ನವದೆಹಲಿ: ಕೇಂದ್ರದ ಕೃಷಿ ಕಾನೂನನ್ನು ರೋಷಾವೇಷದ ನಾಟಕದ ಮೂಲಕ ಅಸೆಂಬ್ಲಿಯಲ್ಲೇ ಹರಿದು ‘ಪೌರುಷ’ ತೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮತ್ತೊಂದು ನಾಟಕವೂ ಬಯಲಾಗಿದೆ.
ಕೃಷಿ ಕಾನೂನನ್ನು ಅಸೆಂಬ್ಲಿಯಲ್ಲಿ ಹರಿದು ಹಾಕಿ, ಸಂವಿಧಾನಕ್ಕೂ ಅಪಚಾರ ಎಸಗಿದ ಕೇಜ್ರಿವಾಲ್ ನಿಲುವಿಗೆ ದೇಶದ ಕೆಲವು ಮೋದಿ ವಿರೋಧಿಗಳೆಲ್ಲ ಶಹಬ್ಬಾಸ್ ಹೇಳಿದ್ದೇ ಹೇಳಿದ್ದು, ಹಾಡಿ ಹೊಗಳಿದ್ದೇ ಹೊಗಳಿದ್ದು.
ಆದರೆ, ನರೇಂದ್ರ ಮೋದಿಗೆ ‘ಸವಾಲು ಹಾಕಿದ’ ಕೇಜ್ರಿವಾಲ್ ಅಂತೆಲ್ಲ ಹೊಗಳುಭಟರಿಂದ ಹೇಳಿಕೊಳ್ಳುವಷ್ಟರಲ್ಲೇ ಅವರು ಮುಖಭಂಗ ಅನುಭವಿಸಿದ್ದಾರೆ.
ಯಾಕೆಂದರೆ, ರೈತರಿಗೆ ಅನುಕೂಲವಾಗುತ್ತದೆ ಅಂತ ನವೆಂಬರ್ 23ರಂದು ದೆಹಲಿಯಲ್ಲೂ ಕೇಜ್ರಿವಾಲ್ ತಾವೇ ಅಧಿಸೂಚನೆ ಹೊರಡಿಸಿದ್ದ ಅಂಶವನ್ನು ಹಿಡಿದು ನೆಟ್ಟಿಗರು ಯದ್ವಾತದ್ವಾ ಕಾಲೆಳೆಯುತ್ತಿದ್ದಾರೆ.
ಇಷ್ಟೇ ಆದರೆ ಪರವಾಗಿರಲಿಲ್ಲ. 2017ರ ಪಂಜಾಬ್ ಚುನಾವಣೆಗಳಿಗೆ ಆಮ್ ಆದ್ಮೀ ಪಾರ್ಟಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿಯೂ ಕೇಂದ್ರದ ಈ ಕಾನೂನುಗಳಲ್ಲಿರುವ ಅಂಶಗಳೇ ಇದ್ದು, ತಾವು ರೈತರ ಪರ ಅಂತೆಲ್ಲಾ ಬಿಂಬಿಸಿಕೊಂಡಿದ್ದರು ಕೇಜ್ರಿವಾಲ್. ಇದೇ ಪರಿಸ್ಥಿತಿ ಕಾಂಗ್ರೆಸ್ಗೂ ಆಗಿತ್ತು. ಅದು ಕೂಡ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನೇ ಬಿಂಬಿಸಿತ್ತು. ಈಗ ಕೇಜ್ರಿವಾಲ್ ಮತ್ತು ಕಾಂಗ್ರೆಸ್ – ಇಬ್ಬರು ಕೂಡ ಈ ಕಾಯ್ದೆಯ ಬಗ್ಗೆ ಅಪಪ್ರಚಾರ ಮಾಡುತ್ತಾ, ರಾಜಕೀಯಕ್ಕಾಗಿ ರೈತರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ
ಇನ್ನೊಂದೆಡೆ, ಮಾಜಿ ಕೇಂದ್ರ ಸಚಿವೆ ಹರಸಿಮ್ರತ್ ಕೌರ್ ಬಾದಲ್ ಕೂಡ ಗುರುವಾರ ದೆಹಲಿ ಮುಖ್ಯಮಂತ್ರಿಯ ಈ ‘ಚೀಪ್ ನಾಟಕ’ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೃಷಿಗೆ ಸಂಬಂಧಿಸಿದಂತೆ ಕೇಂದ್ರದ ಕಾನೂನುಗಳ ಅಧಿಸೂಚನೆ ಹೊರಡಿಸಿದ ಮೊದಲ ಸರ್ಕಾರಗಳಲ್ಲಿ ಕೇಜ್ರಿವಾಲ್ ಸರ್ಕಾರವೂ ಒಂದು. ಆದರೆ, ಗುರುವಾರ ದೆಹಲಿ ವಿಧಾನಸಭೆಯು ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಕೈಗೊಂಡಿತಲ್ಲದೆ, ಕೇಜ್ರಿವಾಲ್ ಅವರು ಈ ಕಾನೂನಿನ ಪ್ರತಿಗಳನ್ನು ವಿಧಾನಸಭೆಯಲ್ಲೇ ಹರಿದು ಹಾಕಿ, ‘ದೇಶದ ರೈತರಿಗೆ ವಿಶ್ವಾಸದ್ರೋಹ ಮಾಡಲಾಗದು’ ಅಂತೆಲ್ಲಾ ಬಡಬಡಾಯಿಸಿದ್ದರು.
ಆದರೆ ವಾಸ್ತವವಾಗಿ ವಿಶ್ವಾಸದ್ರೋಹ ಮಾಡಿದ್ದು ಇದೇ ಕೇಜ್ರಿವಾಲ್ ಎಂಬುದು ಅವರ ಅರಿವಿಗಿನ್ನೂ ಬಂದಂತಿಲ್ಲ. ಇದನ್ನೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಎತ್ತಿ ತೋರಿಸಿದ್ದಾರೆ. ಮತ್ತು ಈ ಕುರಿತಾಗಿ ಕೇಜ್ರಿವಾಲ್ ಹಾಗೂ ಅಮರಿಂದರ್ ಸಿಂಗ್ ನಡುವೆ ಟ್ವಿಟರ್ನಲ್ಲಿ ಮಹಾಯುದ್ಧವೇ ನಡೆದಿದ್ದು, ಜನರು ಇವರಿಬ್ಬರ ಎಡಬಿಡಂಗಿತನವನ್ನು ನೋಡಿ ನಗುತ್ತಿದ್ದಾರೆ.
ಇದನ್ನೂ ಓದಿ: ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ
ದೆಹಲಿ ಮುಖ್ಯಮಂತ್ರಿ ದೊಡ್ಡ ‘ಡ್ರಾಮೇಬಾಝ್’ (ನಾಟಕ ಮಾಡುವ ವ್ಯಕ್ತಿ) ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಈ ಬಾರಿ ಚೀಪ್ ಥಿಯೇಟ್ರಿಕ್ಸ್ಗೆ, ಪರ್ಯಾಯವೇ ಇಲ್ಲದ ಹಿಪಾಕ್ರಿಸಿ ತೋರ್ಪಡಿಸಿದ್ದಾರೆ. ಯಾಕೆಂದರೆ, ಇದೇ ಕಾನೂನನ್ನು ನವೆಂಬರ್ 23ರಂದು ಅವರೇ ತಮ್ಮ ಸರ್ಕಾರದ ಪರವಾಗಿ ಅಧಿಸೂಚನೆ ಹೊರಡಿಸಿದ್ದರು ಎಂಬುದನ್ನು ಹರಸಿಮ್ರತ್ ಕೌರ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಯಲು ಮಾಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶಾನುಸಾರ ಇದೇ ಕಾನೂನುಗಳ ಬಗ್ಗೆ ದೆಹಲಿಯಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ತನ್ನ ಹೆಸರಿಗೆ ಅಂಟಿದ ‘ಕಳಂಕ’ ತೊಡೆದು ಹಾಕಲು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈಗ ಮೊಸಳೆ ಕಣ್ಣೀರು ಸುರಿಸಿ ನಾಟಕ ಮಾಡಿದ್ದಾರೆ. ಕೇಜ್ರಿವಾಲ್ ಈ ರೀತಿ ನಾಟಕ ಮಾಡುವುದು, ರೈತರನ್ನು ಮೂರ್ಖರನ್ನಾಗಿಸುತ್ತಿರುವುದು ಇದೇನೂ ಮೊದಲ ಬಾರಿಯಲ್ಲ ಎಂದು ಶಿರೋಮಣಿ ಅಕಾಲಿ ದಳ ನಾಯಕಿ, ಭಟಿಂಡಾ ಸಂಸದೆ ಕೌರ್ ಆರೋಪಿಸಿದ್ದಾರೆ.
ಮತ್ತೊಂದೆಡೆ ಪಂಜಾಬ್ನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಕೇಜ್ರಿವಾಲ್ ನಾಟಕ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕೃಷಿ ಕಾನೂನಿನ ಕರಡು ರೂಪಿಸಿದ ಸಮಿತಿಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದ್ದರೂ, ಏನೂ ಮಾತನಾಡಿಲ್ಲ ಎಂದು ಕೇಜ್ರಿವಾಲ್ ದೂರಿದರೆ, ನ.23ರಂದು ಅಧಿಸೂಚನೆ ಹೊರಡಿಸಿದ ಬಳಿಕ, ಈಗ ಕೇಂದ್ರದ ಕಾನೂನು ಸರಿ ಇಲ್ಲ ಎಂದು ನಾಟಕ ಮಾಡುತ್ತಿರುವವರು ನೀವು ಅಂತ ಕೇಜ್ರಿವಾಲ್ಗೆ ಅಮರಿಂದರ್ ಕುಟುಕಿದ್ದಾರೆ. ಇಬ್ಬರು ಮುಖ್ಯಮಂತ್ರಿಗಳೂ ತಮ್ಮ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿಕೊಂಡಿದ್ದಾರೆ.
ವಾಸ್ತವವಾಗಿ ಕೇಂದ್ರದ ಕೃಷಿ ಕಾನೂನುಗಳಿಂದ ರೈತರಿಗೆ ಯಾವುದೇ ತೊಂದರೆಯಿಲ್ಲ, ಅವರಿಗೆ ಲಾಭವೇ ಜಾಸ್ತಿ ಎಂದು ಕಾಂಗ್ರೆಸ್ಗೂ ಗೊತ್ತಿದೆ ಮತ್ತು ಈ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲೇ ಅದು ಆಶ್ವಾಸನೆ ನೀಡಿತ್ತು. ಆದರೆ, ಈಗ ಮೋದಿ ಸರ್ಕಾರ ಈ ರೈತರಿಗೆ ಲಾಭಪ್ರದವಾಗಿರುವ ಕಾನೂನನ್ನು ಜಾರಿಗೊಳಿಸಿದಾಕ್ಷಣ ಅಪಪ್ರಚಾರ ಮಾಡುತ್ತಾ, ಕಾಯ್ದೆ ವಿರುದ್ಧ ಜನಾಭಿಪ್ರಾಯ ಮೂಡಿಸಿ, ರೈತರಿಂದ ಪ್ರತಿಭಟನೆ ಮಾಡಿಸುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿವೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಪದೇ ಪದೇ ಹೇಳುತ್ತಲೇ ಬಂದಿದ್ದು, ರೈತರಿಗೆ ಯಾವುದೇ ತೊಂದರೆಯಾಗದು ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ

Average Rating