ನವದೆಹಲಿ: ಕಾಂಗ್ರೆಸ್ ಕುಟುಂಬ ರಾಜಕಾರಣದ ಕುರಿತಾಗಿ ಬಿರುಗಾಳಿ ಎದ್ದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪತ್ರ ವಿವಾದದ ಬಳಿಕ, ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ ಹಾಗೂ ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದ್ದ ಮುಖಂಡರಿಗೆ ಲಗಾಮು ಹಾಕಿದೆ.
ಆಗಸ್ಟ್ 24ರಂದು ಸಿಡಬ್ಲ್ಯುಸಿ ಸಭೆ ನಡೆದಿತ್ತು. ಇದರಲ್ಲಿ, 23 ಮಂದಿ ಹಿರಿಯ ನಾಯಕರು, ಪಕ್ಷದೊಳಗೆ ಆಂತರಿಕ ಚುನಾವಣೆಯೊಂದಿಗೆ ಸುಧಾರಣೆಯಾಗಬೇಕೆಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಇದರ ವಿರುದ್ಧ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಧ್ವನಿಯೆತ್ತಿದ್ದರು.
ಅದರ ಪಶ್ಚಾತ್ ಕಂಪನವಾಗಿ, ಉತ್ತರ ಪ್ರದೇಶ ಕಾಂಗ್ರೆಸ್ನ ಲಖಿಂಪುರ ಖೇರಿ ಜಿಲ್ಲಾ ಘಟಕವು, ಪತ್ರಕ್ಕೆ ಸಹಿ ಹಾಕಿದ್ದ ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ್ ಅವರನ್ನು ಟಾರ್ಗೆಟ್ ಮಾಡಿದೆ.
ಹಿಂದೆಯೂ ಸೋನಿಯಾ ನಾಯತ್ವಕ ಪ್ರಶ್ನಿಸಿದ್ದರು ಪ್ರಸಾದ, ಪೈಲಟ್, ಸಿಂಧಿಯಾ
ನೆಹರು-ಗಾಂಧಿ ಕುಟುಂಬದ ವಿರುದ್ಧ ಧ್ವನಿಯೆತ್ತಿರುವ ಜಿತಿನ್ ಪ್ರಸಾದ ಅವರ ಕುಟುಂಬದ ಇತಿಹಾಸವನ್ನೇ ಅಲ್ಲಿನ ಕಾಂಗ್ರೆಸಿಗರು ಕೆದಕಿದ್ದಾರೆ. ಅವರ ದಿವಂಗತ ತಂದೆ ಜಿತೇಂದ್ರ ಪ್ರಸಾದ ಕೂಡ ಸೋನಿಯಾ ಗಾಂಧಿ ನಾಯಕತ್ವವನ್ನು ಹಿಂದೆ ಪ್ರಶ್ನಿಸಿ, 2000ದಲ್ಲಿ ಪಕ್ಷಾಧ್ಯಕ್ಷತೆಗೆ ಸೋನಿಯಾ ವಿರುದ್ಧ ಸ್ಫರ್ಧಿಸಿದ್ದರು.
ಇದಕ್ಕೂ ಮೊದಲು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ, ಯುವ ಮುಖಂಡ ಸಚಿನ್ ಪೈಲಟ್ ಕೂಡ ಕಾಂಗ್ರೆಸ್ ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದರು. ಅವರ ತಂದೆ ರಾಜೇಶ್ ಪೈಲಟ್ ಅವರು 1998-2000 ಅವಧಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸಿಡಿದು, ಪಕ್ಷದಿಂದ ಹೊರಬಂದಿದ್ದರು.
ಜಿತೇಂದ್ರ ಪ್ರಸಾದ ಅವರೊಂದಿಗೆ ರಾಜೇಶ್ ಪೈಲಟ್ ಸೇರಿಕೊಂಡು, 2000ದ ಮೇ 21ರಂದು, ರಾಜೀವ್ ಗಾಂಧಿ ಪುಣ್ಯತಿಥಿ ಆಚರಣೆಯ ಸಂದರ್ಭದಲ್ಲಿ ಬೃಹತ್ ರ್ಯಾಲಿ ಸಂಘಟಿಸಿದ್ದರು. ಇದರ ಇಪ್ಪತ್ತೇ ದಿನಗಳಲ್ಲಿ ರಾಜೇಶ್ ಪೈಲಟ್ ರಸ್ತೆ ಅಪಘಾತವೊಂದರಲ್ಲಿ ನಿಗೂಢವಾಗಿ ಮೃತಪಟ್ಟರು.
ಇತ್ತೀಚೆಗೆ ಮಧ್ಯಪ್ರದೇಶದ ಯುವ ನೇತಾರ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ನಾಯಕತ್ವದೊಂದಿಗೆ ಮುನಿಸಿಕೊಂಡು ಪಕ್ಷತ್ಯಾಗ ಮಾಡಿ ಬಿಜೆಪಿ ಸೇರಿದ್ದರು.
ತರೂರ್ ಆಸೆಗೆ ತಣ್ಣೀರು
ಈ ನಡುವೆ, ಲೋಕಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಗೌರವ್ ಗೊಗೊಯಿ ಅವರನ್ನು ಹಾಗೂ ಮುಖ್ಯ ಸಚೇತಕ ಸ್ಥಾನಕ್ಕೆ ಲುಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟೂ ಅವರನ್ನು ನೇಮಿಸಿದ್ದಾರೆ.
ಸೆಪ್ಟೆಂಬರ್ 14ರಿಂದ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇದು ಪತ್ರಕ್ಕೆ ಸಹಿ ಹಾಕಿರುವ ಹಿರಿಯ ಮುಖಂಡರಾದ ಶಶಿ ತರೂರ್, ಮನೀಷ್ ತಿವಾರಿ ಅವರಿಗೊಂದು ಸ್ಪಷ್ಟ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ, ಇವರಿಬ್ಬರೂ ಖಾಲಿಬಿದ್ದಿದ್ದ ಈ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.
ಈ ಮಧ್ಯೆ, ಜಿತಿನ್ ಪ್ರಸಾದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಘಟಕವು ನಿರ್ಣಯ ಕೈಗೊಂಡಿದ್ದು, ಪತ್ರಕ್ಕೆ ಸಹಿ ಹಾಕಿದ್ದ ಹಿರಿಯ ಮುಖಂಡರಾದ ಕಪಿಲ್ ಸಿಬಲ್ ಹಾಗೂ ಮನೀಷ್ ತಿವಾರಿ ಆಕ್ಷೇಪ ಎತ್ತಿದ್ದಾರೆ.
ಜಿತಿನ್ ಪ್ರಸಾದರನ್ನು ಅಧಿಕೃತವಾಗಿ ಟಾರ್ಗೆಟ್ ಮಾಡುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ತಮ್ಮದೇ ಪಕ್ಷದವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಬದಲು ಬಿಜೆಪಿಗೆ ಟಾರ್ಗೆಟ್ ಮಾಡಬೇಕಿತ್ತು ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮನೀಷ್ ತಿವಾರಿ ಧ್ವನಿಗೂಡಿಸಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy.
ತರೂರ್ ಪಾರ್ಟಿಯಲ್ಲಿ ಮೊಳಕೆಯೊಡೆದಿತ್ತೇ ಈ ಪತ್ರ?
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಐದು ತಿಂಗಳ ಹಿಂದೆ ಶಶಿ ತರೂರ್ ಅವರು ಏರ್ಪಡಿಸಿದ್ದ ಔತಣಕೂಟವೊಂದರಲ್ಲಿ ಈ ಭಿನ್ನ ಧ್ವನಿಯು ಮೊಳಕೆಯೊಡೆದಿತ್ತು. ಈ ಕೂಟದಲ್ಲಿ ಪಾಲ್ಗೊಂಡವರೆಲ್ಲರೂ ಪಕ್ಷದಲ್ಲಿ ಬದಲಾವಣೆ ಬೇಕೆಂದು, “ಸದಾ ಲಭ್ಯವಿರುವ” ಮತ್ತು “ಸಕ್ರಿಯ” ನಾಯಕ ಬೇಕೆಂದು ಬರೆದ ಪತ್ರಕ್ಕೆ ಸಹಿ ಹಾಕಿರಲಿಲ್ಲ.
ಉದಾಹರಣೆಗೆ, ಈ ಪಾರ್ಟಿಯಲ್ಲಿ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಸಚಿನ್ ಪೈಲಟ್, ಅಭಿಷೇಕ್ ಮನು ಸಿಂಘ್ವಿ, ಮಣಿ ಶಂಕರ್ ಅಯ್ಯರ್ ಮುಂತಾದವರೂ ಭಾಗವಹಿಸಿದ್ದರು.

Average Rating