ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ ಅದರ ಸಂಸದ ಗೌರವ್ ಗೊಗೊಯಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಲೋಕಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೇನೋ ನಿರೀಕ್ಷಿತ ಸೋಲಾಗಿದೆ. ಆದರೆ, ಇದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಕೋಲು ಕೊಟ್ಟು ಹೊಡೆಸಿಕೊಂಡ ಅನುಭವಕ್ಕೆ ಸಾಕ್ಷಿಯಾಯಿತು.
ಇಂಡಿಯಾ ಹೆಸರಿಟ್ಟುಕೊಂಡ ಪ್ರತಿಪಕ್ಷಗಳ ಒಕ್ಕೂಟವು ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ ಹಾಗೂ ಎನ್ಡಿಎ ಸರಕಾರದ ನಡೆಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳುಗಳನ್ನು ಹೆಣೆಯುತ್ತಾ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂಚಿಂಚಾಗಿ ಬಯಲುಗೊಳಿಸಿದ್ದರು. ಇಲ್ಲಿ ಓದಿ.
ಈಗ ಅವರ ಮಾತಿನೇಟು ಎಷ್ಟು ಖಾರವಾಗಿತ್ತೆಂದರೆ, ಮೋದಿ ಸರಕಾರದ ವಿರುದ್ಧ ಕಿಡಿಕಾರುತ್ತಿದ್ದ ಮಹಾನ್ ಪತ್ರಿಕೆಯೊಂದು ಇಡೀ ಮುಖಪುಟದಲ್ಲಿ, ಮೋದಿ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ, ಬ್ಲಾ ಬ್ಲಾ ಬ್ಲಾ ಎಂಬ ವ್ಯಂಗ್ಯಭರಿತ ಪೋಸ್ಟ್ ಪ್ರಕಟಿಸಿರುವುದನ್ನು ಗಮನಿಸಿರಬಹುದು.
ಗೊತ್ತುವಳಿಗೆ ಉತ್ತರ ನೀಡುತ್ತಿದ್ದಾಗ ಇಡೀ ಭಾಷಣದ ಅವಧಿಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಲೇ ಇದ್ದವು. ಅವರು ಸಭಾತ್ಯಾಗ ಮಾಡಿದಾಗಲಂತೂ ಮೋದಿ ಇನ್ನು ಬಿಡಬಾರದು ಎಂದುಕೊಂಡು ಚಾಟಿಯೇಟು ಬೀಸತೊಡಗಿದರು. ಪರೀಕ್ಷೆ ಬರೆದು ಫಲಿತಾಂಶ ತಿಳಿಯುವ ಕುತೂಹಲವಿಲ್ಲದ ಪರಿಸ್ಥಿತಿ ಇಂಡಿಯಾ ಹೆಸರಿನಲ್ಲಿ ಒಟ್ಟು ಸೇರಿದ ಒಕ್ಕೂಟದ ಸದಸ್ಯರದು.
ಹಾಗಿದ್ದರೆ, ಇಂಡಿಯಾ ಒಕ್ಕೂಟವು ತಾವೇ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸೋಲುವ ಮುನ್ನವೇ ಸಭಾತ್ಯಾಗವನ್ನೇ ಮಾಡುವಂತೆ ಮಾಡಿದ ಮೋದಿಯ ಮಾತಿನೇಟು ಹೇಗಿತ್ತು? ನರೇಂದ್ರ ಮೋದಿ ಅವರ ಕೆಲವು ಮಾತುಗಳು ಹೀಗಿದ್ದವು ನೋಡಿ:
- ಪ್ರಜಾಪ್ರಭುತ್ವದ ಮೇಲೆಯೇ ಅವಿಶ್ವಾಸ ಇರುವವರು ಯಾವತ್ತೂ ಆರೋಪ ಮಾಡುತ್ತಾರೆ, ಆದರೆ ಅದಕ್ಕೆ ನೀಡಿದ ಎದಿರೇಟು ತಡೆದುಕೊಳ್ಳುವ ತಾಳ್ಮೆ ಅವರಿಗಿಲ್ಲ.
- ಅವರು ಕೆಟ್ಟದ್ದು ಮಾತನಾಡುತ್ತಾರೆ, ಓಡಿ ಹೋಗುತ್ತಾರೆ, ತ್ಯಾಜ್ಯವನ್ನು ಎಸೆಯುತ್ತಾರೆ, ಓಡಿ ಹೋಗುತ್ತಾರೆ. ಸುಳ್ಳು ಹರಡುತ್ತಾರೆ, ಓಡಿ ಹೋಗುತ್ತಾರೆ.
- ಭಾರತ ಮಾತೆಯ ಹತ್ಯೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಗಿತ್ತು. ಅದಕ್ಕೆ ಮೋದಿ ಹೇಳಿಕೆ “ಭಾರತಾಂಬೆಯ ಸಾವನ್ನು ಬಯಸುವವರೂ ಇದ್ದಾರೆ. ಇದೇ ಜನರೇ ಭಾರತ ಮಾತೆಯನ್ನು ಮೂರು ಭಾಗ ಮಾಡಿದ್ದು ಎಂಬುದನ್ನು ಮರೆತಿದ್ದಾರೆ.”
- ಉತ್ತಮವಾಗಿ ಕೆಲಸ ಮಾಡುತ್ತಿದ್ದ ತಮ್ಮ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದು ತಮ್ಮ ಸರಕಾರಕ್ಕೆ ಅದೃಷ್ಟ ತರುವ ವಿಚಾರ. 2018ರಲ್ಲಿ ಟಿಡಿಪಿ ತಂದ ಅವಿಶ್ವಾಸ ನಿರ್ಣಯದ ವೇಳೆಯೂ ನಾನು ಹೇಳಿದ್ದು, ಇದು ನಮ್ಮ ಬಲಾಬಲ ಪರೀಕ್ಷೆ ಅಲ್ಲ, ವಿರೋಧಿಗಳ ಒಕ್ಕೂಟದ ಪರೀಕ್ಷೆ ಎಂಬುದಾಗಿ. ಹಾಗೆಯೇ ಆಯಿತು. ಅವರಿಗೆ ಸೋಲಾಯಿತು.
- ನಾವು ಜನರ ಬಳಿಗೆ ಮತ್ತೆ ಹೋದಾಗ, ಜನರು ಅವರ ಮೇಲೆ ಅವಿಶ್ವಾಸ ಪ್ರಕಟಿಸಿಬಿಟ್ಟರು. ಎನ್ಡಿಎ ಹಾಗೂ ಬಿಜೆಪಿಗೆ ಹೆಚ್ಚು ಸ್ಥಾನಗಳು ದೊರೆತವು. ಹೀಗಾಗಿ ಅವರ ಅವಿಶ್ವಾಸ ನಿರ್ಣಯವೇ ನಮಗೆ ಅದೃಷ್ಟ ತಂದಿದೆ.
- 2014ರ ಚುನಾವಣೆಯ ಬಳಿಕ, ಭಾರತವು ಜಗತ್ತಿನ ಪ್ರಮುಖ ಐದು ಆರ್ಥಿಕ ಶಕ್ತಿಗಳಲ್ಲಿ ಒಂದು ಎಂಬ ಸ್ಥಾನ ಪಡೆಯಿತು. ಈ ಬಾರಿಯೂ ಅವಿಶ್ವಾಸ ನಿರ್ಣಯ ತಂದಿದ್ದಾರೆ. ಮುಂದೆ 2018ರಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಭಾರತವು ಜಗತ್ತಿನ ಟಾಪ್ 3 ಆರ್ಥಿಕ ಶಕ್ತಿಗಳಲ್ಲಿ ಭಾರತವು ಸ್ಥಾನ ಪಡೆದಿರುತ್ತದೆ.

Average Rating