ಹೌದು, ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗುವುದನ್ನು ಬಿಟ್ಟು, ಚಿತೆಯ ಬೆಂಕಿಯಿಂದ ಬೀಡಿ ಹೊತ್ತಿಸಿಕೊಳ್ಳುವ ಜಾಯಮಾನ ಕೆಲವು ಭ್ರಷ್ಟ ಮನಸ್ಸುಗಳದು. ರೋಗಿಗೆ ಬೇಕಾದ ಹಾಸಿಗೆ, ಆಮ್ಲಜನಕ, ರೆಮ್ಡಿಸಿವಿರ್ ಚುಚ್ಚುಮದ್ದು ಮುಂತಾದ ಆವಶ್ಯಕ ವಸ್ತುಗಳನ್ನೆಲ್ಲ ಕಾಳಸಂತೆಯಲ್ಲಿ ಮಾರಲಾಗುತ್ತಿದೆ. ಸ್ಮಶಾನಕ್ಕೆ ಒಯ್ಯಲು ಆ್ಯಂಬುಲೆನ್ಸ್ನವರೂ ದುಡ್ಡು ಪೀಕುತ್ತಾರೆ. ಇದೆಂಥಾ ಮನಸ್ಥಿತಿ? ಈ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಮಹಾನುಭಾವರೊಬ್ಬರು ಕಳುಹಿಸಿದ ಸಂದೇಶ, ಮನ ಮುಟ್ಟುತ್ತದೆ. ಎಚ್ಚೆತ್ತುಕೊಳ್ಳಲು ಇದು ಸಕಾಲ.
ನಾವೆಷ್ಟು ಪ್ರಾಮಾಣಿಕರು…????
- ವೈದ್ಯರು ವಿಟಮಿನ್ ‘ಸಿ’ ಹೆಚ್ಚು ಸೇವಿಸಲು ಸಲಹೆ ನೀಡಿದಾಗ, ನಿಂಬೆಹಣ್ಣನ್ನು ಕೆ.ಜಿ.ಗೆ 50 ರೂ. ಬದಲು 150 ರೂ.ಗೆ ಮಾರಾಟ ಮಾಡುವವರು ನಾವೇ!
- 700-800 ರೂ. ದರದ ಆಕ್ಸಿಮೀಟರ್ಗಳನ್ನು 3,000 ರೂ.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು. ಇದು ನಾವೇ!
- ಸಾಮಾನ್ಯವಾಗಿ 40-50 ರೂ.ಗೆ ದೊರೆಯುವ ಎಳನೀರನ್ನು 100 ರೂ.ಗೆ ಮಾರುವವರು. ನಾವೇ!
- ರೋಗಿಗಳಿಗೆ ಆಕ್ಸಿಜನ್ ಕೊರತೆ ಇದೆ ಎಂದು ತಿಳಿದ ಕೂಡಲೇ ಕಾಳಸಂತೆಯಲ್ಲಿ ಅದನ್ನು 60,000 ರೂ. ಅಥವಾ ಅದಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಮಾಡಿ, ರೋಗಿಯಿಂದ ಹಣ ಸಿಕ್ಕ ಕೂಡಲೇ ಕಾಣೆಯಾಗುವವರು. ನಾವೇ!
- ರೋಗಿಗಳು ನರಳಾಡಿ ಸಾಯುತ್ತಿರುವುದು ನೋಡಿ, ರೆಮ್ಡಿಸಿವಿರ್ ಇಂಜೆಕ್ಷನ್ನ ಕಾಳದಂಧೆ ಆರಂಭಿಸಿದವರು ನಾವೇ!
- ಎಳನೀರಿನಿಂದ ಆರಂಭವಾಗಿ ಹಣ್ಣು, ತರಕಾರಿ, ಮೊಟ್ಟೆ, ಚಿಕನ್, ಆಸ್ಪತ್ರೆಯ ಹಾಸಿಗೆವರೆಗೂ ಲೂಟಿ ಮಾಡಿರುವುದು. ಇದು ನಾವೇ!
- ಅಂತ್ಯಸಂಸ್ಕಾರಕ್ಕೆ ಬೇಕಾದ ಸೌದೆಗಳಿಗೆ ಬೇಡಿಕೆ ಹೆಚ್ಚಿಸಿ, ಅಂತ್ಯಸಂಸ್ಕಾರಕ್ಕೆ 20,000 ರೂ. ವಸೂಲಿ ಮಾಡುವುದು. ಇದು ನಾವೇ!
- ಇಂಜೆಕ್ಷನ್ನಲ್ಲಿ ಪ್ಯಾರಾಸಿಟಮೋಲ್ ಔಷಧಿ ಬೆರೆಸಿ ನಂಬಿಕೆಯನ್ನೇ ಮಾರಿಕೊಳ್ಳುವವರು… ನಾವೇ!
- ಬಿಡದಿಯಿಂದ ಕೆಆರ್ಪುರವರೆಗೆ ಶವ ಸಾಗಿಸುವ ನೆಪದಲ್ಲಿ 36,000 ರೂ. ಕೇಳುವವರು. ನಾವೇ!
- ಬೆಂಗಳೂರು ಮಂಗಳೂರು ಹುಬ್ಬಳ್ಳಿ ಬೆಳಗಾವಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಗೆ 20 ರಿಂದ 25 ಸಾವಿರ ರೂ. ಕೇಳುವವರು.. ನಾವೇ!
- ಹೇಗಾದರೂ ಊರು ಸೇರಿಕೊಳ್ಳೋಣ ಎಂದುಕೊಂಡವರಿಂದ ಐದಾರು ಪಟ್ಟು ಬಸ್ ಟಿಕೆಟ್ ಹಣ ಕೀಳುವವರು, ನಾವೇ!
ನಾವು ನಿಜಕ್ಕೂ ಅಷ್ಟೊಂದು ಪ್ರಾಮಾಣಿಕರೇ… ಅಥವಾ ಶವಗಳಿಂದ ಮಾಂಸವನ್ನು ಕಿತ್ತು ತಿನ್ನುವ ರಣಹದ್ದುಗಳೇ…?
ರಣಹದ್ದುಗಳು ಹಸಿವು ನೀಗಿಸಿಕೊಳ್ಳಲು ಜೀವವಿಲ್ಲದ ಶರೀರವನ್ನು ಕಿತ್ತು ತಿನ್ನುತ್ತವೆ. ಆದರೆ ನಾವು ನಮ್ಮ ಖಜಾನೆ ತುಂಬಿಸಿಕೊಳ್ಳಲು ಜೀವ ಇರುವ ಮನುಷ್ಯನನ್ನು ಕಿತ್ತು ತಿನ್ನುತ್ತಿದ್ದೇವೆ. ಅಂತಹ ಸಂಪತ್ತನ್ನು ನಾವು ಯಾರಿಗೋಸ್ಕರ ಹಾಗೂ ಎಲ್ಲಿಗೆ ಕೊಂಡೊಯ್ಯುತ್ತೇವೆ?
ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಒಮ್ಮೆ ಯೋಚಿಸಿ.
ಎಲ್ಲರೂ ಒಂದಲ್ಲ ಒಂದು ದಿನ ತಮ್ಮ ಪಾಲಿನ ಖರ್ಚನ್ನು ಭರಿಸಲೇಬೇಕಾಗುತ್ತದೆ. ಜನರ ನ್ಯಾಯಾಲಯದಲ್ಲಿ ಈ ಖರ್ಚು ಭರಿಸದಿದ್ದರೂ ದೇವರ ನ್ಯಾಯಾಲಯದಲ್ಲಿ ಭರಿಸಲೇಬೇಕಾಗುತ್ತದೆ…
ಭಾರತವನ್ನು ಇಂದು ಕೊರೊನಾ ಮಾತ್ರ ಕೊಲ್ಲುತ್ತಿಲ್ಲ. ಭ್ರಷ್ಟ ಭಾರತೀಯರೇ ಭಾರತೀಯರನ್ನು ಕೊಲ್ಲುತ್ತಿದ್ದಾರೆ!!!
ಈ ಸಂದೇಶವನ್ನು ಇತರರಿಗೂ ತಲುಪಿಸಿ. ಇದನ್ನು ಓದಿದ ಒಬ್ಬೇ ಒಬ್ಬ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಂಡರೂ, ರೋಗದಿಂದಲ್ಲದೆ ಪರಿಸ್ಥಿತಿಯ ಅಸಮರ್ಪಕ ನಿರ್ವಹಣೆ ಹಾಗೂ ಸಂಪತ್ತಿನ ಕ್ರೋಡೀಕರಣದಿಂದ ಸಾಯುತ್ತಿರುವ ಕೆಲ ಜೀವಗಳನ್ನಾದರೂ ಉಳಿಸಲು ಸಾಧ್ಯವಾಗಬಹುದು.
ಮಾನವರಾಗೋಣ, ಬನ್ನಿ!

Average Rating