ಇದು Sengol (ಸೆಂಗೋಲ್) ಪ್ರಧಾನ ನರೇಂದ್ರ ಮೋದಿ ಭಾರತದಲ್ಲಿ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರ ದೂರದರ್ಶಿ ವ್ಯಕ್ತಿತ್ವದ ಫಲವಿದು. ದೇಶದಲ್ಲಿ ಹಿಂದೆ ಆಳಿದ ರಾಜ ಮಹಾರಾಜರೆಲ್ಲರೂ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದ್ದುದೇ ರಾಜದಂಡದ ಹಸ್ತಾಂತರದ ಮೂಲಕವಾಗಿ. ಬ್ರಿಟಿಷರಿಂದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಿದ ದ್ಯೋತಕವಾಗಿ ಬ್ರಿಟಿಷರೇ ನಮ್ಮ ನೆಲದ ಪರಂಪರೆಯನ್ನು ಅನುಸರಿಸಿ, ಜವಾಹರಲಾಲ್ ನೆಹರೂ ಅವರಿಗೆ ಅಧಿಕಾರ ಹಸ್ತಾಂತರಿಸಲು ಉಪಯೋಗಿಸಿದ್ದು ರಾಜದಂಡವನ್ನೇ. ಇದುವೇ ತಮಿಳುನಾಡಿನ ತಂಜಾವೂರಿನಿಂದ ತರಿಸಿಕೊಳ್ಳಲಾದ ಸೆಂಗೋಲ್ ಎಂಬ ರಾಜದಂಡ ಅಥವಾ ನ್ಯಾಯದಂಡ.
ಪ್ರಸ್ತುತ ಅಲಹಾಬಾದ್ ಮ್ಯೂಸಿಯಂನಲ್ಲಿರುವ ಈ ಸೆಂಗೋಲ್ ರಾಜದಂಡವನ್ನು ಪ್ರಧಾನಿ ದೂರದರ್ಶಿತ್ವದ ಫಲವಾಗಿ ರೂಪುಗೊಂಡಿರುವ ಸಂಸತ್ತಿನ ಹೊಸ ಕಟ್ಟಡದೊಳಗೆ ಪ್ರತಿಷ್ಠಾಪಿಸಲಾಗುತ್ತಿರುವುದು ಹೆಮ್ಮೆಯ ವಿಚಾರ. ಇದು ಭಾರತ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ರಾಷ್ಟ್ರೀಯ ಪ್ರತಿಷ್ಠೆಯ ವಿಚಾರವೂ ಹೌದು, ಭಾರತೀಯರ ಹೆಮ್ಮೆಯ ದ್ಯೋತಕವೂ ಹೌದು.
ಮೇ 28ರ ಭಾನುವಾರ ಅಮೃತಕಾಲದಲ್ಲಿ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಂದರ್ಭದಲ್ಲಿ ಈ ಇತಿಹಾಸವೊಂದು ಪುನರಾವರ್ತನೆಯಾಗಲಿದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಮೌಂಟ್ಬ್ಯಾಟನ್ ಅವರು ಇದೇ ರಾಜದಂಡವನ್ನು ನೆಹರು ಅವರಿಗೆ ಅಧಿಕಾರ ಹಸ್ತಾಂತರದ ದ್ಯೋತಕವಾಗಿ ಒಪ್ಪಿಸಿದ್ದರು.
ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದರೂ, ಭಾರತೀಯ ಪರಂಪರೆಯ ಅನುಸಾರ ಅಧಿಕಾರ ಹಸ್ತಾಂತರವಾಗಿರುವ ವಿಷಯ ಹೆಚ್ಚಿನವರಿಗಿನ್ನೂ ತಿಳಿದೇ ಇಲ್ಲ. ತಮಿಳುನಾಡಿನ ತಿರುವಾದುತುರೈ ಅಧೀನಂನ ಸಾಧು ಸಂತರ ಮೂಲಕವಾಗಿ ನೆಹರು ಅವರು ಈ ಸೆಂಗೋಲ್ ಅನ್ನು ಪಡೆದಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಆ ಅಮೂಲ್ಯ ಕ್ಷಣ ಇದೇ ಸಂಗೋಲ್ ಹಸ್ತಾಂತರದ ಕ್ಷಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಸೆಂಗೋಲ್ ಹೆಸರಿಗೇ ಅತ್ಯಂತ ಪವಿತ್ರವಾದ ಅರ್ಥವಿದೆ. ಸೆಮ್ಮೈ ಎಂಬ ತಮಿಳು ಪದದ ಅರ್ಥ ಧರ್ಮಶೀಲತೆ ಅಥವಾ ನ್ಯಾಯನಿಷ್ಠೆ. ಕೋಲ್ ಎಂಬುದರ ಅರ್ಥ ದಂಡ. ತಮಿಳುನಾಡಿನ ಪವಿತ್ರವಾದ ಧಾರ್ಮಿಕ ಮಠವೊಂದರ ಸಾಧುಗಳಿಂದ ಇದಕ್ಕೆ ಆಶೀರ್ವಾದ ದೊರೆತಿದೆ. ಇದು ಚೋಳ ರಾಜರ ಅವಧಿಯ ಸಂಪ್ರದಾಯಗಳಲ್ಲಿ ಒಂದಾಗಿತ್ತು. ಈ ದಂಡದ ಮೇಲ್ಭಾಗದಲ್ಲಿರುವ ನಂದಿಯು ನ್ಯಾಯಪರತೆಯ ಪ್ರತೀಕ. ಈ ಸೆಂಗೋಲ್ನ ಪಾವಿತ್ರ್ಯವೆಷ್ಟೆಂದರೆ, ಈ ರಾಜದಂಡ ಸ್ವೀಕರಿಸಿದ ವ್ಯಕ್ತಿಯು ನ್ಯಾಯನಿಷ್ಠೆಯಿಂದ ದೇಶವಾಳುವ ಆದೇಶ (ತಮಿಳಿನಲ್ಲಿ ಆಣೈ) ಪಡೆಯುತ್ತಾನೆ. ಚುನಾಯಿತರಾದ ಯಾವುದೇ ವ್ಯಕ್ತಿಯೂ ಇದನ್ನು ಮರೆಯುವುದಿಲ್ಲ, ಮರೆಯಬಾರದು ಎಂಬುದನ್ನು ಅದು ನೆನಪಿಸುತ್ತದೆ.
ಇದೇ ನ್ಯಾಯದಂಡವನ್ನು ಪ್ರಧಾನಿ ನರೇಂದ್ರ ಮೋದಿಯವರು, ಹೊಸ ಸಂಸತ್ ಕಟ್ಟಡದೊಳಗೆ ಸ್ಪೀಕರ್ (ಸಭಾಪತಿ) ಕುಳಿತುಕೊಳ್ಳುವ ವೇದಿಕೆಯಲ್ಲೇ ಪ್ರತಿಷ್ಠಾಪಿಸುತ್ತಿದ್ದಾರೆ.
ಸಾಧು ಸಂತರ ನಾಡಾಗಿರುವ ಭಾರತದಲ್ಲಿ ದೇಶವಾಳುವ ಕಾರ್ಯದಲ್ಲಿ ಸಾಧು ಸಂತರ ಕೊಡುಗೆ ಮಹತ್ತರವಾದದ್ದು ಎಂಬುದನ್ನೂ ಈ ನ್ಯಾಯದಂಡವು ಸಾರುತ್ತದೆ. 1947ರಲ್ಲಿ ತಮಿಳುನಾಡಿನಿಂದ ಸಾಧು ಸಂತರೇ ಬಂದು, ಈ ಸೆಂಗೋಲನ್ನು ಪವಿತ್ರ ಜಲದಿಂದ ಅಭಿಷೇಕ ಮಾಡಿ, ಭಾರತೀಯ ಸಂಪ್ರದಾಯದ ಪ್ರಕಾರ, ಎಂದರೆ ರಾಜಗುರುವಿನ ಮುಖಾಂತರ ಪಟ್ಟಾಭಿಷೇಕ ಕಾರ್ಯ ನೆರವೇರಿಸಲಾಗುತ್ತಿತ್ತು.
ಅಧೀನಂನ ಎಲ್ಲ 20 ಪೀಠಾಧ್ಯಕ್ಷರು ಈ ಅಮೂಲ್ಯ ಸಮಯದಲ್ಲಿ ಸಂಸತ್ತಿನಲ್ಲಿ ಹಾಜರಿದ್ದು, ಪವಿತ್ರ ಕಾರ್ಯದಲ್ಲಿ ಆಶೀರ್ವದಿಸಲಿದ್ದಾರೆ. ಈ ನ್ಯಾಯದಂಡ ರಚನೆಯಲ್ಲಿ ಪಾತ್ರ ವಹಿಸಿದ್ದ 96 ವರ್ಷ ಪ್ರಾಯದ ಶ್ರೀ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಕೂಡ ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ವಿಶೇಷ.

Average Rating