ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯ ಮೇಲೆ ಪಾತಕಿ ಪಾಕಿಸ್ತಾನದ ಉಗ್ರಗಾಮಿಗಳು ನಡೆಸಿದ ಭಯೋತ್ಪಾದಕ ದಾಳಿಯ 12ನೇ ವರ್ಷದ ದುಃಖಾಚರಣೆ ಇಂದು. 2008ರ ನವೆಂಬರ್ 26ರಂದು ನಡೆದ ಈ ದಾಳಿಯು ಭಾರತಕ್ಕೆ ಮಾಡಿದ ಗಾಯವಿನ್ನೂ ಮರೆತಿಲ್ಲ. ಭಯೋತ್ಪಾದನೆ ವಿರುದ್ಧ ಭಾರತವೀಗ ಮತ್ತಷ್ಟು ಸಶಕ್ತ ನೀತಿಗಳನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
26/11 ದಾಳಿ ಎಂದೇ ಪರಿಗಣಿತವಾದ ಮುಂಬಯಿ ಮೇಲಿನ ಆತ್ಮಾಹುತಿ ದಾಳಿಯಲ್ಲಿ ಮಡಿದ ಪೊಲೀಸರು ಮತ್ತು ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ, ಇಂದು ಸಂವಿಧಾನ ರಚನಾ ದಿನಾಚರಣೆಯೂ ಆಗಿದ್ದು, ಈ ಸಂದರ್ಭದಲ್ಲಿ ಶಾಸಕಾಂಗ ಮುಖ್ಯಸ್ಥರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಗುಜರಾತ್ನ ನರ್ಮದಾ ತಟದಲ್ಲಿರುವ ಕೇವಾಡಿಯಾದಲ್ಲಿ ಎರಡು ದಿನಗಳ 80ನೇ ಅಖಿಲ ಭಾರತ ಅಧ್ಯಕ್ಷೀಯ ಅಧಿಕಾರಿಗಳ ಸಮಾವೇಶ ಆಯೋಜಿಸಲಾಗಿದ್ದು, ಈ ಸಮಾವೇಶದ ಘೋಷಾವಾಕ್ಯವೇ “ಪ್ರಜಾಪ್ರಭುತ್ವದ ಅಸ್ಮಿತೆಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಸಮರಸದ ಸಹಕಾರ”.
ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರತನ್ ಟಾಟಾ ಸಂದೇಶ
ಮುಂಬಯಿಯಲ್ಲಿ ದಾಳಿಗೀಡಾದ ಹೋಟೆಲ್ ತಾಜ್ ಪ್ಯಾಲೇಸ್ ಮುಖ್ಯಸ್ಥ, ಟಾಟಾ ಸಮೂಹದ ರತನ್ ಟಾಟಾ ಅವರೂ ಈ ಕರಾಳ ದಿನವನ್ನು ನೆನಪಿಸಿಕೊಂಡು, ಇನ್ಸ್ಟಾಗ್ರಾಂನಲ್ಲಿ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಕಷ್ಟದ ದಿನಗಳ ಕರಾಳ ನೆನಪುಗಳನ್ನು ದೂರವಾಗಿಸಿ, ಮುಂಬಯಿ ಮಂದಿಯ ಮನೋದೃಢತೆಯನ್ನು ಶ್ಲಾಘಿಸಿದ್ದಾರೆ.
ವೀರ ಯೋಧರು, ಪ್ರಜೆಗಳ ತ್ಯಾಗವನ್ನು ಗೌರವದಿಂದ ನೆನಪಿಸಿಕೊಂಡಿರುವ ಅವರು, ಈ ದಿನವನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.
12 ವರ್ಷಗಳ ಹಿಂದೆ ಸ್ಥಳೀಯರ ನೆರವು ಪಡೆದ 10 ಮಂದಿ ಪಾಕಿಸ್ತಾನಿ ಉಗ್ರಗಾಮಿಗಳು, ಏಕಕಾಲದಲ್ಲಿ ಮುಂಬಯಿಯ ಐದು ಕಡೆ ದಾಳಿ ನಡೆಸಿದ ಪರಿಣಾಮ 166 ಮಂದಿ ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದರು. ಉಗ್ರರ ನಿಗ್ರಹ ಕಾರ್ಯಾಚರಣೆ ನಾಲ್ಕು ದಿನಗಳ ಕಾಲ ಮುಂದುವರಿದು, 9 ಉಗ್ರರು ಮಟ್ಯಾಷ್ ಆಗಿದ್ದರೆ, ಒಬ್ಬ ಪಾತಕಿ ಮೊಹಮದ್ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ. ಆತನನ್ನು 2012ರಲ್ಲಿ ಗಲ್ಲಿಗೇರಿಸಲಾಗಿತ್ತು.
ಹೋಟೆಲ್ ತಾಜ್, ಒಬೆರಾಯ್, ಲಿಯೋಪೋಲ್ಡ್ ಕೆಫೆ, ನರಿಮನ್ ಹೌಸ್ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ (ರೈಲ್ವೇ ನಿಲ್ದಾಣ)ಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಮೃತರಲ್ಲಿ ವಿದೇಶೀಯರೂ ಸೇರಿದ್ದರು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating