ನವದೆಹಲಿ: ಸತ್ಯ ಮತ್ತು ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳದೆ ಕೋವಿಡ್-19 ಈ ಪರಿಯಾಗಿ ಹರಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಟೀಕಿಸಿದ್ದ ಕಾಂಗ್ರೆಸ್ ‘ರಾಜಮಾತೆ’ ಸೋನಿಯಾ ಗಾಂಧಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸರಿಯಾದ ತಿರುಗೇಟು ನೀಡಿದ್ದಾರೆ.
“ಜನರಲ್ಲಿ ಸುಳ್ಳು ಹರಡುತ್ತಾ ಅವರ ದಾರಿತಪ್ಪಿಸುವ ಕೆಲಸವನ್ನು, ಸುಖಾ ಸುಮ್ಮನೆ ಅಪಪ್ರಚಾರ ಮಾಡುತ್ತಾ ಜನರಲ್ಲಿ ಆತಂಕ ಮೂಡಿಸುವ ಕೆಲಸವನ್ನು ಮಾತ್ರವೇ ಅಲ್ಲದೆ, ಲಸಿಕೆ ನೀತಿಯ ವಿರುದ್ಧ ತದ್ವಿರುದ್ಧ ಹೇಳಿಕೆ ನೀಡುವುದನ್ನು ನೀವು ಮತ್ತು ನಿಮ್ಮ ಪಕ್ಷದ ಮುಖ್ಯಮಂತ್ರಿಗಳು ಮೊದಲು ನಿಲ್ಲಿಸಿ” ಎಂದು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ನಡ್ಡಾ ಬಿಸಿ ಮುಟ್ಟಿಸಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ) ಸಭೆಯಲ್ಲಿ, ಕೋವಿಡ್-19 ಎರಡನೇ ಅಲೆಯು ನರೇಂದ್ರ ಮೋದಿ ಸರ್ಕಾರದ ನಿರ್ಲಕ್ಷ್ಯ, ಸಂವೇದನಾರಾಹಿತ್ಯತೆ ಮತ್ತು ಅಸಮರ್ಥತೆಯಿಂದಾಗಿ ಸಂಕಷ್ಟ ತಂದೊಡ್ಡಿದೆ ಎಂದು ಸೋನಿಯಾ ಗಾಂಧಿ ಸುಖಾ ಸುಮ್ಮನೆ ಆರೋಪಿಸಿದ್ದರು.
ಇದನ್ನೂ ಓದಿ: ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!
ನಾಲ್ಕು ಪುಟಗಳ ಪತ್ರದಲ್ಲಿ ನಡ್ಡಾ ಅವರು ಸೋನಿಯಾ ಗಾಂಧಿಗೆ ತಿರುಗೇಟು ನೀಡಿದ್ದು, ಲಸಿಕೆ ತೆಗೆದುಕೊಳ್ಳಲು ಜನರು ಭಯಗೊಳ್ಳುವಂತೆ ಮಾಡಿದ್ದೇ ಕಾಂಗ್ರೆಸ್ ಮುಖಂಡರು. ಮೇಡ್ ಇನ್ ಇಂಡಿಯಾ ಲಸಿಕೆಗಳು ಈ ದೇಶಕ್ಕೆ ದೇಶವೇ ಹೆಮ್ಮೆ ಪಡುವ ಸಂಗತಿಯಾಗಬೇಕಿತ್ತು. ಬದಲಾಗಿ ಕಾಂಗ್ರೆಸ್ ನಾಯಕರೆಲ್ಲರೂ ಅದನ್ನು ಹೀಗಳೆಯಲು ಯತ್ನಿಸಿದರು ಮತ್ತು ಜನರ ಮನಸ್ಸಿನಲ್ಲಿ ಶಂಕೆಯ ಬೀಜ ಬಿತ್ತಿದರು. ಅಷ್ಟೇ ಅಲ್ಲ, ನಿಮ್ಮ ಪಕ್ಷದ ಮುಖ್ಯಮಂತ್ರಿಯೇ ಈ ಕುತಂತ್ರದಲ್ಲಿ ಭಾಗಿಯಾದರು ಎಂದು ನಡ್ಡಾ ಹೇಳಿದ್ದಾರೆ.
ಇದುವರೆಗೆ ಲಸಿಕೆ ತೆಗೆದುಕೊಳ್ಳುವುದಕ್ಕೆ ಯಾವುದೇ ಹಿಂಜರಿಕೆಯ ಇತಿಹಾಸವಿಲ್ಲದ ಈ ದೇಶದಲ್ಲಿ, ಶತಮಾನಕ್ಕೊಂದು ಬಾರಿ ಬರುವಂತಹಾ ಇಂಥದ್ದೊಂದು ಜಾಗತಿಕ ಪಿಡುಗಿನ ಈ ಸಂಕಷ್ಟ ಪರಿಸ್ಥಿತಿಯಲ್ಲಿ, ಜನರು ಲಸಿಕೆ ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಸೃಷ್ಟಿಸುವಲ್ಲಿ ನಿಮ್ಮ ಪಕ್ಷವು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವಲ್ಲಿ ಕೆಟ್ಟ ದಾಖಲೆ ಸೃಷ್ಟಿಸಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೋದಿ ಸರ್ಕಾರವು ಲಸಿಕೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದೆಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾಂಗ್ರೆಸ್ ಪಕ್ಷ ಮತ್ತು ಅದು ಅಧಿಕಾರ ಹಂಚಿಕೊಂಡಿರುವ ರಾಜ್ಯಗಳ ಮಧ್ಯೆ ಇಷ್ಟೊಂದು ಸಂವಹನ ಕೊರತೆಯಿದೆಯೇ? ಏಪ್ರಿಲ್ ತಿಂಗಳಲ್ಲೇ ಲಸಿಕೆ ಕಾರ್ಯಕ್ರಮವನ್ನು ವಿಕೇಂದ್ರೀಕರಣ ಮಾಡಬೇಕೆಂದು ಕಾಂಗ್ರೆಸ್ನ ಮಹಾ ನಾಯಕರೆಲ್ಲಾ ಹೇಳುತ್ತಿದ್ದರಲ್ಲವೇ? ಎಂದು ನಡ್ಡಾ ಕೇಳಿದ್ದಾರೆ.
ಇದನ್ನೂ ಓದಿ: ಚೀನಾ ವೈರಸ್: ಈಗ ಇಂಡಿಯನ್ ವೈರಸ್ ಎನ್ನುತ್ತಾ, ಮೋದಿ, ಭಾರತದ ಹೆಸರಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚು
ಮೋದಿ ಸರ್ಕಾರದ ಲಸಿಕೆ ನೀತಿಯನ್ನು ಸಮರ್ಥಿಸಿಕೊಂಡಿರುವ ನಡ್ಡಾ, ಮೊದಲ ಎರಡು ಹಂತಗಳಲ್ಲಿ 16 ಕೋಟಿಗೂ ಅಧಿಕ ಲಸಿಕೆಗಳನ್ನು ಎಲ್ಲ ರಾಜ್ಯಗಳ ಆದ್ಯತಾ ಗುಂಪುಗಳಿಗೆ ನೀಡಲು ಕೇಂದ್ರ ಸರ್ಕಾರವು ಪೂರೈಸಿದೆ ಎಂಬುದನ್ನು ನಡ್ಡಾ ನೆನಪಿಸಿದ್ದಾರೆ.
ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬಡವರಿಗೆ, ಹಿಂದುಳಿದವರಿಗೆ ಬಿಜೆಪಿ ಆಡಳಿತದ ರಾಜ್ಯಗಳು ಭರ್ಜರಿ ಸಹಾಯ ಮಾಡಲು ಕೈಜೋಡಿಸಿವೆ. ಹೀಗಿರುವಾಗ, ಕಾಂಗ್ರೆಸ್ ಸರ್ಕಾರಗಳು ಕೂಡ ಬಡವರ ಬಗ್ಗೆ ಕಾಳಜಿ ತೋರಿಸಿ, ಆಯಾ ರಾಜ್ಯದ ಜನರಿಗೆ ಉಚಿತವಾಗಿ ಹಂಚುವ ಮನಸ್ಸು ಮಾಡುತ್ತದೆಯೇ ಎಂದು ಸೋನಿಯಾ ಗಾಂಧಿಗೆ ನೇರವಾಗಿ ಪ್ರಶ್ನಿಸಿದ್ದಾರೆ ನಡ್ಡಾ.
ಜಾಗತಿಕ ಪಿಡುಗನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿರುವ ಜೆ.ಪಿ.ನಡ್ಡಾ, ಪಿಡುಗಿನ ವಿರುದ್ಧದ ಹೋರಾಟದಲ್ಲಿ, ರಾಹುಲ್ ಗಾಂಧಿಯೂ ಸೇರಿದಂತೆ ಕಾಂಗ್ರೆಸ್ನ ಮಹಾ ನಾಯಕರ ನಡವಳಿಕೆಯನ್ನು ಜನತೆ ಯಾವತ್ತೂ ಮರೆಯಲಾರರು ಎಂದೂ ಎಚ್ಚರಿಸಿದರು.
ನಿಮ್ಮ ನಾಯಕತ್ವದಡಿ ಸರ್ಕಾರದ ಲಾಕ್ಡೌನ್ ನಡೆಯನ್ನು ವಿರೋಧಿಸುತ್ತಾ, ಮರಳಿ ಲಾಕ್ಡೌನ್ ಮಾಡಲೇಬೇಕೆಂದು ಆಗ್ರಹಿಸುತ್ತಿರುವುದು ಪಕ್ಷಕ್ಕೆ ಶೋಭೆಯಲ್ಲ. ಕೋವಿಡ್ ಎರಡನೇ ಅಲೆಯ ಬಗ್ಗೆ ಕೇಂದ್ರದ ಮಾರ್ಗಸೂಚಿಗಳನ್ನೆಲ್ಲಾ ಉಲ್ಲಂಘಿಸುತ್ತೀರಿ, ನಂತರ ನಮಗೆ ಯಾವುದೇ ಮಾರ್ಗಸೂಚಿಗಳು ದೊರೆತಿಲ್ಲ ಎಂದು ಹೇಳುತ್ತೀರಿ. ಕೇರಳದಲ್ಲಿ ಹಾಗೂ ವಿವಿಧೆಡೆ ಭರ್ಜರಿ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಾ ಕೋವಿಡ್ ಕೇಸುಗಳ ಹೆಚ್ಚಳಕ್ಕೆ ಕಾರಣರಾಗುತ್ತೀರಿ, ಕೇಂದ್ರದ ವಿರುದ್ಧದ ಎಲ್ಲ ಪ್ರತಿಭಟನೆಗಳನ್ನೂ ಬೆಂಬಲಿಸುತ್ತೀರಿ ಮತ್ತೀಗ ಕೋವಿಡ್ ಮಾರ್ಗಸೂಚಿಗಳ ಪಾಲನೆಯ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ನಡ್ಡಾ.
ಇದನ್ನೂ ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!
ಸೆಂಟ್ರಲ್ ವಿಸ್ಟಾ ಯೋಜನೆ ಬಗ್ಗೆ ಟೀಕೆಗೂ ಉತ್ತರ ನೀಡಿರುವ ನಡ್ಡಾ, ಕಾಂಗ್ರೆಸ್ ನೇತೃತ್ವದ ಯುಪಿಎ ಆಡಡಳಿತಾವಧಿಯಲ್ಲೇ ಹೊಸ ಸಂಸತ್ ಕಟ್ಟಡದ ಬಗ್ಗೆ ಆಗ್ರಹಿಸಲಾಗಿತ್ತು ಎಂಬುದನ್ನು ನೆನಪಿಸಿದರಲ್ಲದೆ, ಕಾಂಗ್ರೆಸ್ನ ಛತ್ತೀಸಗಢ ಸರ್ಕಾರವು ಹೊಸ ವಿಧಾನಸೌಧ ಕಟ್ಟಡದ ಯೋಜನೆಯನ್ನು ಮುಂದುವರಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

Average Rating