ನವದೆಹಲಿ: ಲಡಾಖ್ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆ.29ರ ಶನಿವಾರ ರಾತ್ರಿ ಭಾರತೀಯ ಸೈನಿಕರು ಮಹತ್ಸಾಧನೆ ಮಾಡಿ, ಚೀನಾಕ್ಕೆ ಸೆಡ್ಡು ಹೊಡೆದು ಕೇಕೆ ಹಾಕಿದ್ದು ಗೊತ್ತಲ್ಲ? ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಎಸ್ಟಾಬ್ಲಿಷ್ಮೆಂಟ್ 22 ಅಂತ ಕರೆಯಲಾಗುವ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ (SFF).
ಈ ವಿಶೇಷ ಪಡೆಯು ನೇರವಾಗಿ ಸಂಪುಟ ಕಾರ್ಯಾಲಯ ಹಾಗೂ ಪ್ರಧಾನ ಮಂತ್ರಿ ಕಚೇರಿಯ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಯಾಕೆಂದರೆ ಇದೊಂದು ರಹಸ್ಯ ಕಾರ್ಯಾಚರಣಾ ಪಡೆ.
ಪೂರ್ವ ಲಡಾಖ್ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷ ಏರ್ಪಟ್ಟಿರುವುದು ಎಲ್ಲರಿಗೂ ತಿಳಿದಿದೆ. ಸರೋವರದ ದಂಡೆಯಲ್ಲಿರುವ, ಉಭಯ ದೇಶಗಳಿಗೂ ಸೇರದೇ ಇರುವ 8 ಶಿಖರಗಳಲ್ಲಿ, ಫಿಂಗರ್ 2ರಲ್ಲಿದ್ದ ಭಾರತವು ಫಿಂಗರ್ 4ರವರೆಗೂ ಮುಂದೊತ್ತಿ ಈಗ ಗೆಲುವಿನ ಕೇಕೆ ಹಾಕಿದೆ.
ಈ ವಿಜಯದ ಸಂದರ್ಭದಲ್ಲಿ SFF ನೆರವು ದೊರೆತಿದೆ ಎಂಬುದು ಗೊತ್ತಾಗಿದ್ದೇ, ಅದರ ಯೋಧರೊಬ್ಬರು ಹುತಾತ್ಮರಾದ ಬಳಿಕ. ಅಷ್ಟು ರಹಸ್ಯವಾಗಿ ಈ ಪಡೆಯ ಕಾರ್ಯಾಚರಣೆ ನಡೆಯುತ್ತದೆ. SFF ಪಡೆ ತಮ್ಮೊಂದಿಗೆ ಇದೆ ಎಂದು ಸೇನೆಯು ಹೇಳುತ್ತಿದೆಯಾದರೂ, ಅದರೊಂದಿಗೆ ಸಂವಹನ ಯಾರಿಗೂ ಗೊತ್ತಿರುವುದಿಲ್ಲ.
1962ರಲ್ಲಿ ಪಾಪಿ ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ, ಭಾರತದಲ್ಲಿ ನೆಲಸಿರುವ ಟಿಬೆಟ್ ನಿರಾಶ್ರಿತರನ್ನೊಳಗೊಂಡ SFF ಕಮಾಂಡೋ ಪಡೆಯನ್ನು ಸ್ಥಾಪಿಸಲಾಗಿತ್ತು. ಶತ್ರುಗಳ ನಾಡಿನಲ್ಲಿ ಕಾರ್ಯಾಚರಣೆಗಾಗಿಯೇ ಗುಪ್ತದಳ, RAW (ರಾ) ಹಾಗೂ ಸಿಐಎಯಿಂದ ಪಕ್ಕಾ ತರಬೇತಿ ಹೊಂದಿರುವ ಈ ಪಡೆಯು, ಚೀನಾವು ಪರಮಾಣು ಸಿಡಿತಲೆಗಳನ್ನು ನಿಯೋಜಿಸುವ ಯೋಜನೆಗಳ ಮೇಲೆಯೇ ಗಮನ ಕೇಂದ್ರೀಕರಿಸಿತ್ತು.
ಇದನ್ನೂ ಓದಿ: ಗಡಿ ಬಿಕ್ಕಟ್ಟು | ಚೀನಾ ಕಣ್ಣಿಗೆ ಮಣ್ಣೆರಚಿದ ಭಾರತೀಯ ಸೇನೆ: ಲಬೋ ಲಬೋ ಎನ್ನುತ್ತಿದೆ ಚೀನಾ!
ಉತ್ತರಾಖಂಡದ ಚಕ್ರಾತಾ ಎಂಬಲ್ಲಿ ಮುಖ್ಯಾಲಯ ಹೊಂದಿರುವ ಈ ಪಡೆಯ ಸಂಸ್ಥಾಪಕ ಮುಖ್ಯಸ್ಥ ಸುಜನ್ ಸಿಂಗ್ ಉಬಾನ್. ಇವರು ಯೂರೋಪ್ನಲ್ಲಿ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ 22ನೇ ಮೌಂಟೇನ್ ರೆಜಿಮೆಂಟ್ನ ಮುಖ್ಯಸ್ಥರಾಗಿದ್ದರು. ಈ ಕಾರಣಕ್ಕೆ ‘ಎಸ್ಟಾಬ್ಲಿಷ್ಮೆಂಟ್ 22’ ಎಂಬ ಹೆಸರು ಈ SFF ಕಮಾಂಡೋ ಪಡೆಗೆ.
ಇದರಲ್ಲಿರುವ ಸುಮಾರು 5000 ದಷ್ಟು ಧೀರ ಯೋಧರೆಲ್ಲರೂ ಪರ್ವತೀಯ ಯುದ್ಧಕೌಶಲ್ಯಗಳಲ್ಲಿ ಪಕ್ಕಾ ತರಬೇತಿ ಪಡೆದಿರುವ ಪ್ಯಾರಾಟ್ರೂಪರ್ಗಳು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ. ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಶನಿವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ SFF ಪಾತ್ರ ಇತ್ತು ಎಂಬುದನ್ನು ಯಾವುದೇ ಸೇನಾಧಿಕಾರಿ ಖಚಿತಪಡಿಸುವಂತಿಲ್ಲ. ಆದರೂ, ಲಡಾಖ್ನ ಮುಂಚೂಣಿ ನೆಲೆಗಳಲ್ಲಿ SFF ಕಮಾಂಡರ್ಗಳಿದ್ದಾರೆ ಎಂಬುದನ್ನಂತೂ ಅವರು ಒಪ್ಪಿಕೊಳ್ಳುತ್ತಾರೆ.
ಅವರ ಇರುವಿಕೆಯಂತೂ ಸೇನೆಗೆ ತಿಳಿದಿರುತ್ತದೆ. ಆದರೆ ಏನು ಮಾಡುತ್ತಾರೆ, ಏನು ಮಾಡಬೇಕು ಎಂಬುದೆಲ್ಲ ಸೇನೆಯ ಕೈಯಲ್ಲಿರುವುದಿಲ್ಲ. ಅವರೊಂದಿಗೆ ಕೆಲಸ ಮಾಡುವವರು ರಹಸ್ಯ ಕಾಪಾಡುವ ಪ್ರತಿಜ್ಞೆ ಸ್ವೀಕರಿಸಬೇಕಾಗುತ್ತದೆ.
ಇದನ್ನೂ ಓದಿ: ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)
ಈ ರಹಸ್ಯ ಕಾಪಿಡುವ ಕಾರಣಕ್ಕಾಗಿಯೇ ಈ ಪಡೆಯ ವೀರ ಯೋಧರ ತ್ಯಾಗ ಬಲಿದಾನಗಳನ್ನೆಲ್ಲಾ ಬಹಿರಂಗಪಡಿಸುವುದಿಲ್ಲ. ಸಚಿವಾಲಯದ ಪ್ರಕಟಣೆಯಲ್ಲಿಯೂ ಶನಿವಾರ ಬಲಿದಾನಗೈದ ತೆಂಜಿಂಗ್ ಅವರ ಹೆಸರಿಲ್ಲದಿರುವುದೂ ಇದೇ ಕಾರಣಕ್ಕೆ.
ಈ ವಿಷಯ ಹೇಳಿರುವುದು ಟಿಬೆಟ್ ಸಂಸತ್ ಸದಸ್ಯ ಲಗ್ಯಾರಿ ನಮ್ಗ್ಯಾಲ್ ದೋಲ್ಕರ್. 51ರ ಹರೆಯದ ಹುತಾತ್ಮ ಯೋಧ ತೆಂಜಿಂಗ್ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಬುಧವಾರ ಲೇಹ್ನಲ್ಲಿ ಅವರ ಪತ್ನಿ, ಮೂವರು ಮಕ್ಕಳಿಗೆ ಒಪ್ಪಿಸಲಾಗಿದೆ.
ಈ ಧೀರ ಯೋಧರ ಸಮರ್ಥ ಬೆಂಬಲದ ಕಾರಣದಿಂದಾಗಿಯೇ ಶನಿವಾರದ ಬೆಳವಣಿಗೆಯಲ್ಲಿ ಭಾರತೀಯ ಪಡೆಗಳು ಮುಂದೊತ್ತಿ, ಅಗ್ರ ಶಿಖರವೇರಿ, ಚೀನಾದ ಎಲ್ಲ ಸೇನಾ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗಿದ್ದು. ಇದೇ ಕಾರಣಕ್ಕೆ ಈಗ ಚೀನಾ ಕೂಡ ಲಬೋ ಲಬೋ ಅಂತ ಬಾಯಿ ಬಡಿದುಕೊಳ್ಳುತ್ತಿರುವುದು.
ಈ ಹೋರಾಟದಲ್ಲಿ SFF ಯೋಧ, ಟಿಬೆಟ್ ಮೂಲದ ನಿಮಾ ತೆಂಜಿನ್ ತಮಗೆ ಆಶ್ರಯ ನೀಡಿದ ಭಾರತದ ರಕ್ಷಣೆಗಾಗಿ ಬಲಿದಾನ ಮಾಡಿದ್ದಾರೆ. ಚೀನಾದ ವಿಸ್ತರಣಾ ವಾದದ ವಿರುದ್ಧ ಸಿಡಿದೆದ್ದಿದ್ದ ಟಿಬೆಟನ್ನರು, ಅವಕಾಶ ದೊರೆತರೆ ಭಾರತಕ್ಕಾಗಿ ಪ್ರಾಣ ಬಿಡಲೂ ಸಿದ್ಧರಾಗಿದ್ದಾರೆ ಎಂಬ ಸ್ಪಷ್ಟ ಸಂದೇಶವೊಂದು ಈಗ ಚೀನಾಕ್ಕೆ ಹೋಗಿದೆ.

Average Rating