆರೋಪವನ್ನೇ ಮುಂದಿಟ್ಟುಕೊಂಡಿರುವ ಎಸ್ಎಫ್ಜೆ, ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಈ ರೀತಿಯ ಕೊಡುಗೆಯನ್ನು ಘೋಷಿಸಿದೆ.
ಖಲಿಸ್ತಾನ್ ಪ್ರತ್ಯೇಕ ದೇಶದ ಹೋರಾಟಕ್ಕಾಗಿ ಉಗ್ರವಾದ, ಭಯೋತ್ಪಾದನೆಯಲ್ಲಿ ತೊಡಗಿದ್ದ ಇದೇ ಪಂಥದ ಸಿಖ್ ಉಗ್ರಗಾಮಿಗಳು, ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯನ್ನೂ ಹತ್ಯೆ ಮಾಡಿದ್ದರು ಎಂಬುದು ಗಮನಾರ್ಹ. ಅದೇ ಸಂಘಟನೆ ಮತ್ತು ಕಾಂಗ್ರೆಸ್ ಈಗ ರೈತರ ಹೆಸರಿನಲ್ಲಿ ನರೇಂದ್ರ ಭಾರತ ಸರ್ಕಾರದ ವಿರುದ್ಧ ಕೈಜೋಡಿಸಿವೆ.
ಪ್ರತ್ಯೇಕವಾದಕ್ಕಾಗಿ ಎಸ್ಎಫ್ಜೆ, ಆನ್ಲೈನ್ನಲ್ಲೇ ಜನಮತಗಣನೆ 2020 (ರೆಫರೆಂಡಮ್ 2020) ಅಭಿಯಾನವನ್ನು ಜುಲೈ 4ರಂದು ಆರಂಭಿಸಿತ್ತು. ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳು ಭಾರತದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುವುದಕ್ಕಾಗಿ ಅವರಿಗೆ ಹಣಕಾಸು ಮತ್ತು ಮೂಲಸೌಕರ್ಯದ ನೆರವನ್ನು ಒದಗಿಸುತ್ತಿದೆ. ಇದಕ್ಕೆ ಪಾಕಿಸ್ತಾನದ ಐಎಸ್ಐ ಬೆಂಬಲವೂ ಇದೆ. ಆದರೆ, ಭಾರತೀಯ ಸಿಕ್ಖರು ಎಸ್ಎಫ್ಜೆಯ ಪ್ರತ್ಯೇಕತಾವಾದವನ್ನು ಬೆಂಬಲಿಸುತ್ತಿಲ್ಲ.
ಕೇಂದ್ರವು ಕಳೆದ ವರ್ಷದ ಜುಲೈ ತಿಂಗಳಲ್ಲಿ ಈ ಸಂಘಟನೆಯನ್ನು ಕಾನೂನು ವಿರೋಧಿ ಸಂಘಟನೆ ಎಂದು ಘೋಷಿಸಿತ್ತು ಮತ್ತು ಅದರ ಪ್ರಮುಖ ಮುಖಂಡರಾದ ಗುರ್ಪತ್ವಂತ್ ಸಿಂಗ್ ಪನ್ನೂನ್ ಮತ್ತು ಹರದೀಪ್ ಸಿಂಗ್ ನಿಜ್ಜರ್ ಅವರನ್ನು ಭಯೋತ್ಪಾದಕರು ಎಂದು ಘೋಷಿಸಿತ್ತು.

Average Rating