ನವದೆಹಲಿ: ಆಮ್ ಆದ್ಮೀ ಪಕ್ಷದ ಮಾಜಿ ಕೌನ್ಸಿಲರ್ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ಇದರೊಂದಿಗೆ ಅನಗತ್ಯವಾಗಿ ಸಿಎಎ ವಿರೋಧಿಸಿ ದೇಶಾದ್ಯಂತ ದೊಂಬಿ ಸೃಷ್ಟಿಸಿದ ಪ್ರಕರಣದ ಹಿಂದೆ ಯಾರಿದ್ದಾರೆ, ಯಾಕಾಗಿ ವೃಥಾ ಪ್ರತಿಭಟನೆ, ಹಿಂಸಾಚಾರ, ದೊಂಬಿ ನಡೆಸಲಾಯಿತು ಎಂಬುದರ ಎಳೆಯೂ ಕೂಡ ತನಿಖಾಧಿಕಾರಿಗಳಿಗೆ ದೊರೆತಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರ ಪೂರ್ವ ನಿಯೋಜಿತ ಎಂಬುದನ್ನು ತಾಹಿರ್ ಹುಸೇನ್ ದೆಹಲಿ ಪೊಲೀಸರ ವಿಶೇಷ ತನಿಖಾ ದಳದೆದುರು ಒಪ್ಪಿಕೊಂಡಿದ್ದಾನೆ.
ತನ್ನ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಹಿಂದೂಗಳಿಗೆ ಪಾಠ ಕಲಿಸಲು ನಿರ್ಧರಿಸಿದ್ದೆ ಮತ್ತು ಈಶಾನ್ಯ ದೆಹಲಿಯ ದಂಗೆಯ ಮಾಸ್ಟರ್ ಮೈಂಡ್ ತಾನೇ ಎಂದು ಈಗ ಎಎಪಿಯಿಂದ ಅಮಾನತುಗೊಂಡಿರುವ ಆತ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್, ಇಶ್ರತ್ ಜಹಾಂ, ಖಾಲಿದ್ ಸೈಫಿ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯ ಡ್ಯಾನಿಶ್ನ ಬೆಂಬಲವನ್ನು ತಾನು ಪಡೆದಿದ್ದೆ ಎಂದು ಪೊಲೀಸರೆದುರು ತಾಹಿರ್ ಹೇಳಿದ್ದಾನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನ ಪೂರಕ ತೀರ್ಪು ಹಾಗೂ ಕೇಂದ್ರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ತನಗೆ ಆಕ್ರೋಶವಿತ್ತು. ಹೀಗಾಗಿ ಈ ಸಂಚು ರೂಪಿಸಿರುವುದಾಗಿ ಆತ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
2020 ಜನವರಿ 8ರಂದು ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಜೊತೆಗೆ ದೆಹಲಿಯ ಶಾಹಿನ್ ಬಾಗ್ನಲ್ಲಿರುವ ಪಿಎಫ್ಐ ಕಚೇರಿಯಲ್ಲಿ ತನ್ನ ಭೇಟಿ ಏರ್ಪಡಿಸಿದ್ದು ಖಾಲಿದ್ ಸೈಫಿ. ಸಮುದಾಯಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಾಗಿರುವಂತೆ ಖಾಲಿದ್ ಹೇಳಿದ್ದ. ಇದೇ ವೇಳೆ, ಪಿಎಫ್ಐ ಸದಸ್ಯ ಡ್ಯಾನಿಷ್ ‘ಹಿಂದೂಗಳ ವಿರುದ್ಧದ ಈ ಯುದ್ಧ’ಕ್ಕೆ ಎಲ್ಲ ರೀತಿಯ ಹಣಕಾಸು ಸಹಾಯ ಒದಗಿಸುತ್ತಾನೆ ಎಂದು ಖಾಲಿದ್ ಹೇಳಿದ. ಸಿಎಎ ವಾಪಸ್ ಪಡೆದುಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಏನಾದರೂ ರಾಷ್ಟ್ರೀಯ ಮಟ್ಟದ ಘಟನೆ ರೂಪಿಸಬೇಕೆಂದು ಈ ಮೂವರೂ ಸಂಚು ರೂಪಿಸಿದರು ಎಂದು ತಾಹಿರ್ ವಿವರಿಸಿದ್ದಾನೆ.
ತಾಹಿರ್ ಪ್ರಕಾರ, ಜನರು ಮನೆಯೊಳಗಿಂದ ಬೀದಿಗೆ ಬಂದು ಹಿಂದು ಸಮುದಾಯದ ವಿರುದ್ಧ ಹಿಂಸಾಚಾರ ಎಸಗುವಂತೆ ಅವರನ್ನು ಪ್ರಚೋದಿಸುವ ಹೊಣೆಯನ್ನು ಖಾಲಿದ್ ಸೈಫಿ ಹೊತ್ತುಕೊಂಡ. ಇದರ ಪರಿಣಾಮವಾಗಿಯೇ ಶಾಹಿನ್ ಬಾಗ್ನಲ್ಲಿ ಸಿಎಎ-ವಿರೋಧಿ ಪ್ರತಿಭಟನೆ ಆರಂಭಿಸಿದ್ದು, ಅದು ನಿಧಾನವಾಗಿ ರಾಜಧಾನಿಯ ಇತರೆಡೆ ಹಬ್ಬುವಂತೆ ನೋಡಿಕೊಳ್ಳಲಾಯಿತು.
ದಂಗೆಯ ರೂಪುರೇಷೆಗಳಿಗಾಗಿ ತಾಹಿರ್ ಫೆ.4ರಂದು ಪುನಃ ಸೈಫಿಯನ್ನು ಭೇಟಿಯಾದ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ವೇಳೆಯೇ ದಂಗೆ ನಡೆಸಿದರೆ, ಕೇಂದ್ರದ ಮೇಲೆ ಒತ್ತಡ ಹೇರಬಹುದು ಎಂಬುದು ಸೈಫಿ ಯೋಜನೆಯಾಗಿತ್ತು.
ಮದ್ಯ ಹಾಗೂ ಕೋಲ್ಡ್ ಡ್ರಿಂಕ್ಸ್ನ ಖಾಲಿ ಬಾಟಲಿಗಳನ್ನು ರದ್ದಿಯಿಂದ ಸಂಗ್ರಹಿಸಬೇಕು. ಕಟ್ಟಡ ನಿರ್ಮಾಣವಾಗುವ ಸ್ಥಳಗಳಿಂದ ಕಲ್ಲುಗಳನ್ನು ಸಂಗ್ರಹಿಸಬೇಕು, ಜೊತೆಗೆ ಪೆಟ್ರೋಲ್ ಮುಂತಾದ ಇಂಧನವನ್ನೂ ಕೂಡ ಸಂಗ್ರಹಿಸಿ ಅದನ್ನು ಚಾಂದ್ ಬಾಗ್ನ ಮನೆಯ ತಾರಸಿ ಮೇಲಿರಿಸಬೇಕು. ಇವುಗಳೆಲ್ಲವನ್ನೂ ಪೆಟ್ರೋಲ್ ಬಾಂಬ್ ರೀತಿಯಲ್ಲಿ ಬಳಸಬಹುದು ಎಂಬುದು ತನ್ನ ಯೋಜನೆಯಾಗಿತ್ತು ಎಂದಾತ ಒಪ್ಪಿಕೊಂಡಿದ್ದಾನೆ.
ದೊಡ್ಡ ಪ್ರಮಾಣದಲ್ಲಿ ಆ್ಯಸಿಡ್, ಇಟ್ಟಿಗೆ, ಕಲ್ಲುಗಳು, ಪೆಟ್ರೋಲ್, ಡೀಸೆಲ್ ಇತ್ಯಾದಿಯನ್ನು ತಾರಸಿ ಮೇಲೆ ಸಂಗ್ರಹಿಸಲಾಯಿತು. ಪೊಲೀಸ್ ಠಾಣೆಯಲ್ಲಿ ಅಡವಿಟ್ಟಿದ್ದ ತನ್ನ ಖಾಸಗಿ ಪಿಸ್ತೂಲನ್ನೂ ತೆಗೆದುಕೊಳ್ಳಲಾಯಿತು ಎಂದಿರುವ ತಾಹಿರ್, ತನ್ನ ಸಮುದಾಯದವರಾರಿಗೂ ತೊಂದರೆಯಾಗದಂತೆ ನಿರ್ಧರಿಸಿದ್ದು, ಇದಕ್ಕಾಗಿಯೇ ತನ್ನ ಹೆಂಡತಿ, ಮಕ್ಕಳು ಹಾಗೂ ಹಿರಿಯರನ್ನು ಹಿಂದಿನ ದಿನವೇ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು ಎಂದಿದ್ದಾನೆ ಎಂದು ಝೀ ನ್ಯೂಸ್ ವಿವರವಾಗಿ ವರದಿ ಮಾಡಿದೆ.
ಪೊಲೀಸರಿಗೆ ಸಾಕ್ಷ್ಯ ದೊರೆಯದಂತಿರಲು ಸಿಸಿಟಿವಿ ಕ್ಯಾಮೆರಾಗಳನ್ನೆಲ್ಲ ತೆಗೆಯಲಾಯಿತು. ದಂಗೆಯ ದಿನ ಆತ ದೆಹಲಿ ಪೊಲೀಸರಿಗೆ ಪದೇ ಪದೇ ಕರೆ ಮಾಡಿ, ತನ್ನ ಮೇಲೆ ಯಾವುದೇ ಸಂದೇಹ ಬಾರದಂತೆ ನೋಡಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ದಂಗೆಯ ವೇಳೆ ಗುಪ್ತ ದಳದ ಉದ್ಯೋಗಿ ಅಂಕಿತ್ ಶರ್ಮಾ ಅವರನ್ನು ಕೊಂದು ಚರಂಡಿಗೆಸೆದ ಪ್ರಕರಣದಲ್ಲೂ ತಾಹಿರ್ ಆರೋಪಿಯಾಗಿದ್ದಾನೆ.

Average Rating