ಭ್ರಷ್ಟಾಚಾರ ಎಲ್ಲೆಲ್ಲಾ ನಡೆಯುತ್ತಿದೆಯೋ, ಎಲ್ಲೆಲ್ಲಾ ದೇಶದ ತೆರಿಗೆದಾರನ ಹಣ ಸುಖಾ ಸುಮ್ಮನೆ ಸೋರಿಕೆಯಾಗುತ್ತಿದೆಯೋ ಅಲ್ಲೆಲ್ಲಾ ಮುಚ್ಚಳ ಹಾಕಿ ಸರಿಪಡಿಸಲು ಪ್ರಯತ್ನಿಸುತ್ತಿರುವ ದೇಶ ಕಂಡ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್, ಎಡಪಕ್ಷಗಳು ದೇಶಕ್ಕೆ ಕೆಟ್ಟ ಹೆಸರು ತರುವ, ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ದೇಶದ್ರೋಹಿ ಕೆಲಸ ಮಾಡುವವರನ್ನೆಲ್ಲಾ ಬೆಂಬಲಿಸುತ್ತಿರುವುದು ಆಘಾತಕಾರಿ ಸಂಗತಿ.
ಇದೇ ಕಾರಣಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪದೇ ಪದೇ ಸುಳ್ಳು ಹೇಳುತ್ತಲೇ ಇರುವ (ಎಂಎಸ್ಪಿ ನಿಲ್ಲಿಸ್ತಾರೆ, ಎಪಿಎಂಸಿ ಬಂದ್ ಮಾಡ್ತಾರೆ, ರೈತರಿಂದ ಜಮೀನು ಕಸಿದುಕೊಳ್ಳಲಾಗುತ್ತದೆ ಅಂತ), ವೃಥಾ ಆರೋಪವನ್ನು ಎಷ್ಟೇ ಸ್ಪಷ್ಟನೆ ನೀಡಿದ ಬಳಿಕವೂ ಮಾಡುತ್ತಲೇ ಇರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಬಗ್ಗೆ ಮೊನ್ನೆ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಒಂದು ಎಚ್ಚರಿಕೆ ಸೂಚನೆಯನ್ನು ನೀಡಿದ್ದರು. ಇಲ್ಲಿ ನೋಡಿದರೆ ಓದುಗರಿಗೆ ಈ ವಿಷಯ ವೇದ್ಯವಾಗುತ್ತದೆ.
ಈಗ ಸ್ಟಬಲ್ ಬರ್ನಿಂಗ್ ಹೆಸರಿನಲ್ಲಿ (ಬೆಳೆಗಳನ್ನು ಪ್ರತ್ಯೇಕಿಸಿದ ಬಳಿಕ ಉಳಿದುಕೊಳ್ಳುವ ಸಸ್ಯಗಳ ಕಾಂಡ ಭಾಗವನ್ನು ಸುಡುವ ಕೆಲಸ) ಪರಿಸರ ಮಾಲಿನ್ಯಕ್ಕೆ ಅಪಾಯಕಾರಿ ಕೊಡುಗೆ ನೀಡುತ್ತಿರುವ ಪಂಜಾಬ್ ಮತ್ತು ಹರ್ಯಾಣ ರೈತರ ಕ್ರಮದ ವಿರುದ್ಧ ಹೋರಾಡಬೇಕಾಗಿದ್ದ ತಥಾಕಥಿತ ‘ಅಂತರರಾಷ್ಟ್ರೀಯ’ ಪರಿಸರ ಹೋರಾಟಗಾರ್ತಿ ಗ್ರೇಥಾ ಥನ್ಬರ್ಗ್ ಹಾಗೂ ಬೆಂಗಳೂರಿನ ದಿಶಾ ರವಿ – ದಾರಿ ತಪ್ಪಿದ್ದಾರೆ ಅಥವಾ ಅವರ ದಾರಿ ತಪ್ಪಿಸಲಾಗಿದೆ.
ಈಗ ಅವರು ಭಾರತದ ವಿರುದ್ಧ ಹೋರಾಡುವಂತೆ ಕರೆ ನೀಡುತ್ತಾ, ಜಾಗತಿಕ ಜನರನ್ನು ಪ್ರಚೋದಿಸಲು ರೂಪಿಸಲಾದ ಟೂಲ್ ಕಿಟ್ ಎಂಬ ಹೆಸರಿನ ದಾಖಲೆ ನಮೂನೆಯಲ್ಲಿ ಏನಿತ್ತು ಎಂಬ ಅಂಶವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆಯಲ್ಲವೇ? ಇದರಲ್ಲಿದ್ದ ಭಾರಿ ವಿವಾದಾತ್ಮಕ ಅಂಶಗಳಿರುವುದರಿಂದ ಗ್ರೇಥಾ ಡಿಲೀಟ್ ಮಾಡಿ, ತಿದ್ದುಪಡಿ ಮಾಡಲಾದ ಟೂಲ್ ಕಿಟ್ ನಮೂನೆಯನ್ನು ಹಂಚಿಕೊಂಡಿದ್ದಳು.
ಆದರೆ, ಡಿಲೀಟ್ ಮಾಡಿದ ಟೆಂಪ್ಲೇಟ್ನಲ್ಲಿ (ಪ್ರತಿಭಟನೆ ಹೇಗೆ, ಎಲ್ಲಿ ಮಾಡಬೇಕು ಎಂದೆಲ್ಲಾ ಸೂಚಿಸುವ ನಮೂನೆ) ಏನಿತ್ತು? ಇಲ್ಲಿದೆ ನೋಡಿ ಆಘಾತಕಾರಿ ಮಾಹಿತಿ! ಡಿಲೀಟ್ ಮಾಡುವಷ್ಟರಲ್ಲಿ ಸಾಕಷ್ಟು ಜನರು ಅದನ್ನು ಡೌನ್ಲೋಡ್ ಮಾಡಿಕೊಂಡಿದ್ದರು ಎಂಬುದು ನೆನಪಿರಲಿ.
ಅಪ್ಡೇಟ್ ಮಾಡಿದ ಟೂಲ್ ಕಿಟ್ ಇಲ್ಲಿದೆ ಅಂತ ಗ್ರೇಟಾ ಥನ್ಬರ್ಗ್ ಶೇರ್ ಮಾಡಿದ್ದರಲ್ಲಿ, ಜ.26ರ ರೈತರ ಗಲಭೆಯ ವಿಷಯಗಳನ್ನೆಲ್ಲ ಡಿಲೀಟ್ ಮಾಡಲಾಗಿದೆ ಮತ್ತು ಪ್ರಮುಖ ಸಂಚಿನ ಅಂಶಗಳೂ ಇರಲಿಲ್ಲ.
ಅದರ ಮುಖಪುಟದಲ್ಲಿಯೇ ಭಾರತವನ್ನು ಪ್ರಶ್ನಿಸಿ ಯಾಕೆ? ಅಂತ ಎಂಬ ಒಕ್ಕಣೆಯಿದೆ ಮತ್ತು ಈ ಮೊದಲ ಅಲೆಯಲ್ಲಿ ಮಾನವನ ಇತಿಹಾಸದಲ್ಲೇ ಅತಿದೊಡ್ಡ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೀರಾ ಎಂಬ ಪ್ರಚೋದನೆಯೂ ಇದೆ.
ಭಾರತದ ಪ್ರಜಾಪ್ರಭುತ್ವವು ಆಡಳಿತಾರೂಢ ಪಕ್ಷವಾದ ಆರೆಸ್ಸೆಸ್-ಬಿಜೆಪಿಯಿಂದಾಗಿ ವಿನಾಶವಾಗುತ್ತಿದೆ. ಕೃಷಿ ವಲಯವನ್ನು ವಾಣಿಜ್ಯೀಕರಣಗೊಳಿಸುವುದರ ವಿರುದ್ಧ ನಿಲ್ಲೋಣ ಎಂಬ ಒಕ್ಕಣೆಯಿದೆ.
ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳು ಎಂಬಲ್ಲಿ, ಫೆ.4 ಹಾಗೂ 5ರಂದು ಟ್ವಿಟರ್ ಬಿರುಗಾಳಿ ಎಬ್ಬಿಸಬೇಕು, 5, 6ರಂದು ದೆಹಲಿಯಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಕಾಣಿಸುವ ಚಿತ್ರಗಳನ್ನು ಕಳುಹಿಸಬೇಕು. ಸರಕಾರಿ ಪ್ರತಿನಿಧಿಗೆ ಕರೆ ಅಥವಾ ಇಮೇಲ್ ಮೂಲಕ ಒತ್ತಡ ಹೇರಬೇಕು, ಆನ್ಲೈನ್ ಅರ್ಜಿಗೆ ಸಹಿ ಹಾಕಬೇಕು ಅಂತ ಹೇಳಲಾಗಿದೆ ಮತ್ತು ಅಂಬಾನಿ-ಅದಾನಿಯ ಏಕಸ್ವಾಮ್ಯವನ್ನು ತಡೆಯಬೇಕು ಎಂದು ತಿಳಿಸಲಾಗಿದೆ.
ಅದೇ ರೀತಿ ಭಾರತೀಯ ರಾಯಭಾರ ಕಚೇರಿ, ವಾರ್ತಾ ಭವನ ಅಥವಾ ಸ್ಥಳೀಯ ಸರಕಾರಿ ಕಚೇರಿಯೆದುರು ಫೆ.13, 14ರಂದು ಪ್ರತಿಭಟನೆ ನಡೆಸಬೇಕೆಂದೂ, ಸೋಷಿಯಲ್ ಮೀಡಿಯಾದಲ್ಲಿ ಅದರ ಚಿತ್ರಗಳನ್ನು ಹಂಚಿಕೊಳ್ಳಬೇಕೆಂದೂ ಕರೆ ನೀಡಲಾಗಿತ್ತು.
ಇದಕ್ಕೆ ಮುಂಚಿತವಾಗಿ, ಆಸ್ಕ್ ಇಂಡಿಯಾ ವೈ ಹ್ಯಾಶ್ ಟ್ಯಾಗಿನಲ್ಲಿ ಜ.23ರಿಂದ ಜ.26ರೊಳಗೆ ಡಿಜಿಟಲ್ ಸ್ಟ್ರೈಕ್ (ದಾಳಿ) ನಡೆಸಬೇಕು ಎಂದು ಸೂಚಿಸಲಾಗಿದೆ. ಜ.23ರಂದು ಟ್ವೀಟ್ ಸ್ಟಾರ್ಮ್ (ಟ್ವಿಟರ್ ಬಿರುಗಾಳಿ) ಎಬ್ಬಿಸಿ, ಪ್ರಧಾನಿ, ಕೃಷಿ ಸಚಿವರನ್ನು ಟ್ಯಾಗ್ ಮಾಡಬೇಕಂತೆ, ಜೊತೆಗೆ ಸ್ಥಳೀಯ ರಾಜ್ಯಗಳ ಮುಖ್ಯಸ್ಥರು, IMF, WHO, FAO, ವಿಶ್ವಬ್ಯಾಂಕ್ ಮುಂತಾದವುಗಳಿಗೆ ಟ್ಯಾಗ್ ಮಾಡಬೇಕಂತೆ.
ಅದೇ ರೀತಿ, ದೆಹಲಿ ಗಡಿಯ ರೈತರ ಜೊತೆ ಝೂಮ್ನಲ್ಲಿ ಸೆಶನ್ ನಡೆಸಬೇಕು, ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಬೇಕು, ವಿಶ್ವದಾದ್ಯಂತ ಪರಿಸರ ಕಾರ್ಯಕರ್ತರನ್ನೂ ಸೇರಿಸಿ ಲೈವ್ ಮಾಡಬೇಕೆಂಬ ಸೂಚನೆಯಿತ್ತು.
ಭಾರತೀಯ ರಾಯಭಾರ ಕಚೇರಿಗಳು, ಸರಕಾರಿ ಕಚೇರಿಗಳು, ಮಾಧ್ಯಮ ಕಚೇರಿಗಳು (ಅಲ್ಲದೆ ಅದಾನಿ, ಅಂಬಾನಿ ಕಚೇರಿಗಳಲ್ಲೂ) ಜಾಗತಿಕವಾಗಿ ಪ್ರತಿಭಟನೆ ಮಾಡುವಂತೆ ಕರೆ ನೀಡಲಾಗಿದೆ.
ಜ.26ರಂದು ಮೊಟ್ಟಮೊದಲ ಬಾರಿಗೆ ಗಡಿಯಿಂದ ದೆಹಲಿಗೆ ಮತ್ತು ಮರಳುವ ಹಾದಿಯಲ್ಲಿ ರೈತರ ಪ್ರತಿಭಟನೆ ನಡೆಯಲಿದೆ. ನಿಮ್ಮ ನಿಮ್ಮ ಊರಲ್ಲೇ ಪ್ರತಿಭಟನೆ ನಡೆಸಿ, ಕಚೇರಿಗಳ ಮುಂದೆ ಪ್ರತಿಭಟಿಸಿ ಎಂದು ಕರೆ ನೀಡಲಾಗಿದ್ದು, ಇದಕ್ಕಾಗಿ ಬೇಕಾದ ಬ್ಯಾನರ್, ಸೋಷಿಯಲ್ ಮೀಡಿಯಾ ಟೆಂಪ್ಲೇಟುಗಳ ಲಿಂಕ್ ಕೂಡ ನೀಡಲಾಗಿದೆ.
ಇಷ್ಟಲ್ಲದೆ, ವೀಡಿಯೊ ಮಾಡಿ ಕಳಿಸಿ, ಪೋಸ್ಟರ್, ಪೇಪರ್, ಚಾರ್ಟ್ ಹಿಡಿದ ಚಿತ್ರಗಳನ್ನು ಹಂಚಿಕೊಳ್ಳಿ. ಸ್ಕ್ರೀನ್ನಲ್ಲಿ ಇವೆಲ್ಲವನ್ನೂ ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಪ್ರದರ್ಶಿಸಲಾಗುತ್ತದೆ. ನಿಮಗೆ ಬೇಕಾದವರನ್ನೆಲ್ಲಾ ಟ್ಯಾಗ್ ಮಾಡಿ ಎಂಬ ಸೂಚನೆಯಿದೆ.
ಇಷ್ಟೇ ಅಲ್ಲ, ಭಾರತಕ್ಕೆ ಮಾನವ ಹಕ್ಕುಗಳ ಉಲ್ಲಂಘನೆಯ ದೊಡ್ಡ ಚರಿತ್ರೆಯೇ ಇದೆಯಂತೆ, ಕೆಲವು ಸುಲಭ ತುತ್ತಾಗಬಲ್ಲ ನಾಗರಿಕರಿಗೆ ಕ್ರೂರ ಅನ್ಯಾಯ ಮಾಡಲಾಗಿದೆಯಂತೆ! ಜ.26ರಂದು ತನ್ನದೇ ಸಂವಿಧಾನ ಉಲ್ಲಂಘಿಸುವ ನೀತಿಗಳನ್ನು ತರುವ ಸರಕಾರವು, ಮಿಲಿಟರಿ ಪೆರೇಡ್ ನಡೆಸಿ ಸಂವಿಧಾನದ ಸ್ವೀಕಾರವನ್ನು ಆಚರಿಸುತ್ತದೆ ಎಂದೆಲ್ಲಾ ಹೀಯಾಳಿಸಲಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದ ದಾಖಲೆಯಾಗಿರುವುದರಿಂದ, ಬೇರೆ ದೇಶದವರು ಭಾರತವನ್ನು ದೂರುವುದರಲ್ಲಿ ಅರ್ಥವೂ ಇಲ್ಲ, ಈ ರೀತಿ ಪ್ರಚೋದನೆ ಮಾಡುವುದು ಭಾರತದ್ರೋಹವೇ ಸರಿ.
ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರು ಮೋದಿ ಆಡಳಿತದ ಜೊತೆ ಕೈಜೋಡಿಸಿ, ಜಗತ್ತಿನ ಜನರು, ಭೂಮಿ, ಸಂಸ್ಕೃತಿಯನ್ನೆಲ್ಲಾ ಬಗೆದು ದುಡ್ಡು ಮಾಡುತ್ತಿದ್ದಾರಂತೆ. ಅಂಥವರ ಬ್ರ್ಯಾಂಡ್ಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗಿದೆ.
ಟೂಲ್ ಕಿಟ್ನಲ್ಲಿ ಪ್ರಮುಖ ಲಿಂಕ್ಗಳೂ ಇದ್ದು, ಒಂದು ವೆಬ್ ತಾಣದ ಅಬೌಟ್ ವಿಭಾಗಕ್ಕೆ ಹೋಗಿ ನೋಡಿದರೆ, ಪ್ರತ್ಯೇಕತಾವಾದಿಗಳ ಕೈವಾಡ ಇರುವುದು ಗೋಚರಿಸುತ್ತದೆ. ಅದರಲ್ಲಿ ಬರೆದುಕೊಂಡ ಪ್ರಕಾರ, ‘ಕೆನಡಾ,, ಅಮೆರಿಕ ಮತ್ತು ಯುಕೆಯಲ್ಲಿರುವ ಸ್ವಯಂಸೇವಕರ ಗುಂಪು ನಮ್ಮದು, ಭಾರತೀಯ ಕೃಷಿಕ ಸಮುದಾಯದ ಸಾಮಾಜಿಕ ನ್ಯಾಯದ ಕುರಿತು ಆಸಕ್ತರಾಗಿದ್ದೇವೆ, ತಮ್ಮ ನಾಡಿನಲ್ಲಿ “ಸ್ವಾಯತ್ತೆ”ಗಾಗಿ ಹೋರಾಡುತ್ತಿರುವ ಹಿರಿಯರು, ಅಣ್ಣಂದಿರು, ಅಕ್ಕಂದಿರಿಂದ ದೂರವಿರುವುದು ನಮಗೆ ಖೇದಕರ ಸಂಗತಿ’ ಎಂದು ಬರೆದುಕೊಳ್ಳಲಾಗಿದೆ.
ಗ್ರೇಟಾ ಥನ್ಬರ್ಗ್ ಎಂಬ ಅಂತಾರಾಷ್ಟ್ರೀಯ ಖ್ಯಾತಿಗೇರಿದ ಪರಿಸರವಾದಿ ಹುಡುಗಿಯು ಶೇರ್ ಮಾಡಿದ ಎರಡನೇ ಟೂಲ್ ಕಿಟ್ನಲ್ಲಿ ಜ.26ರ ಪ್ರತಿಭಟನೆಯ ರೂಪುರೇಷೆಗಳ ವಿವರ ಡಿಲೀಟ್ ಆಗಿದೆ. ಜೊತೆಗೆ, ಅದಾನಿ, ಅಂಬಾನಿ ಹೆಸರನ್ನೂ ತೆಗೆಯಲಾಗಿದೆ.
ಟೂಲ್ ಕಿಟ್ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Average Rating