ನವದೆಹಲಿ: ರೈತರ ಪ್ರತಿಭಟನೆಯನ್ನು ಟುಕ್ಡೇ ಟುಕ್ಡೇ ಗ್ಯಾಂಗ್ ಸೇರಿಕೊಂಡು, ದೆಹಲಿಯ ಶಹೀನ್ಬಾಗ್ನಂತಹಾ ಹಿಂಸಾತ್ಮಕ ಪ್ರತಿಭಟನೆಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿಯ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಅಪಪ್ರಚಾರದಿಂದಾಗಿ ದಕ್ಷಿಣ ದೆಹಲಿಯ ಶಹೀನ್ಬಾಗ್ನಲ್ಲಿ ಈ ವರ್ಷಾರಂಭದಲ್ಲಿ ಮುಸಲ್ಮಾನರು ಭಾರಿ ಪ್ರತಿಭಟನೆ ನಡೆಸಿದ್ದು, ಅದು ಹಿಂಸಾತ್ಮಕವಾಗಿತ್ತು ಮತ್ತು ಹಲವಾರು ಜನರು ಜೀವ ಕಳೆದುಕೊಂಡಿದ್ದರು.
ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಉಗ್ರಗಾಮಿಗಳ ಪರ ಫಲಕಗಳು, ಘೋಷಣೆ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಹತ್ಯೆಯ ಬೆದರಿಕೆಗಳನ್ನೆಲ್ಲ ಗಮನಿಸಿದರೆ, ಇದೊಂದು ದೇಶದಲ್ಲಿ ಕ್ಷೋಭೆ ಸೃಷ್ಟಿಸುವ ಅತ್ಯಂತ ಯೋಜಿತ ಸಂಚು ಎಂಬುದು ಗೊತ್ತಾಗುತ್ತದೆ ಎಂದವರು ಆರೋಪಿಸಿದ್ದಾರೆ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮತ್ತು ಸಿಎಎ ವಿರೋಧಿಸಿದ ವ್ಯಕ್ತಿಗಳು ಮತ್ತು ಗುಂಪುಗಳು ರೈತರ ಪ್ರತಿಭಟನೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಂದರೆ ಟುಕ್ಡೇ ಟುಕ್ಡೇ ಗ್ಯಾಂಗ್ ಈಗ ಶಹೀನ್ಬಾಗ್ 2.0 ಪ್ರಯೋಗ ಮಾಡಲು ಮತ್ತು ದೇಶದಲ್ಲಿ ಮತ್ತೊಮ್ಮೆ ಅನಗತ್ಯವಾಗಿ ಕ್ಷೋಭೆ ಸೃಷ್ಟಿಸಲು ಸಜ್ಜಾಗಿರುವುದು ಇದರಿಂದ ವೇದ್ಯವಾಗುತ್ತದೆ ಎಂದವರು ಹೇಳಿದ್ದಾರೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ಇತರ ಕಡೆಗಳ ರೈತರು, ತಮ್ಮದೇ ಹಿತಕ್ಕಾಗಿ ಕೇಂದ್ರವು ರೂಪಿಸಿರುವ ಹೊಸ ಕೃಷಿ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧಿಸುತ್ತಿದ್ದಾರೆ. ರೈತರ ಪರವಾಗಿರುವ ಕಾಯ್ದೆಗಳು, ಅವರ ವಿರುದ್ಧವಾಗಿದೆ ಎಂದು ಅಪಪ್ರಚಾರ ಮಾಡುವ ಮೂಲಕ ದೇಶಾದ್ಯಂತ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುದು ಬಿಜೆಪಿ ಹೇಳಿಕೆ.
ಕಳೆದೊಂದು ವಾರದಿಂದ ರೈತರು ದೆಹಲಿ-ಹರ್ಯಾಣ ಗಡಿಯ ಸಿಂಘು ಮತ್ತು ಟಿಕ್ರಿ ಭಾಗಗಳಲ್ಲಿ ತಡೆಯೊಡ್ಡಿದ್ದಾರೆ.
ಹೊಸ ಕಾನೂನಿನಿಂದ ಆಗುವ ಲಾಭಗಳ ಬಗ್ಗೆ ನಿಜವಾದ ರೈತರಿಗೆ ಅರಿವಾಗಿದೆ ಮತ್ತು ಅರಿವಾಗುತ್ತಿದೆ. ಅಂಥವರೆಲ್ಲ ಸೇರಿಕೊಂಡು ಈ ಟುಕ್ಡೇ ಟುಕ್ಡೇ ಗ್ಯಾಂಗಿನ ದುರುದ್ದೇಶಗಳನ್ನು ವಿಫಲಗೊಳಿಸಬೇಕಾಗಿದೆ ಎಂದು ತಿವಾರಿ ಆಗ್ರಹಿಸಿದ್ದಾರೆ.
ದೆಹಲಿ ದಂಗೆಯ ಸಂಚುಕೋರರು ಆ ದಿನ ತಮ್ಮ ದುರುದ್ದೇಶವನ್ನು ರೂಪಿಸುವಲ್ಲಿ ಸಫಲರಾಗಿದ್ದರು. ಇದೀಗ ರೈತರ ಹೆಸರಿನಲ್ಲಿ ಮತ್ತೊಮ್ಮೆ ದೇಶಾದ್ಯಂತ ದಂಗೆಗೆ ಪ್ರಚೋದಿಸುತ್ತಿದ್ದಾರೆ. ಈ ಅಪಪ್ರಚಾರ ಪ್ರೇರಿತ ಸಂಚನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದವರು ಹೇಳಿದ್ದಾರೆ.
ತಿವಾರಿ ಅವರ ಉತ್ತರ ದೆಹಲಿ ಕ್ಷೇತ್ರದಲ್ಲಿ ಫೆಬ್ರವರಿ ತಿಂಗಳಲ್ಲಿ ಸಿಎಎ ವಿರೋಧದ ಹೆಸರಲ್ಲಿ ಭಾರಿ ಗಲಭೆಗಳಾಗಿದ್ದವು. 50ಕ್ಕೂ ಹೆಚ್ಚು ಮಂದಿ ಅಲ್ಲಿ ಬಲಿಯಾಗಿದ್ದರು ಮತ್ತು ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

Average Rating