ನವದೆಹಲಿ: ಕೋವಿಡ್-19 ಹೆಮ್ಮಾರಿಯ ನಿಯಂತ್ರಣಕ್ಕಾಗಿ ಹಗಲಿರುಳೂ ಶ್ರಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಗಳು ಸರ್ವವ್ಯಾಪಿ ಜನಮೆಚ್ಚುಗೆಗೆ ಕಾರಣವಾಗಿದೆ. ಸಮೀಕ್ಷೆಯೊಂದರ ಪ್ರಕಾರ, ಶೇ.73ರಷ್ಟು ಮಂದಿ ನರೇಂದ್ರ ಮೋದಿ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ಇಂಡಿಯಾ ಟುಡೇ ಮೂಡ್ ಆಫ್ ದಿ ನೇಶನ್’ ಹೆಸರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಹೆಮ್ಮಾರಿ ಕೋವಿಡ್-19 ನಿಯಂತ್ರಣಕ್ಕೆ ಪ್ರಧಾನಿ ಮೋದಿ ಅವರು ಅದ್ಭುತ ಕ್ರಮ ಕೈಗೊಂಡಿದ್ದಾರೆ ಎಂದು ನಾಲ್ಕನೇ ಒಂದರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
130 ಕೋಟಿ ಜನರನ್ನು ಕೊರೊನಾ ವೈರಸ್ನಿಂದ ರಕ್ಷಿಸಲು, ಔಷಧಿ ಸಿಗುವವರೆಗೂ ವಿರಮಿಸುವುದಿಲ್ಲ ಅಂತಲೂ, ಔಷಧಿಯೂ ಎಚ್ಚರಿಕೆಯೂ ಇರಲಿ ಎಂಬ ಅವರ ಸ್ಲೋಗನ್ಗಳು ಈಗಲೂ ಜನರ ಮನಸ್ಸಿನಲ್ಲಿವೆ. ಅಭಿವೃದ್ಧಿ ಹೊಂದಿದ ದೇಶಗಳೆಲ್ಲವೂ ಇನ್ನೂ ಒದ್ದಾಡುತ್ತಿದ್ದರೆ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಕೋವಿಡ್ ನಿಯಂತ್ರಣದಲ್ಲಿ ದಾಪುಗಾಲಿಟ್ಟಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ಎಂಬ ಶಕ್ತಿ ಎಂದು ಶೇ.75ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಶೇ.23ರಷ್ಟು ಮಂದಿ ಮೋದಿ ಅವರ ಕಾರ್ಯನಿರ್ವಹಣೆಯನ್ನು ‘ಅದ್ಭುತ’ ಎಂದು ಬಣ್ಣಿಸಿದ್ದರೆ, ಶೇ.50ರಷ್ಟು ಮಂದಿ ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.18ರಷ್ಟು ಮಂದಿ ಸಾಮಾನ್ಯವಾಗಿ ನಿಭಾಯಿಸಿದ್ದಾರೆ ಎಂದಿದ್ದರೆ, ಶೇ.7ರಷ್ಟು ಮಂದಿ ಕಳಪೆ ಹಾಗೂ ಶೇ.2ರಷ್ಟು ಮಂದಿ ತೀರಾ ಕಳಪೆ ನಿಭಾವಣೆ ಎಂದು ಅಭಿಪ್ರಾಯಪಟ್ಟಿರುವುದು ಮೋದಿ ಜನಪ್ರಿಯತೆಗೆ ಸಾಕ್ಷಿ.
ಕಾರ್ವಿ ಇನ್ಸೈಟ್ಸ್ ಸಂಸ್ಥೆಯ ಸಹಯೋಗದಲ್ಲಿ ಸುಮಾರು 12,232 ಮಂದಿಯನ್ನು ದೇಶದಾದ್ಯಂತ ಜ.3ರಿಂದ 13ರವರೆಗಿನ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ: ವಿರೋಧ ಪಕ್ಷಗಳ ಅಸಹಕಾರ ಮಧ್ಯೆಯೇ ಮೋದಿ ಆಡಳಿತಕ್ಕೆ ಜಾಗತಿಕ ಶಹಭಾಸ್ಗಿರಿ: ಜಗತ್ತಿನ ಜನಪ್ರಿಯ ನೇತಾರರಲ್ಲಿ ನಂ.1 ಸ್ಥಾನ
ಕೋವಿಡ್-19 ನೆರಳಿನಲ್ಲಿಯೇ ಭಾರತೀಯರು ಬದುಕು ಸಾಗಿಸಿ ಬಹುತೇಕ ವರ್ಷವೇ ಕಳೆದಿದೆಯ 2020ರ ಮಾರ್ಚ್ 25ರಿಂದ ಭಾರತದಲ್ಲಿ ನಾಲ್ಕು ಹಂತಗಳಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿತ್ತು. ಸ್ವತಃ ಪ್ರಧಾನಿಯೇ ದೂರದರ್ಶನದ ಮೂಲಕ ದೇಶದ ಜನತೆಗೆ ಧೈರ್ಯ ತುಂಬುತ್ತಾ, ಲಾಕ್ಡೌನ್ ಅನಿವಾರ್ಯವೆಂದು ಮನವರಿಕೆ ಮಾಡಿ ಅದನ್ನು ಘೋಷಿಸಿದ್ದರು.
ಇದಲ್ಲದೆ, ಕೋವಿಡ್ನಿಂದಾದ ಆರ್ಥಿಕ ಪರಿಣಾಮಗಳನ್ನು ಮೋದಿ ಸರ್ಕಾರ ನಿಭಾಯಿಸಿದ ಬಗ್ಗೆಯೂ ಮೂರನೇ ಒಂದಂಶದಷ್ಟು ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ.
ಜನಾಭಿಪ್ರಾಯದ ಪ್ರಕಾರ, ಪ್ರಧಾನಿ ಮೋದಿ ಅವರ ಕೋವಿಡ್-ನಿಯಂತ್ರಣ ಪ್ರಯತ್ನಗಳನ್ನಷ್ಟೇ ಅಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಯ ಬಗ್ಗೆಯೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯಾ ಟುಡೇ ಬಳಗದ ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೇ ಮೋದಿ ವಿರುದ್ಧವೇ ಸಾಕಷ್ಟು ಸುದ್ದಿಗಳನ್ನು ಪ್ರಕಟಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು
ಮೋದಿ ಸರ್ಕಾರದ ಲಸಿಕೆ ಅಭಿಯಾನವು ಇಡೀ ಜಗತ್ತಿನಲ್ಲೇ ಅತಿದೊಡ್ಡದು. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಮತ್ತು ಆಕ್ಸ್ಫರ್ಡ್ ವಿವಿ, ಔಷಧಿ ಕಂಪನಿ ಆಸ್ಟ್ರಾಜೆನೆಕಾ ಜೊತೆ ಸೇರಿಕೊಂಡು ತಯಾರಿಸಿದ ಕೋವಿಶೀಲ್ಡ್ ಲಸಿಕೆಗಳನ್ನು ಭಾರತದಲ್ಲಿ ನೀಡಲಾಗುತ್ತಿದೆ. ಕೋವಿಶೀಲ್ಡ್ಗೆ ಪುಣೆ ಮೂಲದ ಸೀರಂ ಸಂಸ್ಥೆಯು ಪಾಲುದಾರ ಸಂಸ್ಥೆಯಾಗಿದೆ.
ವಿರೋಧ ಪಕ್ಷಗಳು ಟೀಕಿಸಬೇಕೆಂಬ ಏಕೈಕ ಕಾರಣಕ್ಕೆ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿದ್ದರೂ, ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಹಲವು ಜನಾಭಿಪ್ರಾಯ ಸಮೀಕ್ಷೆಗಳಲ್ಲಿ ಪ್ರಧಾನಿ ಮೋದಿಗೆ ಹಾಗೂ ಅವರ ಸರ್ಕಾರದ ನೀತಿಗಳಿಗೆ ಹೆಚ್ಚಿನ ಬೆಂಬಲ ದೊರೆತಿರುವುದು ಉಲ್ಲೇಖಾರ್ಹ.
2020 ಆಗಸ್ಟ್ನಲ್ಲಿ ನಡೆಸಿದ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಕೂಡ ಮೋದಿ ಕಾರ್ಯವೈಖರಿಗೆ ಶೇ.77ರಷ್ಟು ಮೆಚ್ಚುಗೆ ದೊರೆತಿತ್ತು. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬೇರೆ ದೇಶಗಳಲ್ಲಿ ಅಲ್ಲಿನ ನಾಯಕತ್ವದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿತ್ತಾದರೂ, ಭಾರತದಲ್ಲಿ ಮೋದಿ ಕೆಲಸಕ್ಕೆ ಮೆಚ್ಚುಗೆ ದೊರೆತಿರುವುದು ಉಲ್ಲೇಖಾರ್ಹ.
ಅದೇ ರೀತಿ, ಅಮೆರಿಕದ ಮೂಲದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಇತರ ಜಾಗತಿಕ ನಾಯಕರಿಗಿಂತಲೂ ನರೇಂದ್ರ ಮೋದಿ ಅವರ ಜನಪ್ರಿಯತೆಯು ಭರ್ಜರಿಯಾಗಿ ಏರಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಕೋವಿಡ್-19 ಲಸಿಕೆಗೆ ಭಾರತ ಅಸ್ತು | ಹೆಮ್ಮೆಯ ಸಾಧನೆಗೆ ಎಲ್ಲೆಡೆ ಶ್ಲಾಘನೆ; ಅಪಪ್ರಚಾರದ ಬಗ್ಗೆ ಇರಬೇಕಿದೆ ಎಚ್ಚರ!

Average Rating