ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭರವಸೆಗಷ್ಟೇ ಸೀಮಿತವಾಗಿದ್ದ, ಎನ್ಡಿಎ ಕಾಲದಲ್ಲಿ ಜಾರಿಗೆ ಬಂದು ರೈತರಿಗೆ ಅನುಕೂಲ ಮಾಡಿರುವ ಶಾಸನದ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸುಳ್ಳು ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ ಕೆದಕಿದ್ದಾರೆ.
ಈ ಕಾಯ್ದೆ ಜಾರಿಗೆ ಬಂದು ಆರು ತಿಂಗಳೇ ಕಳೆದಿದೆ. ಎಲ್ಲೂ ಕೂಡ ಕನಿಷ್ಠ ಬೆಂಬಲ ಬೆಲೆ ರದ್ದಾಗಿರುವ ಅಥವಾ ಎಪಿಎಂಸಿ ಮಂಡಿಗಳನ್ನು ಮುಚ್ಚಿರುವ ಒಂದೇ ಒಂದು ಪ್ರಕರಣವಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವ ಮೂಲಕ, ರೈತರ ಹಿತಕ್ಕಾಗಿರುವ ಕಾಯ್ದೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು “ದಾರಿತಪ್ಪಿರುವ” ರೈತರಿಗೆ ಮತ್ತೆ ಭರವಸೆ ನೀಡಿದ್ದಾರೆ.
ಕಾಯ್ದೆ ಜಾರಿಗೆ ಬಂದು ಆರು ತಿಂಗಳಾಗಿದೆ. ಈಗ ದಿಢೀರ್ ಆಗಿ ಎಲ್ಲ ರೀತಿಯ ಸಂದೇಹಗಳನ್ನು ಬಿತ್ತಲಾಗುತ್ತಿದೆ ಮತ್ತು ರಾಜಕೀಯ ಹಿತಾಸಕ್ತಿಗಾಗಿ, ರೈತರ ಭುಜಗಳ ಮೇಲೆ ಬಂದೂಕು ಇರಿಸಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಯ್ದೆಯ ಯಾವ ವಿಧಿಯಲ್ಲಿ ಸಮಸ್ಯೆಯಿದೆ ಎಂಬ ನಮ್ಮ ಒಂದೇ ಒಂದು ಪ್ರಶ್ನೆಗೆ ಅವರಿಂದ ಉತ್ತರ ಇಲ್ಲ’ ಎಂದು ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಶುಕ್ರವಾರ ಮಧ್ಯಪ್ರದೇಶದ ರೈತರ ಸಮಾವೇಶದಲ್ಲಿ ವೆಬಿನಾರ್ ಮೂಲಕ ಮಾತನಾಡಿದ ಮೋದಿ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸುಳ್ಳನ್ನು ಒಂದೊಂದೇ ಬಿಚ್ಚಿಡುತ್ತಾ ಹೋದರು.
ಹೆಚ್ಚು ಹಣ ನೀಡುವ ಖರೀದಿದಾರರಿಗೆ ಫಸಲು ಮಾರುವ ಹಕ್ಕನ್ನು ರೈತರಿಗೆ ನೀಡಲಾಗುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಮೋದಿ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಅವಕಾಶಗಳಿದ್ದರೂ ಅಂದಿನ (ಯುಪಿಎ) ಸರ್ಕಾರ, 8 ವರ್ಷ ಅದರ ಮೇಲೆ ತಣ್ಣಗೆ ಕುಳಿತುಬಿಟ್ಟಿತು. ಈಗ ಎನ್ಡಿಎ ಸರ್ಕಾರ ಈ ವರದಿಯ ಧೂಳು ಕೊಡವಿ, ಅದರ ಶಿಫಾರಸಿನನ್ವಯ ರೈತರ ಬಲ ಹೆಚ್ಚಿಸಲು ಮುಂದಾಗಿದೆ ಎಂದರು.
ಇದನ್ನೂ ಓದಿ: ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ
ಕನಿಷ್ಠ ಬೆಂಬಲ ಬೆಲೆ ಮುಂದುವರಿಯುವುದಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದು ಅತಿದೊಡ್ಡ ಸುಳ್ಳು. ಇದೇ ವಿಷಯದ ಬಗ್ಗೆ ಸಾಕಷ್ಟು ಬಾರಿ ಸ್ಪಷ್ಟನೆ ಕೊಟ್ಟರೂ ಪದೇ ಪದೇ ಅದನ್ನೇ ಹೇಳುತ್ತಾ, ರೈತರ ಮನಸ್ಸಿನಲ್ಲಿ ಶಂಕೆಯ ಬೀಜ ಬಿತ್ತಲಾಗುತ್ತಿದೆ ಎಂದರು ಮೋದಿ.
ಕೃಷಿ ಕ್ಷೇತ್ರದ ಸುಧಾರಣೆಗಳಿಗಾಗಿರುವ ಈ ಕಾಯ್ದೆಯ ಕುರಿತು ಯಾವುದೇ ಸಂದೇಹಗಳಿದ್ದರೂ ಕೈಮುಗಿದು, ಶಿರಬಾಗಿ ಉತ್ತರಿಸಲು ಸಿದ್ಧ ಎಂದು ರೈತರಿಗೆ ಭರವಸೆ ನೀಡಿದ ಅವರು, ಇದೇನೂ ರಾತೋರಾತ್ರಿ ಜಾರಿಗೆ ತಂದ ಕಾಯ್ದೆಯಲ್ಲ. ರೈತರ ಕಲ್ಯಾಣಕ್ಕಾಗಿ ದಶಕಗಳ ಕಾಲದಿಂದ ಚರ್ಚೆಯಾಗುತ್ತಿದ್ದ ವಿಷಯವನ್ನು ನಾವು ಜಾರಿಗೆ ತಂದಿದ್ದೇವಷ್ಟೆ. ಪ್ರತಿಯೊಂದು ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಇದರ ಬಗ್ಗೆ ಚರ್ಚೆ ಮಾಡುತ್ತಲೇ ಇತ್ತು. ಆದರೆ, ದೊಡ್ಡ ಪ್ರಶ್ನೆಯೆಂದರೆ, ಇದಕ್ಕೆ ಮೋದಿ ಯಾಕೆ ಕ್ರೆಡಿಟ್ ತೆಗೆದುಕೊಳ್ಳಬೇಕೆಂಬುದಷ್ಟೇ. ಹೋಗಲಿ, ನನಗೆ ಕ್ರೆಡಿಟ್ ಬೇಡ, ನೀವೇ ಈ ಕಾಯ್ದೆಯ ಕ್ರೆಡಿಟ್ ತೆಗೆದುಕೊಳ್ಳಿ ಎಂದರು.
ಹಿಂದಿನ ಸರ್ಕಾರಗಳು ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆಯಾಗಿ ಇದನ್ನೇ ಹೇಳಿದ್ದವು. ಆದರೆ, ನಮ್ಮ ಉದ್ದೇಶವು ಗಂಗೆ, ನರ್ಮದೆಯಷ್ಟೇ ಪವಿತ್ರ. ನಾವಿದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಾವಿಟ್ಟ ಪ್ರತಿ ಹೆಜ್ಜೆಯೂ ರೈತರ ಹಿತಕ್ಕೆ ಪೂರಕ ಎಂದು ಮತ್ತೆ ಸ್ಪಷ್ಟಪಡಿಸಿದರು ಮೋದಿ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ರದ್ದು ಮಾಡುತ್ತೇವೆ ಎಂಬಷ್ಟು ದೊಡ್ಡ ಸುಳ್ಳು ಬೇರೊಂದಿಲ್ಲ. ಹಿಂದಿನ ಸರ್ಕಾರದಲ್ಲಿ ಗೋಧಿಗೆ ಕ್ವಿಂಟಾಲ್ಗೆ ಬೆಂಬಲ ಬೆಲೆ 1400 ಮಾತ್ರ ಇತ್ತು. ನಮ್ಮ ಅವಧಿಯಲ್ಲಿ ಅದನ್ನು 1975ಕ್ಕೆ ಏರಿಸಲಾಗಿದೆ. ಭತ್ತದ ಬೆಂಬಲ ಬೆಲೆಯೂ 1310 ರೂ. ಇದ್ದುದನ್ನು 1870 ರೂ. ಮಾಡಿದ್ದೇವೆ ಎಂದು ನಿದರ್ಶನ ಸಹಿತ ಹೇಳಿದರು ಮೋದಿ.
(ಕಾಂಗ್ರೆಸಿಗರು ಬಿತ್ತುತ್ತಿರುವ) ಎರಡನೇ ಅತಿದೊಡ್ಡ ಸುಳ್ಳು ಎಂದರೆ, ಮಂಡಿಗಳನ್ನು ಮುಚ್ಚಲಾಗುತ್ತದೆ ಎಂಬುದು. ಆರು ತಿಂಗಳಾಗಿದೆ, ಒಂದಾದರೂ ಮಂಡಿ ಮುಚ್ಚಿದ್ದೇವೆಯೇ? ಎಪಿಎಂಸಿ ಪುನರುತ್ಥಾನಕ್ಕೆ ನಾವು 5000 ಕೋಟಿ ವೆಚ್ಚ ಮಾಡುತ್ತಿರುವುದು ಮುಚ್ಚುವುದಕ್ಕಾಗಿಯೇ? ಸುಳ್ಳು ನಂಬಬೇಡಿ ಎಂದರು ಮೋದಿ.
ಗುತ್ತಿಗೆ ಕೃಷಿ ಪದ್ಧತಿಯಲ್ಲೂ, ಅಗ್ರಿಮೆಂಟ್ ಮಾಡಿಕೊಳ್ಳುವವರು ಒಪ್ಪಂದ ಮುರಿದರೆ ರೈತರಿಗೆ ಭಾರಿ ಪೆನಾಲ್ಟಿ ನೀಡಬೇಕಾಗುತ್ತದೆ. ಆದರೆ, ರೈತರು ಮಧ್ಯದಲ್ಲೇ ಒಪ್ಪಂದ ಮುರಿದರೆ ದಂಡ ಕಟ್ಟಬೇಕಾಗಿರುವುದಿಲ್ಲ. ಕಠಿಣ ಕಾಯ್ದೆಗಳು ಗುತ್ತಿಗೆದಾರರು, ಮಧ್ಯವರ್ತಿಗಳಿಗಾಗಿಯೇ ಹೊರತು, ರೈತರಿಗೆ ಇದರಿಂದ ಭದ್ರತೆಯೇ ಹೆಚ್ಚು ಎಂದರು ಮೋದಿ.
ಇಂದು 35 ಲಕ್ಷಕ್ಕೂ ಹೆಚ್ಚು ಮಂದಿ ರೈತರ ಖಾತೆಗೆ ಒಟ್ಟು 1600 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಹೇಗೆ? ಹಿಂದಿನಂತೆ, ಮಧ್ಯವರ್ತಿಗಳ ಕಮಿಷನ್ ಅಂತ ಕಟ್ ಆಗಿಯಲ್ಲ, ಕಳೆದ ಐದಾರು ವರ್ಷಗಳಿಂದ ಪೂರ್ತಿ ಹಣ ರೈತರಿಗೆ ದೊರಕುತ್ತಿದೆ. ಈ ವ್ಯವಸ್ಥೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದ್ದರೆ, ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡಿ ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮೋದಿ ವಿಷಾದಿಸಿದರು.

Average Rating