ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದೇ ತಡ, ಪಾಪಿಸ್ತಾನವೇ ಆಗಿಬಿಟ್ಟಿರುವ ಪಾಕಿಸ್ತಾನಕ್ಕೆ ಎಲ್ಲೆಲ್ಲೂ ಉರಿಯಲಾರಂಭಿಸಿದೆ. ಅಲ್ಲದೆ, ತನ್ನದೇ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಮರೆತು, ತನ್ನ ಧೂರ್ತತನವನ್ನು ಬಟಾಬಯಲುಗೊಳಿಸಿದೆ.
ರಾಮ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಅಲ್ಪಸಂಖ್ಯಾತರನ್ನು ಆ ದೇಶದಲ್ಲಿ ಹೇಗೆ ಮೂಲೆಗುಂಪು ಮಾಡಲಾಗುತ್ತಿದೆ ಎಂಬುದರ ದ್ಯೋತಕ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ಓದಿ: ಶ್ರೀರಾಮ: ನಿಜ ಭಾರತೀಯರ ಹೃದಯ ಮಂದಿರದಿಂದ ಅಯೋಧ್ಯಾ ಮಂದಿರಕ್ಕೆ
ಭಾರತದ ಆಂತರಿಕ ವಿಷಯವಾಗಿರುವ ಅಯೋಧ್ಯೆಗೆ ಸಂಬಂಧಿಸಿ ದೇಶದ ಪರಮೋಚ್ಚ ನ್ಯಾಯಾಲಯವು ಕಳೆದ ವರ್ಷ ಸಹಮತದ ತೀರ್ಪು ನೀಡಿ, ರಾಮನ ಜನ್ಮ ಸ್ಥಳದಲ್ಲಿ ರಾಮನಿಗೆ ದೇವಾಲಯ ಕಟ್ಟಲು ಹಾಗೂ ಮಸೀದಿ ಕಟ್ಟಲು ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಮೀನು ನೀಡುವಂತೆ ತೀರ್ಪು ನೀಡಿ, ವ್ಯಾಜ್ಯ ಬಗೆಹರಿಸಿತ್ತು.
ಆದರೆ, ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಏನು ಹೇಳಿದೆ ಗೊತ್ತೇ? “ನ್ಯಾಯಕ್ಕಿಂತಲೂ ನಂಬಿಕೆಯೇ ಮುಖ್ಯ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ತೀರ್ಪೇ ಸರಿ ಇಲ್ಲ. ಇದು ಭಾರತದಲ್ಲಿ ಬಹುಸಂಖ್ಯಾತರ ಬಲವರ್ಧನೆಯ ದ್ಯೋತಕ. ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಹಾಗೂ ಅವರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಗಳೂ ಹೆಚ್ಚಾಗುತ್ತಿವೆ” ಎಂದು ವಿತಂಡ ವಾದವನ್ನು ವಿದೇಶಾಂಗ ಕಚೇರಿ ಮುಂದಿಟ್ಟಿದೆ.
ಕೋವಿಡ್-19 ಜಾಗತಿಕ ಪಿಡುಗಿನ ನಡುವೆಯೂ ಅವಸರದಲ್ಲಿ ‘ಬಾಬರಿ ಮಸೀದಿ ಸ್ಥಳದಲ್ಲಿ’ ರಾಮ ಮಂದಿರಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಮತ್ತಿತರ ಕ್ರಮಗಳು ಭಾರತದ ಮುಸ್ಲಿಮರನ್ನು ಹೇಗೆ ಮೂಲೆಗುಂಪು ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಪಾಕಿಸ್ತಾನ ಹೇಳಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, “ಇದು ಭಾರತದ ಆಂತರಿಕ ವಿಷಯವಾಗಿದೆ ಮತ್ತು ನೆಲದ ಕಾನೂನು ಕೂಡ ಆಗಿದೆ. ಇಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಗೌರವವಿದೆ, ಪಾಕಿಸ್ತಾನದಂತಲ್ಲ” ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ವರದಿಗಳು ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದು, ತನ್ನ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಬದಲು, ಅದು ಇತರರಿಗೆ ಬೋಧನೆ ಮಾಡಲು ಹೊರಟಿರುವುದು ಖಂಡನಾರ್ಹ.

ಮೂರ್ಖರ ಜಗತ್ತಿನಲ್ಲಿ ಇರುವವರ ಮನಸ್ಥಿತಿಯೇ ಭಾರತದ ಕೆಲ ರಾಜಕಸರಣಿಗಳ ಮನಸ್ಥಿತಿಯೂ ಸೇಮ್ ಟು ಸೇಮ್. ಪಾಖಂಡಿಗಳು.