ಅಯೋಧ್ಯೆ (ಉ.ಪ್ರ.): ಕೋಟ್ಯಂತರ ಭಾರತೀಯ ಆಸ್ತಿಕರ ಬಹುಕಾಲದ ಅಪೇಕ್ಷೆಯಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5, 2020 ಬುಧವಾರ ಮಧ್ಯಾಹ್ನದ 12.48ರ ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನಡೆಯಿತು.
ದೇಶದಾದ್ಯಂತ ಭಾರತೀಯರು ಜೈಶ್ರೀರಾಮ್ ಘೋಷಣೆಯೊಂದಿಗೆ ತಾವಿರುವಲ್ಲಿಂದಲೇ ದೂರದರ್ಶನ ವಾಹಿನಿಗಳಲ್ಲಿ ಈ ಕ್ಷಣವನ್ನು ಕಣ್ತುಂಬಿಕೊಂಡರು. ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಬೆಳ್ಳಿಯ ಮೊದಲ ಇಟ್ಟಿಗೆಯನ್ನು ಇರಿಸಿದರು.
ಗುಜರಾತಿನ ಸೋಮನಾಥದಿಂದ ಅಯೋಧ್ಯೆವರೆಗೆ ಲಾಲ್ಕೃಷ್ಣ ಆಡ್ವಾಣಿ ಅವರಿಂದ 1989ರಲ್ಲಿ ರಾಮ ಮಂದಿರಕ್ಕಾಗಿ ಆಂದೋಲನ ಆರಂಭವಾದಂದಿನಿಂದ, ಜಗತ್ತಿನ ವಿವಿಧೆಡೆಗಳಿಂದ ರಾಮ ಭಕ್ತರು ಇಟ್ಟಿಗೆಗಳನ್ನು ಕಳುಹಿಸಿದ್ದರು. ಸುಮಾರು 2.75 ಲಕ್ಷ ಇಟ್ಟಿಗೆಗಳು ಅಯೋಧ್ಯೆ ತಲುಪಿದ್ದು, ಬಹುತೇಕ ಇಟ್ಟಿಗೆಗಳಲ್ಲಿ ಜೈ ಶ್ರೀರಾಮ್ ಎಂದು ಕೆತ್ತನೆ ಮಾಡಲಾಗಿದೆ ಎಂದು ಭೂಮಿ ಪೂಜೆ ನೆರವೇರಿಸಿದ ಅರ್ಚಕರು ಮಾಹಿತಿ ನೀಡಿದರು.
ಕೋವಿಡ್-19 ಸಂಕಷ್ಟ ಕಾಲದಲ್ಲಿ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಇಲ್ಲಿ ಜನ ಜಂಗುಳಿ ಇರಲಿಲ್ಲ. ದೇಶ-ವಿದೇಶದ 175 ಮಂದಿಗೆ ಆಹ್ವಾನ ನೀಡಲಾಗಿದ್ದು, ಅವುಗಳಲ್ಲಿ 135ಕ್ಕೂ ಹೆಚ್ಚು ಮಂದಿ ಮಠಾಧೀಶರು ಇದ್ದರು.
12:44:08 ಗಂಟೆಯ ಶುಭ ಮುಹೂರ್ತದಲ್ಲಿ ಪೂಜೆ ನೆರವೇರಿಸಿದ ಬಳಿಕ ಇಟ್ಟಿಗೆಯನ್ನು ಭೂಮಿಯೊಳಗಿರಿಸುವ ಮೂಲಕ ಭವ್ಯವಾದ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿ ಸಾಷ್ಟಾಂಗ ಪ್ರಣಾಮ ಮಾಡಿದರು.
ಋತ್ವಿಜರ ಮಂತ್ರ ಘೋಷದ ನಡುವೆ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಅಧ್ಯಕ್ಷ ಗೋಪಾಲದಾಸ್ಜಿ ಮಹಾರಾಜ್ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.







Average Rating