ಮುಂಬಯಿ: ಮುಚ್ಚಿ ಹಾಕಿದ್ದ ಕೇಸೊಂದನ್ನು ಪುನಃ ತೆರೆದು ದ್ವೇಷ ಸಾಧಿಸಲೆಂದು ಖ್ಯಾತ ಪತ್ರಕರ್ತನನ್ನೇ ಜೈಲಿಗಟ್ಟಿದ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಬಾಂಬೇ ಹೈಕೋರ್ಟ್ನಲ್ಲಿ ಜಾಮೀನು ದೊರೆಯದ ಹಿನ್ನೆಲೆಯಲ್ಲಿ 8 ದಿನಗಳಿಂದ ಬಂಧನದಲ್ಲಿರುವ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಬುಧವಾರ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಾದ ವಿವಾದ ನಡೆಯಿತು. ಈ ಸಂದರ್ಭ, ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಧ್ವನಿಯೆತ್ತಿದ ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಎಲ್ಲ ಹೈಕೋರ್ಟ್ಗಳಿಗೂ ಸ್ಪಷ್ಟ ಸಂದೇಶ ನೀಡಿತು.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ದ್ವಿಪಕ್ಷೀಯ ಪೀಠವು ಅರ್ನಬ್ಗೆ ಮಧ್ಯಂತರ ಜಾಮೀನು ನೀಡಿದ ಸಂದರ್ಭದಲ್ಲಿ, ಅಧಿಕಾರದ ದುರುಪಯೋಗದ ಕುರಿತು ಸಾಕಷ್ಟು ಚರ್ಚೆಯೂ ಆಯಿತು.
ನೇರವಾಗಿ ಪ್ರಚೋದನೆಯ ಸುಳಿವಿಲ್ಲದಿದ್ದರೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಲಾಗದು. ಒಬ್ಬ ವ್ಯಕ್ತಿಗೆ ಹಣ ನೀಡುವುದು ಬಾಕಿ ಇದೆ ಎಂದಾದರೆ, ಅದು ಆತ್ಮಹತ್ಯೆ ಪ್ರಚೋದನೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿತು. ಎಫ್ಐಆರ್ ಎಂಬುದೇ ನಿಜ, ಅದು ತನಿಖೆಗೆ ಅರ್ಹವಾದ ವಿಚಾರ ಎಂದಾದರೆ, ಎಫ್ಐಆರ್ ಬಾಕಿ ಇರುವಾಗ ಜಾಮೀನು ನೀಡದಿರುವುದು ನ್ಯಾಯವಲ್ಲ ಎಂದು ಕೋರ್ಟ್ ಹೇಳಿತು.
ಆದರೆ, ಕಾಂಗ್ರೆಸ್-ಶಿವಸೇನೆ ಸರ್ಕಾರ ಪರ ವಾದಿಸಿದ ವಕೀಲರು ‘ಸೆಶನ್ ಕೋರ್ಟ್ನಲ್ಲಿ ಪ್ರಕರಣ ಇರುವಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬಾರದು’ ಎಂದು ಮೊಂಡು ವಾದ ಮುಂದಿಟ್ಟಾಗ, ‘ವೈಯಕ್ತಿಕ ಸ್ವಾತಂತ್ರ್ಯ ನಿರಾಕರಿಸುವುದಕ್ಕೆ ತಾಂತ್ರಿಕತೆ ಕಾರಣವಾಗಬಾರದು. ಇದೇನೂ ಭಯೋತ್ಪಾದನೆ ಪ್ರಕರಣವೇನಲ್ಲ’ ಎಂದು ಚಾಟಿ ಬೀಸಿತು ಪೀಠ.
ಇಂಥ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸದಿದ್ದರೆ ಅದು ಅನ್ಯಾಯವಾಗುತ್ತದೆ. ಅವರ ಸಿದ್ಧಾಂತವೇನೇ ಇರಲಿ, ನಾನಂತೂ ಅವರ ಚಾನೆಲ್ ನೋಡುವುದೂ ಇಲ್ಲ. ಆದರೆ ಈ ಪ್ರಕರಣದದಲ್ಲಿ, ಸಾಂವಿಧಾನಿಕ ನ್ಯಾಯಾಲಯಗಳು ಮಧ್ಯಪ್ರವೇಶಿಸದೇ ಹೋದರೆ, ನಾವು ನಿಸ್ಸಂದೇಹವಾಗಿ ಅವಸಾನದ ಪಥದಲ್ಲಿ ಸಾಗಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ವೈಯಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯಲು ನಿಮ್ಮ ನ್ಯಾಯವ್ಯಾಪ್ತಿ ಶ್ರಮಿಸಲಿ. ಎಷ್ಟೋ ಪ್ರಕರಣಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯ ನಿರಾಕರಿಸಲಾಗುತ್ತಿದೆ. ಸಾಂವಿಧಾನಿಕ ನ್ಯಾಯಾಲಯಗಳೇ ಸೂಕ್ತ ಕಾನೂನಿನ ಮೂಕ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸದೇ ಹೋದರೆ, ಬೇರೆ ಯಾರು ರಕ್ಷಿಸುತ್ತಾರೆ? ಎಂದು ಎಲ್ಲ ಹೈಕೋರ್ಟುಗಳಿಗೂ ನ್ಯಾಯಮೂರ್ತಿ ಚಂದ್ರಚೂಡ ಅವರು ಪ್ರಶ್ನೆ ಕೇಳಿದರು.
ಸಾಮಾನ್ಯವಾಗಿ ವಹಿವಾಟು ಒಪ್ಪಂದ ನಡೆದಾಗ, ಅದರ ಅನುಷ್ಠಾನದಲ್ಲಿ ಕಂಟ್ರಾಕ್ಟುದಾರರು ಹೊಣೆಯಾಗುತ್ತಾರೆಯೇ ಹೊರತು, ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಹಿಡಿದುಕೊಳ್ಳಲಾಗದು. ಯಾಕೆಂದರೆ, ಕಂಟ್ರಾಕ್ಟನ್ನು ಕಾರ್ಯಾನುಷ್ಠಾನಗೊಳಿಸದಿರುವುದು ಆತ್ಮಹತ್ಯೆ ಪ್ರಚೋದನೆಗೆ ಕಾರಣವಾಗದು ಎಂದಿತು ನ್ಯಾಯಾಲಯ.
ಒಬ್ಬನಿಗೆ ಹಣ ನೀಡುವುದು ಬಾಕಿ ಇದೆಯೆಂದಾದರೆ, ಅದು ಆತ್ಮಹತ್ಯೆಗೆ ಪ್ರಚೋದನೆ ಹೇಗಾಗುತ್ತದೆ? ಎಂದು ನ್ಯಾಯಾಲಯ ಪ್ರಶ್ನಿಸಿತು.
ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಅರ್ನಬ್ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಾಡುತ್ತಾ, ಹಲವು ಅಂಶಗಳನ್ನು ಬಿಚ್ಚಿಟ್ಟರು. ಇದು ಅರ್ನಬ್ ವಿರೋಧಿಗಳಿಗೆ ಶಾಕ್ ಕೂಡ ನೀಡಬಹುದಾಗಿದೆ.
ಅರ್ನಬ್ಗೆ ಜಾಮೀನು ದೊರಕಿಸುವ ನಿಟ್ಟಿನಲ್ಲಿ ಅವರು ಮಂಡಿಸಿದ ವಾದವೇನು? ಇಲ್ಲಿವೆ ಮುಖ್ಯಾಂಶಗಳು:
- ಈ ಕೇಸಿನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಎಂಬುದನ್ನು ಎಳೆದು ತರಲಾಗದು. ವ್ಯಕ್ತಿಯು ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಮತ್ತು ನಂತರ ಆತ್ಮಹತ್ಯೆ ಮಾಡಿಕೊಂಡ. ಆದರೆ ಈ ವಿಷಯದಲ್ಲಿ ಅರ್ನಬ್ ಹೇಗೆ ಆತ್ಮಹತ್ಯೆಗೆ ಪ್ರಚೋದಿಸಿದರು? ನಾಳೆ ಮಹಾರಾಷ್ಟ್ರದಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಮತ್ತು ಇದಕ್ಕಾಗಿ ಸರ್ಕಾರವನ್ನು ಹೊಣೆ ಎಂದು ಬರೆದಿಟ್ಟರೆ, ಮುಖ್ಯಮಂತ್ರಿಯನ್ನು ಬಂಧಿಸಲಾದೀತೇ?
- 3 ವರ್ಷದ ಹಿಂದಿನ ಎಫ್ಐಆರ್ ಇದೆಯೆಂದುಕೊಳ್ಳೋಣ. ಆದರೆ ನೀವೇಕೆ ಆತನನ್ನು ಬಂಧಿಸುತ್ತೀರಿ ಮತ್ತು ಪಕ್ಕಾ ಕ್ರಿಮಿನಲ್ಗಳ ಜೊತೆಗೆ ತಲೋಜಾ ಜೈಲಿನಲ್ಲಿಡುತ್ತೀರಿ? ಗೋಸ್ವಾಮಿ ಭಯೋತ್ಪಾದಕರೇ? ಆತನ ವಿರುದ್ಧ ಕೊಲೆ ಆರೋಪ ಇದೆಯೇ? ಇದು ಮತ್ತೊಂದು ಕ್ರಿಮಿನಲ್ ಕೇಸಲ್ಲವಲ್ಲ. ಈ ವ್ಯಕ್ತಿಯನ್ನು ಬಿಡುಗಡೆ ಮಾಡಿದರೆ ಸ್ವರ್ಗವೇನು ಉದುರುತ್ತದೆಯೇ? ಜೈಲು ಎಂಬುದು ನಿಯಮವಲ್ಲ, ಅಂತಿಮ ಅಸ್ತ್ರ.
- ಆತ್ಮಹತ್ಯೆ ಪ್ರಚೋದನೆ ಕೇಸಿನ ತನಿಖೆಯಾಗಿ ಅದನ್ನು ಮುಚ್ಚಿದ ವರದಿಯನ್ನು ಮ್ಯಾಜಿಸ್ಟ್ರೇಟರೇ ಒಪ್ಪಿರುವಾಗ, ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಆದೇಶದ ಮೇರೆಗೆ ಪೊಲೀಸರು ಕೇಸನ್ನು ಪುನಃ ತೆರೆಯುವುದೆಂದರೆ, ಕಾರ್ಯಾಂಗದ ಅತ್ಯಂತ ಅಪಾಯಕಾರಿಯಾದ ನಿದರ್ಶನವಾಗುತ್ತದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating