ನವದೆಹಲಿ: ದೇಶಕ್ಕೇ ಅಪಾಯವಿದೆ ಅಂತೆಲ್ಲಾ ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಸುಳ್ಳು ಹೇಳಿ ದಂಗೆ ಎಬ್ಬಿಸಿ, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ವಿರೋಧ ಪಕ್ಷ ಕಾಂಗ್ರೆಸ್, ಸೋಮವಾರವೂ ಇದೇ ಅಪಪ್ರಚಾರ ತಂತ್ರದ ಮೂಲಕ ರೈತರನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಿದೆ.
ಒಂದು ಬಾರಿ ಅದಾಗಲೇ ಪಂಜಾಬಿನಲ್ಲಿ ಸುಟ್ಟಿದ್ದ, ಅನ್ನದಾತನ ಮೂಲಾಧಾರವಾದ ಟ್ರ್ಯಾಕ್ಟರ್ ಅನ್ನು ಟ್ರಕ್ನಲ್ಲಿ ತಂದು, ದೇಶದ ಹೆಗ್ಗುರುತಾದ ಇಂಡಿಯಾ ಗೇಟ್ ಎದುರು ಎಲ್ಲರೆದುರೂ ಸುಟ್ಟು ಹಾಕುವ ಮೂಲಕ ಕಾಂಗ್ರೆಸ್ ಪಕ್ಷವು ದೇಶವನ್ನೇ ಅವಮಾನಿಸಿದೆ ಎಂದು ಬಂದ ಬಿಜೆಪಿ ಕಿಡಿಕಾರಿದೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರೈತರಲ್ಲಿ ಕಾಯ್ದೆ ತಿದ್ದುಪಡಿಯಿಂದ ನಿಮಗೆ ತೊಂದರೆಯಾಗಲಿದೆ, ನಿಮ್ಮ ಜಮೀನನ್ನು ಕಸಿದುಕೊಳ್ಳಲಾಗುತ್ತಿದೆ ಅಂತೆಲ್ಲಾ ಹುಯಿಲೆಬ್ಬಿಸಿ, ಹಲವಾರು ಪ್ರತಿಭಟನೆಕಾರರಿಗೂ ಹಸಿರುಶಾಲು ತೊಡಿಸಿ, ರೈತರು ಎಂದು ಬಿಂಬಿಸಿ ದೇಶಾದ್ಯಂತ ಪ್ರತಿಭಟನೆ ಏರ್ಪಡಿಸಲಾಗಿತ್ತು. ಬಹುತೇಕ ಕಡೆ ಕಾಂಗ್ರೆಸ್ ನೇತೃತ್ವ ವಹಿಸಿದ್ದರೆ, ಹಲವೆಡೆ ರೈತರು ನಿಜ ಅರಿತುಕೊಂಡು, ಪ್ರತಿಭಟನೆ ಮಾಡಲಿಲ್ಲ.
ಈ ಕುರಿತು ಕಿಡಿಕಾರಿದ ಬಿಜೆಪಿ, “ಕಾಂಗ್ರೆಸ್ ಪಕ್ಷವು ಇಡೀ ದೇಶಕ್ಕೇ ಅವಮಾನಿಸಿದ್ದು, ತನ್ನ ರಾಜಕೀಯಕ್ಕಾಗಿ ರೈತರ ದಿಕ್ಕು ತಪ್ಪಿಸಿರುವುದು ಈಗ ಸ್ಪಷ್ಟವಾಗಿದೆ. ಇದುವರೆಗೆ ಜನರು ಪ್ರತಿಭಟನೆಯನ್ನಷ್ಟೇ ನೋಡಿದ್ದರು. ಈಗ ರೈತರ ಲಾಂಛನವೇ ಆದ ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚುವ ಮೂಲಕ ತನ್ನ ಮುಖವಾಡವನ್ನು ಕಳಚಿಟ್ಟಂತಾಗಿದೆ. ರೈತರ ಪ್ರತಿಭಟನೆಯ ಹೆಸರಿನಲ್ಲಿ ಕಾಂಗ್ರೆಸ್ ತನ್ನದೇ ರಾಜಕೀಯ ಅಂತ್ಯದತ್ತ ಮುಖ ಮಾಡಿದೆ” ಎಂದು ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್, ಕಾಂಗ್ರೆಸ್ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಭರವಸೆಗಳಿದ್ದವು. ಅವನ್ನು ಎನ್ಡಿಎ ಸರ್ಕಾರ ಮಾಡಿ ತೋರಿಸಿದೆ. ಈಗ ರೈತರ ದಿಕ್ಕು ತಪ್ಪಿಸುತ್ತಿದೆ. ಇದು ಕಾಂಗ್ರೆಸ್ನ ದ್ವಿಮುಖ ನೀತಿ ಎಂದಿದ್ದಾರೆ.
ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಪದೇ ಪದೇ ಇದರ ಬಗ್ಗೆ ಮಾತನಾಡಿದ್ದರು. ಅವರ ಪ್ರಣಾಳಿಕೆಯಲ್ಲೂ ಇದೇ ಭರವಸೆಗಳಿದ್ದವು. ಆದರೆ ಇದು ನಾವು ಜಾರಿ ಮಾಡಿದಾಗ ಅವರೇ ರೈತರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸ್ತಿದ್ದಾರೆ. ಇದು ಕಾಂಗ್ರೆಸ್ನ ಎರಡು ಮುಖಗಳ ಪ್ರತೀಕ ಎಂದು ಜಾವಡೇಕರ್ ಹೇಳಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಟ್ರ್ಯಾಕ್ಟರ್ ಅನ್ನೇ ಸುಡುವುದು ಎಂಥಾ ಪ್ರತಿಭಟನೆ? ಮಾಧ್ಯಮದ ಗಮನ ಸೆಳೆಯುವ ಯತ್ನವಿದು. ಕಾಂಗ್ರೆಸಿನ ನಿಜವಾದ ಬಣ್ಣ ಬಯಲು ಮಾಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದಗಳು. ಆದರೆ ಹೆಚ್ಚಿನ ರೈತರು ದಾರಿ ತಪ್ಪಲಿಲ್ಲ. ಅವರಿಗೆ ನಿಜ ಗೊತ್ತಿದೆ. ಕೃಷಿ ಉತ್ಪನ್ನಗಳ ಖರೀದಿ ಆರಂಭವಾಗಿದೆ, ಕನಿಷ್ಠ ಬೆಂಬಲ ದರ (MSP) ನೀಡಲು ಆರಂಭವಾಗಿದೆ., ಎಪಿಎಂಸಿಗಳು ಈಗಲೂ ಬಲಿಷ್ಠವಾಗಿಯೇ ಇವೆ. ರೈತರ ದಾರಿ ತಪ್ಪಿಸುವ ಯತ್ನ ವಿಫಲವಾಗಲಿದೆ ಎಂದರು ಜಾವಡೇಕರ್.
ಪಂಜಾಬಿನಲ್ಲಿ ಸುಟ್ಟಿದ್ದನ್ನೇ, ಇಲ್ಲಿ ಮತ್ತೆ ತಂದು ಸುಟ್ಟರು!
ಈ ಮಧ್ಯೆ, ಸೆಪ್ಟೆಂಬರ್ 20ರಂದು ಮೋದಿ ವಿರುದ್ಧ ಹಾಗೂ ಕೃಷಿ ನೀತಿ ವಿರುದ್ಧ ರೈತರನ್ನು ಎತ್ತಿ ಕಟ್ಟಿದ್ದ ಕಾಂಗ್ರೆಸ್, ಪಂಜಾಬಿನಲ್ಲಿ ಭಾರಿ ಪ್ರತಿಭಟನೆ ನಡೆಸಿತ್ತು. ಅಲ್ಲೂ ಕೂಡ ಟ್ರ್ಯಾಕ್ಟರನ್ನು ಸುಡಲಾಗಿತ್ತು. ಇಂಡಿಯಾ ಟಿವಿ ತನಿಖಾ ವರದಿ ಪ್ರಕಾರ, ಅಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ಟ್ರಕ್ನಲ್ಲಿ ತಂದು, ಪುನಃ ದೆಹಲಿಯ ಇಂಡಿಯಾ ಗೇಟ್ ಎದುರಿನ ರಾಜಪಥದಲ್ಲಿ ಸುಡಲಾಗಿದೆ. ಇದು ಮೋದಿ ವಿರುದ್ಧದ ಕಾಂಗ್ರೆಸ್ ಆಕ್ರೋಶದ ಪ್ರತಿಫಲ. ಇದರಲ್ಲಿ ದಾರಿ ತಪ್ಪಿದ ಪಂಜಾಬ್ ಯುವ ಕಾಂಗ್ರೆಸಿಗರೇ ಟ್ರ್ಯಾಕ್ಟರ್ ಸುಟ್ಟು, ತಮ್ಮ ಮೋದಿ-ವಿರೋಧವನ್ನು ಮೆರೆದಿದ್ದಾರೆ.
ಟ್ರ್ಯಾಕ್ಟರ್ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಸೇರಿದಂತೆ ಹಲವು ವಿಭಾಗಗಳಲ್ಲಿ ಕೇಸು ದಾಖಲಿಸಿದ್ದಾರೆ. ಟ್ರ್ಯಾಕ್ಟರ್ ಸುಟ್ಟವರೆಲ್ಲರೂ ಭಗತ್ ಸಿಂಗ್ ಅಮರ್ ರಹೇ, ನರೇಂದ್ರ ಮೋದಿ ಕಿಸಾನ್ ವಿರೋಧಿ ಎಂದೆಲ್ಲಾ ಕೂಗಾಡುತ್ತಿದ್ದರು.

Average Rating