ನವದೆಹಲಿ: ಕೇಂದ್ರ ಸರ್ಕಾರವು ರೈತರ ಹಿತರಕ್ಷಣೆಗಾಗಿ ಮತ್ತು ಅವರ ಭವಿಷ್ಯದ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಕೃಷಿ ಸುಧಾರಣೆಗಾಗಿ ತಿದ್ದುಪಡಿಯ ಸವಿಯನ್ನು ಉಣ್ಣಲು ದೇಶಾದ್ಯಂತ ರೈತರು ಸಿದ್ಧರಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷವು ರೈತರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.
ಈ ಹಿಂದೆ ತಾವು ಪ್ರಸ್ತಾಪಿಸಿದ ಮತ್ತು ತಮ್ಮದೇ ಚುನಾವಣಾ ಪ್ರಣಾಳಿಕೆಯಲ್ಲಿದ್ದ ತಿದ್ದುಪಡಿಯನ್ನು ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಬಗ್ಗೆ ರೊಚ್ಚಿಗೆದ್ದಿರುವ ಕಾಂಗ್ರೆಸ್, ಇದೀಗ ಕಟ್ಟಾ ಸುಳ್ಳು ಮತ್ತು ಅಪಪ್ರಚಾರದ ಮೂಲಕ ಪ್ರತಿಭಟನೆಗೆ ರೈತರನ್ನು ಹುರಿದುಂಬಿಸುತ್ತಿದೆ ಎಂಬುದು ಮತ್ತೆ ಬಯಲಾಗಿದೆ.
ರೈತರನ್ನು ದಲ್ಲಾಳಿಗಳಿಂದ ಮುಕ್ತಗೊಳಿಸುವ ಆ ಮೂಲಕ ಸಂಪೂರ್ಣ ಲಾಭವು ರೈತರಿಗೇ ದೊರೆಯುವಂತೆ ಮಾಡಬಲ್ಲ ಮಸೂದೆಗಳ ವಿರುದ್ಧ ಕೇವಲ ರಾಜಕೀಯ ಕಾರಣಕ್ಕಾಗಿ ಅದೇ ರೈತರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ರಾಜಕೀಯ ಗೊತ್ತಿಲ್ಲದ ಮುಗ್ಧ ರೈತರು ಪ್ರತಿಭಟನೆಗೆ ಇಳಿದಿದ್ದಾರೆ.
ಕೃಷಿ ವಲಯದ ಉನ್ನತಿಗಾಗಿರುವ ಈ ಕಾನೂನು ತಿದ್ದುಪಡಿಗಳನ್ನು ನರೇಂದ್ರ ಮೋದಿ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದಂದಿನಿಂದ, ಕಾಂಗ್ರೆಸ್ ಮತ್ತು ಅದರ ಮುಖಂಡರು ರೈತರ ಹಳೆಯ ಚಿತ್ರಗಳನ್ನು ಪೋಸ್ಟ್ ಮಾಡಿ, ರೈತರ ಪರಿಸ್ಥಿತಿ ಹೀಗಿದೆ ಎಂದು ಬಿಂಬಿಸುತ್ತಿರುವುದನ್ನು ಓಪ್-ಇಂಡಿಯಾ ಎಂಬ ಫ್ಯಾಕ್ಟ್ಚೆಕ್ ತಾಣವು ಪತ್ತೆ ಮಾಡಿದೆ.
ಮೋದಿ ಸರ್ಕಾರದ ವಿರುದ್ಧ ದೇಶದ ರೈತರು ಆಕ್ರೋಶಿತರಾಗಿದ್ದಾರೆ ಎಂದು ಬಿಂಬಿಸಲು ಕಾಂಗ್ರೆಸ್ ಮುಖಂಡರು, ತಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ ಪರಿಸ್ಥಿತಿಯ ಫೋಟೋಗಳನ್ನೇ ಬಳಸುತ್ತಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಯುಪಿಎ ಆಡಳಿತಾವಧಿಯಲ್ಲಿದ್ದ ರೈತರ ಪರಿಸ್ಥಿತಿಯನ್ನು ಮೋದಿ ಆಡಳಿತಾವಧಿಯಲ್ಲಿ ಎಂದು ಬಿಂಬಿಸುತ್ತಿರುವ ಅಂಶವು ಬಯಲಾಗಿದ್ದು, ತಮ್ಮದೇ ನೀತಿಗಳ ವಿರುದ್ಧ ಹೋರಾಡುವಂತೆ ರೈತರನ್ನು ಪ್ರಚೋದಿಸುತ್ತಿದ್ದಾರೆಯೇ ಎಂಬ ಮಾತುಗಳೂ ಕೇಳಿಬರುತ್ತಿವೆ.
ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಗೆ ಪೂರಕವಾಗಿರುವ ಕಾನೂನನ್ನು ಟೀಕಿಸುತ್ತಾ, ಮಂಡಿ ವ್ಯವಸ್ಥೆಯಿಂದ ಗ್ರಾಮೀಣ ಭಾರತವು ಏಳಿಗೆ ಕಂಡಿತ್ತು. ಇದೀಗ ಆ ವ್ಯವಸ್ಥೆಯಿಲ್ಲದಂತೆ ಮಾಡಲು ಬಿಜೆಪಿ ಹೊರಟಿದೆ ಎಂದು ಟೀಕಿಸಿ ಕಾಂಗ್ರೆಸ್ ಮಾಡಿದ ಟ್ವೀಟ್ನಲ್ಲಿ, ಯುಪಿಎ ಆಡಳಿತಾವಧಿಯಲ್ಲಿ ಎರಡು ಹಳ್ಳಿಗಳ ಸ್ಥಿತಿಗತಿ ಕುರಿತು ‘ದಿ ಎಕನಾಮಿಸ್ಟ್’ ತನ್ನ 2012, ನವೆಂಬರ್ 17ರ ಲೇಖನದಲ್ಲಿ ಬಿಂಬಿಸಿದ ಚಿತ್ರಗಳನ್ನು ಕಾಂಗ್ರೆಸ್ ಬಳಸಿಕೊಂಡಿತ್ತೆಂಬುದನ್ನು Opindia ಪತ್ತೆ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಪ್ರಧಾನಿ ಮೋದಿಯನ್ನು ಅಣಕಿಸುವ ಪೋಸ್ಟ್ ಮಾಡಿರುವ ಕಾಂಗ್ರೆಸ್, 2013ರಲ್ಲಿ (ಅದು ಕೂಡ ಯುಪಿಎ ಆಡಳಿತಾವಧಿ) ಅಲಹಾಬಾದ್ನ ಸಂಗಮ ಕ್ಷೇತ್ರದಲ್ಲಿ ಮಲಿನಗೊಂಡ ಗಂಗಾನದಿಯನ್ನು ದಾಟುತ್ತಿರುವ ಚಿತ್ರ ಬಳಸಿಕೊಂಡಿದೆ. ಇದು ಸೆಲ್ಫ್-ಗೋಲ್ ಇದ್ದಂತೆ, ಯಾಕೆಂದರೆ ಯುಪಿಎ ಆಳ್ವಿಕೆಯಲ್ಲಿ ಗಂಗೆಯ ಪರಿಸ್ಥಿತಿ ಹೀಗಿತ್ತೆಂಬುದನ್ನು ತಾವೇ ಬಿಂಬಿಸಿದಂತಾಗಿದೆ.
ಕಾಂಗ್ರೆಸ್ನ ಬಲುದೊಡ್ಡ ನಾಯಕಿ ಎಂದು ಬಿಂಬಿಸಲಾಗುತ್ತಿರುವ ಪ್ರಿಯಾಂಕಾ ವಾದ್ರಾ (ಗಾಂಧಿ ಹೆಸರನ್ನು ಇನ್ನೂ ಇರಿಸಿಕೊಂಡಿದ್ದಾರೆ) ಅವರು ಕೂಡ, ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರ ಮುಂದುವರಿಸಿದ್ದಾರೆ. ಮೋದಿಯನ್ನು ಟೀಕಿಸುವ ಈ ಟ್ವೀಟ್ನಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಅಮರ್ ಉಜಾಲದಲ್ಲಿ ಪ್ರಕಟವಾದ ನಿರಾಶಾಭಾವದ ಮುಖ ಹೊತ್ತ ರೈತನ ಚಿತ್ರವನ್ನು ಬಳಸಿದ್ದರು. ಇದು ಕೂಡ ಸೆಲ್ಫ್ ಗೋಲ್ನಂತಾಗಿದೆ.
ತಮ್ಮದೇ ಅಧಿಕಾರಾವಧಿಯಲ್ಲಿ ರೈತರ ದುಸ್ಥಿತಿಯ ಚಿತ್ರಗಳನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್, ಪ್ರಿಯಾಂಕಾ ಗಾಂಧಿ ತಮ್ಮದೇ ಸರ್ಕಾರವನ್ನು ಟೀಕಿಸಿದಂತಾಗಿದೆ ಎಂಬುದು ಟ್ವೀಟಿಗರ ಅಭಿಮತ.
ದೇಶವು ಕೋವಿಡ್-19 ಜಾಗತಿಕ ಮಹಾಮಾರಿಯಿಂದ ಕಂಗೆಟ್ಟಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಈ ರೀತಿಯ ಕೀಳು ರಾಜಕೀಯ ಮಾಡುತ್ತಿರುವುದು ವಿಚಿತ್ರ ಎನಿಸಿದೆ.
ಈ ಹಿಂದೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರೂ ನೇಪಾಳದ ಮಹಿಳೆಯೊಬ್ಬಳು ಬೆನ್ನ ಮೇಲೆ ಮಗುವನ್ನು ಒಯ್ಯುತ್ತಿದ್ದ ಚಿತ್ರವೊಂದನ್ನು ಭಾರತದ್ದೆಂಬಂತೆ ತೋರಿಸಿ ಪ್ರಕಟಿಸಿ, ಇದು ಹೊಸ ಭಾರತ ಎಂದು ಟೀಕಿಸಿದ್ದರು.
ಇದಕ್ಕೂ ಮೊದಲು, ಕೇಂದ್ರ ಸರ್ಕಾರವನ್ನು ನಿಂದಿಸಲು ಕಾಂಗ್ರೆಸ್ನ ದಲಿತ ವಿಭಾಗವು, ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಚಿತ್ರ ಬಳಸಿತ್ತು.

Average Rating