ಕಳೆದ ವರ್ಷದ ಭೀಕರ ಪ್ರವಾಹದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ಈ ಆಗಸ್ಟ್ ಕೂಡ ಕರಾಳ ಎನಿಸಿದೆ. ಶುಕ್ರವಾರ ಅಶುಭವಾಗಿದೆ. ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯ ರಾಜಮಲ ಹಿಲ್ಸ್ ಸಮೀಪ ಪೆಟ್ಟಿಮುಡಿಯಲ್ಲಿ ಬೆಳಿಗ್ಗೆ ಭೂಕುಸಿತ ಸಂಭವಿಸಿ 18 ಮಂದಿ ಭೂಸಮಾಧಿಯಾಗಿದ್ದಾರೆ.
ರಾತ್ರಿ 7:40ರ ಸುಮಾರಿಗೆ, ದುಬೈಯಿಂದ ಆಗಮಿಸಿದ “ವಂದೇ ಭಾರತ್ ಮಿಷನ್” ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಇಳಿಯುವ ಹಂತದಲ್ಲಿ ರನ್ವೇಯಲ್ಲಿ ನೆಲಕ್ಕಪ್ಪಳಿಸಿ ಎರಡು ತುಂಡಾಗಿದ್ದು, ಪೈಲಟ್ ಸಹಿತ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಹಲವರು ಗಾಯಗೊಂಡು ಪಾರಾಗಿದ್ದಾರೆ.
ಕೋಯಿಕ್ಕೋಡ್ ಸಮೀಪದ ಕರಿಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಟೇಬಲ್ಟಾಪ್ ಮಾದರಿಯಲ್ಲಿದೆ. ಲ್ಯಾಂಡಿಂಗ್ ಆಗುವ ವೇಳೆಗೆ 32 ಅಡಿ ಕೆಳ ಬಿದ್ದು ಇಬ್ಭಾಗವಾಗಿದೆ. ದುರ್ದೈವಿ ವಿಮಾನದಲ್ಲಿ 10 ಹಸುಳೆಗಳ ಸಹಿತ 191 ಮಂದಿ ಇದ್ದರು.
ನರೇಂದ್ರ ಮೋದಿ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಎಮಿರೇಟ್ಸ್ ದೇಶಗಳಿಂದ ಕೋವಿಡ್ ಬಾಧೆಯಿಂದಾಗಿ ಕೇರಳೀಯರನ್ನು ಏರ್ಇಂಡಿಯಾದ ಬೋಯಿಂಗ್ 737 ವಿಮಾನದಲ್ಲಿ ಮರಳಿ ನಾಡಿಗೆ ಕರೆತರಲಾಗಿತ್ತು. ಇವರಲ್ಲಿ ಹೆಚ್ಚಿನವರು ಉದ್ಯೋಗ ಕಳೆದುಕೊಂಡವರು ಹಾಗೂ ವೀಸಾ ಅವಧಿ ಮುಗಿದು ಮರಳಿದವರು.
ಅನುಭವಿ ಪೈಲಟ್ ದೀಪಕ್ ವಿ. ಸಾಠೆ, ಸಹಪೈಲಟ್ ಅಖಿಲೇಶ್ ಕುಮಾರ್ ಕೂಡ ಮೃತಪಟ್ಟಿದ್ದಾರೆ. 2010ರಲ್ಲಿ ಮಂಗಳೂರು ಟೇಬಲ್ಟಾಪ್ ವಿಮಾನದಲ್ಲಿ ದುಬೈ ಪ್ರಯಾಣಿಕರಿದ್ದ ವಿಮಾನವು ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿ ರನ್ವೇಯಿಂದ ಜಾರಿ, ಕೆಳಬಿದ್ದು ಸ್ಫೋಟಿಸಿ ಉರಿದು ಕನಿಷ್ಠ 150 ಮಂದಿ ದುರಂತ ಸಾವನ್ನಪ್ಪಿದ್ದರು.
ವರದಿಗಳ ಪ್ರಕಾರ, ಭಾರಿ ಮಳೆಯಿಂದಾಗಿ ವಿಮಾನ ಇಳಿಸುವುದು ಕಷ್ಟವಾಗಿ ಎರಡು ಪ್ರಯತ್ನಗಳನ್ನು ಮಾಡಲಾಗಿತ್ತು. ಮೂರನೇ ಯತ್ನದ ವೇಳೆ, ಹಿಂಭಾಗದ ರೆಕ್ಕೆಗಳಿರುವ ಪ್ರದೇಶದಲ್ಲಿ ಬಲವಾದ ಗಾಳಿಯಿಂದ (ಟೇಲ್ವಿಂಡ್), ಟಚ್ಡೌನ್ ಪಾಯಿಂಟ್ನಾಚೆ ಇಳಿದು ನಿಗದಿತ ಸಮಯದಲ್ಲಿ ನಿಲ್ಲಲಾಗದೆ, ರನ್ವೇಯಿಂದ ಜಾರಿ ಹೋಯಿತು.

Average Rating