ಮುಂಬಯಿ: ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಪಣ ತೊಟ್ಟಿರುವ ನಟಿ ಕಂಗನಾ ರಾಣಾವತ್ ಅವರ ಪ್ರೊಡಕ್ಷನ್ ಹೌಸ್ನ ಭಾಗವನ್ನು ಧ್ವಂಸ ಮಾಡಿದ ಮುಂಬಯಿ ಪಾಲಿಕೆಗೆ ಹೈಕೋರ್ಟ್ ಬಲವಾಗಿ ಚಾಟಿಯೇಟು ನೀಡಿದೆ.
ಐತಿಹಾಸಿಕ ತೀರ್ಪಿನಲ್ಲಿ ಶುಕ್ರವಾರ, ನಟಿಯ ನಿವಾಸಕ್ಕೆ ಹೊಂದಿಕೊಂಡಂತಿರುವ ಕಚೇರಿಯ ಭಾಗವನ್ನು ಧ್ವಂಸ ಮಾಡಿದ್ದು ತಪ್ಪು, ದುರುದ್ದೇಶದಿಂದ ಬಿಎಂಸಿ ಅಧಿಕಾರಿಗಳು ವರ್ತಿಸಿದ್ದಾರೆ ಎಂದಿದೆಯಲ್ಲದೆ, ರಾಣಾವತ್ಗೆ ನಷ್ಟ ತುಂಬಿಸಿಕೊಡುವಂತೆಯೂ ಸೂಚಿಸಿದೆ.
ಹಿಂದಿ ಚಿತ್ರರಂಗದಲ್ಲಿನ ಮಾಫಿಯಾಗಳಿದ್ದಾರೆ. ಮಹಾರಾಷ್ಟ್ರ ರಾಜಧಾನಿಯು ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ. ಚಿತ್ರರಂಗದ ಮಾಫಿಯಾಗಿಂತಲೂ ಮುಂಬಯಿ ಪೊಲೀಸರೆಂದರೆ ತನಗೆ ಹೆಚ್ಚು ಭಯ ಎಂದು ಕಂಗನಾ ಇತ್ತೀಚೆಗೆ ಹೇಳಿಕೆ ನೀಡಿದ ಬಳಿಕ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವು ಆಕೆಯ ಮೇಲೆ ಕಣ್ಣಿಟ್ಟಿತ್ತು. ಮತ್ತು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಮೂಲಕ ಆಕೆಯ ಕಚೇರಿ ಧ್ವಂಸಕ್ಕೆ ಸೂಚಿಸಲಾಗಿತ್ತು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಬಿಎಂಸಿ ಆಪಾದಿಸಿದಂತೆ ಕಟ್ಟಡದಲ್ಲಿ ಯಾವುದೇ ಭಾಗವನ್ನೂ ಅಕ್ರಮವಾಗಿ ಕಟ್ಟಿರಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಬಿಎಂಸಿ ತಪ್ಪು ಮಾಡಿದೆ ಮತ್ತು ನಾಗರಿಕರೊಬ್ಬರ ಹಕ್ಕುಗಳ ವಿರುದ್ಧ ಕ್ರಮ ಕೈಗೊಂಡಂತಾಗಿದೆ ಎಂದು ಹೈಕೋರ್ಟ್ ಹೇಳಿದೆಯಲ್ಲದೆ, ಕಂಗನಾ ರಾಣಾವತ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಮತ್ತು ಕಂಗನಾರಿಗೆ ಬೆದರಿಕೆಯೊಡ್ಡಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರ ನಡವಳಿಕೆಯನ್ನೂ ತರಾಟೆಗೆ ತೆಗೆದುಕೊಂಡಿದೆ.
ರಾವತ್ ತನಗೆ ಬೆದರಿಕೆಯೊಡ್ಡಿದ್ದಾರೆ ಮತ್ತು ಮುಂಬಯಿ ಯಾಕೆ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಆದರೆ, ದೇಶದ ಕಾನೂನಿಗೆ ಗೌರವ ನೀಡದ ರಾವತ್, ಕಂಗನಾಳಿಗೆ ಪಾಠ ಕಲಿಸುವುದಕ್ಕೆ ಸಿದ್ಧರಾಗಿದ್ರು. ಸಂಸತ್ಸದಸ್ಯನೂ ಆಗಿರುವ ರಾವತ್ನಂತಹಾ ನಾಯಕರಿಗೆ ಈ ನಡತೆ ಶೋಭೆಯಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಅಹಂಕಾರಕ್ಕೂ ಇದೇ ಶಾಸ್ತಿಯಾಗಲಿದೆ: ಉದ್ಧವ್ ಠಾಕ್ರೆಗೆ Kangana Ranaut ಎಚ್ಚರಿಕೆ
ಕಂಗನಾ ಅವರು ಚಿತ್ರರಂಗದ ಡ್ರಗ್ ಮಾಫಿಯಾ ವಿರುದ್ಧ ಧ್ವನಿಯೆತ್ತಿದ್ದು, ಇದು ಕೂಡ ಶಿವಸೇನೆ-ಕಾಂಗ್ರೆಸ್ ಸರ್ಕಾರದ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದೀಗ ಕಂಗನಾ ಅವರ ಬಂಗಲೆ ಒಡೆಯುವ ಬಗ್ಗೆ ಬಿಎಂಸಿ ನೀಡಿದ್ದ ನೋಟೀಸು ಮತ್ತು ಆದೇಶವನ್ನು ರದ್ದುಗೊಳಿಸಿದೆಯಲ್ಲದೆ, ಇದು ಕಂಗನಾ ಅವರನ್ನು ಘಾತಿಸಲು, ಮಾನಸಿಕ ಪೀಡೆ ನೀಡುವುದಕ್ಕಾಗಿಯೇ ಮಾಡಿದ ಕ್ರಮವೆಂಬುದು ಸ್ಪಷ್ಟ ಎಂದು ಹೈಕೋರ್ಟ್ 166 ಪುಟಗಳ ತೀರ್ಪಿನಲ್ಲಿ ಹೇಳಿದೆ.
ಸರ್ಕಾರ ಅಥವಾ ಅದರ ಏಜೆನ್ಸಿಗಳು ಒಬ್ಬ ನಾಗರಿಕರ ವಿರುದ್ಧ ಮಾಡಿದ ಈ ರೀತಿಯ ಅಕ್ರಮ ಮತ್ತು ನ್ಯಾಯಯುತವಲ್ಲದ ಕ್ರಮಗಳು ತೀರಾ ಗಂಭೀರವಾಗಿದ್ದು, ಸಮಾಜಕ್ಕೆ ಹಾನಿಯುಂಟು ಮಾಡುತ್ತದೆ. ಏನಿದ್ದರೂ ಕಾನೂನಿನ ಚೌಕಟ್ಟಿನೊಳಗೆಯೇ ಕ್ರಮ ಕೈಗೊಳ್ಳಬೇಕಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದೀಗ, ಕಟ್ಟಡ ಭಾಗಶಃ ಕೆಡವಿದ್ದರಿಂದ ಆಗಿರುವ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸಲು ನ್ಯಾಯಾಲಯವೇ ಪರಿವೀಕ್ಷಕರೊಬ್ಬರನ್ನು ನೇಮಿಸಿದ್ದು, ಮುಂದಿನ ಮಾರ್ಚ್ ಒಳಗೆ ವರದಿ ಸಲ್ಲಿಸುವಂತೆ ಸೂಚಿದೆ. ಇದರ ಆಧಾರದಲ್ಲಿ ಕಂಗನಾ ಅವರಿಗೆ ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ನಿರ್ಧರಿಸಲಾಗುತ್ತದೆ.
ಇದೇ ವೇಳೆ, ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸುವಂತೆಯೂ ಕಂಗನಾ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಸೆ.9ರಂದು ಬಾಂದ್ರಾದ ಪಾಲಿ ಹಿಲ್ಸ್ನಲ್ಲಿದ್ದ ಕಂಗನಾ ಕಟ್ಟಡವನ್ನು ಕೆಡವಲು ಬಿಎಂಸಿ ಮುಂದಾಗಿತ್ತು. ಅದಕ್ಕೆ ಅನುಮತಿ ಪಡೆದಿರಲಿಲ್ಲ ಎಂಬುದು ಬಿಎಂಸಿ ಆರೋಪವಾಗಿತ್ತು. ಅದೇ ದಿನ ನಟಿಯು ತಮ್ಮ ವಕೀಲರ ಮೂಲಕ ಹೈಕೋರ್ಟ್ಗೆ ಹೋಗಿ, ಪೂರ್ತಿ ಧ್ವಂಸ ಮಾಡುವುದನ್ನು ತಪ್ಪಿಸಿದ್ದರು. ಅದೇ ದಿನ ನ್ಯಾಯಾಲಯವು ಬಿಎಂಸಿಯ ಅನ್ಯಾಯದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ರಾಣಾವತ್, ತಪ್ಪು ಮಾಡುವ ಸರ್ಕಾರದ ವಿರುದ್ಧ ಒಬ್ಬ ವ್ಯಕ್ತಿ ಹೋರಾಡಿ ಗೆದ್ದಾಗ, ಅದು ವ್ಯಕ್ತಿಯ ಗೆಲುವಲ್ಲ, ಬದಲಾಗಿ ಪ್ರಜಾಪ್ರಭುತ್ವದ ಗೆಲುವು. ನನಗೆ ಧೈರ್ಯ ನೀಡಿದವರಿಗೆ ಮತ್ತು ನನ್ನ ಪುಡಿಯಾದ ಕನಸುಗಳ ಬಗ್ಗೆ ಕುಹಕವಾಡಿದವರಿಗೆ ಧನ್ಯವಾದ. ನೀವು ವಿಲನ್ ಆದ ಕಾರಣಕ್ಕಾಗಿಯಷ್ಟೇ ನಾನು ಹೀರೋ ಆಗಬಲ್ಲೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating