ನವದೆಹಲಿ: ಸುಳ್ಳು ಹೇಳಿಯೇ ರೈತರ ದಾರಿ ತಪ್ಪಿಸಿದ ಕಾಂಗ್ರೆಸ್ ಹಾಗೂ ಆಮ್ ಆದ್ಮೀ ಪಕ್ಷಗಳು, ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸುತ್ತಿರುವುದು ಮತ್ತೊಮ್ಮೆ ಬಯಲಾಗಿದೆ.
ಈ ಕಾಯ್ದೆಗಳು ಕೃಷಿಕರ ಅನುಕೂಲಕ್ಕಾಗಿಯೇ ಇದೆ, ಸುಖಾ ಸುಮ್ಮನೆ ಪ್ರತಿಭಟಿಸಬೇಡಿ, ಸಮಸ್ಯೆ ಯಾವುದೆಂದು ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರೈತರಿಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಕೆಲವು ಪ್ರಚೋದಿತ ರೈತರು ಕಾಯ್ದೆ ಹಿಂತೆಗೆತಕ್ಕೆ ಮಾತ್ರ ಜಗ್ಗುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಹಾಗೂ ಆಮ್ ಆದ್ಮೀ ಪಾರ್ಟಿಯ ಸುಳ್ಳುಗಳು ಬಟಾ ಬಯಲಾಗುತ್ತಿವೆ.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಮತ್ತೆ ಸುಳ್ಳು ಪ್ರಚಾರ: ವಿದೇಶಾಂಗ ಇಲಾಖೆ, ರಷ್ಯಾದಿಂದಲೇ ಸ್ಪಷ್ಟನೆ
ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರು 2015ರಲ್ಲಿ ಲೋಕಸಭೆಯಲ್ಲಿ ಖಡಾಖಂಡಿತವಾಗಿ ಮಾತನಾಡಿದ ‘ರೈತರ ಪರ’ ಹೇಳಿಕೆಯೀಗ ವೈರಲ್ ಆಗಿದೆ. ನರೇಂದ್ರ ಮೋದಿ ಸರ್ಕಾರವು ಇದನ್ನೇ ಜಾರಿಗೊಳಿಸಿದೆಯಷ್ಟೇ.
2015ರ ಲೋಕಸಭೆಯ ಭಾಷಣದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಹೀಗೆ: “ರೈತರು ಸಂಕಷ್ಟದಲ್ಲಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ನೇರವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಅನುಮತಿ ನೀಡಬೇಕು. ಮಧ್ಯವರ್ತಿಗಳಿಂದಾಗಿ ಅವರ ಕೈಗೆ ಪೂರ್ತಿ ಹಣ ಬರುತ್ತಿಲ್ಲ”.
ಆದರೆ, ನರೇಂದ್ರ ಮೋದಿ ಸರ್ಕಾರ ಇದನ್ನೇ ಮಾಡಿದ್ದು, ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಾಯ್ದೆ ತಿದ್ದುಪಡಿ ಮಾಡಿದೆ. ಈಗ ಇದೇ ಕಾಂಗ್ರೆಸ್ ಪಕ್ಷವು ತನ್ನದೇ ಹೇಳಿಕೆಯ ವಿರುದ್ಧ ರೈತರು ಪ್ರತಿಭಟಿಸುವಂತೆ ಮಾಡಿರುವುದು ಹಾಸ್ಯಾಸ್ಪದ ಎಂದು ನೆಟ್ಟಿಗರು ಕಾಂಗ್ರೆಸ್ಸನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಮಾಡಿದ ಭಾಷಣದ ವಿಡಿಯೊ ಕ್ಲಿಪ್ ಇಲ್ಲಿದೆ.
ಇದನ್ನೂ ಓದಿ: ಹಾಸ್ಯಾಸ್ಪದ: APMC ಯೇ ಇಲ್ಲದ ಕೇರಳದ ಎಡ ಸರ್ಕಾರದಿಂದ ರೈತರ ಹೋರಾಟಕ್ಕೆ ಬೆಂಬಲ!
ಇದನ್ನು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಕಟುವಾಗಿ ಟೀಕಿಸಿದ್ದಾರೆ. ‘ಹಿಂದೆ ಏನು ಬೇಕು ಅಂತ ಆಗ್ರಹಿಸುತ್ತಿದ್ದೀರೋ, ಈಗ ಅದನ್ನೇ ವಿರೋಧಿಸುತ್ತಾ ಇದ್ದೀರಿ. ದೇಶದ ಹಿತ, ರೈತರ ಹಿತದ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ. ನಿಮಗಂತೂ ಕೇವಲ ರಾಜಕಾರಣವಷ್ಟೇ ಬೇಕಿದೆ. ಆದರೆ, ನಿಮ್ಮ ಈ ಪಾಖಂಡೀ ಪ್ರವೃತ್ತಿ ನಡೆಯುವುದಿಲ್ಲ ಎಂಬುದು ನಿಮ್ಮ ದೌರ್ಭಾಗ್ಯ. ರೈತರು, ದೇಶದ ಜನತೆ, ನಿಮ್ಮ ಮತ್ತೊಂದು ಮುಖವನ್ನು ತಿಳಿದುಕೊಂಡಾಗಿದೆ’ ಎಂದಿದ್ದಾರೆ.
ಲೋಕಸಭೆಯಲ್ಲಿ ರಾಹುಲ್ ಗಾಂಧಿ 2015ರಲ್ಲಿ ಹೇಳಿದ್ದು:
“ಕೆಲವು ವರ್ಷಗಳ ಹಿಂದೆ ನಾನು ಉತ್ತರ ಪ್ರದೇಶದಲ್ಲಿದ್ದಾಗ, ರೈತನೊಬ್ಬ ನನ್ನ ಬಳಿ ಬಂದು, ವಿವರಣೆ ಕೇಳಿದ. ರೈತರು ಕಿಲೋಗೆ 2 ರೂಪಾಯಿಯಂತೆ ಆಲೂಗಡ್ಡೆ ಮಾರುತ್ತಾರೆ. ಆದರೆ ಅವರ ಮಕ್ಕಳು ಒಂದು ಪ್ಯಾಕೆಟ್ ಆಲೂ ಚಿಪ್ಸ್ ಖರೀದಿಸಬೇಕಿದ್ದರೆ, ಕೇವಲ ಒಂದು ಆಲೂಗಡ್ಡೆಯಿಂದ ಮಾಡಿದಂತಿರುವ ಆ ಪೊಟ್ಟಣಕ್ಕೆ 10 ರೂಪಾಯಿ ಕೊಡುತ್ತಾರೆ. ಇದೆಂತಾ ಮ್ಯಾಜಿಕ್ ಸರ್ ಅಂತ ರೈತ ನನ್ನ ಬಳಿ ಕೇಳಿದ.”
“ರೈತನಿಗೇ ಕೇಳಿದೆ, ಇದಕ್ಕೇನು ಕಾರಣವಿರಬಹುದು ಅಂತ. ಆಗವನು ಹೇಳಿದ – ರೈತರು ನೇರವಾಗಿ ಫ್ಯಾಕ್ಟರಿಗಳಿಗೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತಾದರೆ, ಆಗ ಮಧ್ಯವರ್ತಿಗಳಿಗೆ ಲಾಭವಾಗುವುದಿಲ್ಲ, ಮತ್ತು ರೈತರಿಗೇ ಪೂರ್ತಿ ಹಣ ಸಿಗುವಂತಾಗುತ್ತದೆ.” ಅಂತ ಸ್ವತಃ ಇದೇ ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!
ಅಲ್ಲದೆ, ಫುಡ್ ಪಾರ್ಕ್ ಸ್ಥಾಪನೆಯ ಹಿಂದಿನ ಆಲೋಚನೆಯೇ ಇದು. ಅಮೇಠಿ ಮತ್ತು ಉತ್ತರ ಪ್ರದೇಶದ ಇತರ ಜಿಲ್ಲೆಗಳ ರೈತರು, ಕಾರ್ಮಿಕರ ಹೋರಾಟವೂ ಇದೇ ಆಗಿರುತ್ತದೆ ಎಂದು ಇದೇ ರಾಹುಲ್ ಗಾಂಧಿ ಅಂದು ಹೇಳಿದ್ದರು.
ಈಗ ಇದೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸಿಗರು ಸ್ವತಃ ರಾಷ್ಟ್ರಪತಿಯನ್ನೇ ಭೇಟಿ ಮಾಡಿ, ಇದೇ ಆಗ್ರಹವಿರುವ ರೈತರ ಕಾಯ್ದೆಯು ‘ರೈತ ವಿರೋಧಿಯಾಗಿದೆ’ ಎಂದು ದೂರು ನೀಡಿ, ಕಾಯ್ದೆ ವಾಪಸ್ ತೆಗೆಯಬೇಕೆಂದು ಆಗ್ರಹಿಸಿದ್ದಾರೆ. ಮತ್ತು ಒಂದು ತಿಂಗಳಿಂದ ದೆಹಲಿಯ ಸಿಂಘು ಗಡಿಯಲ್ಲಿ, ತಮ್ಮದೇ ಅನುಕೂಲಕ್ಕಾಗಿರುವ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.
ಇಷ್ಟೇ ಅಲ್ಲ, ಸ್ವತಃ ರೈತರು ಪ್ರತಿಭಟನೆ ನಡೆಸುತ್ತಿರುವ ರಾಜ್ಯವಾದ ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ, 2017ರಲ್ಲಿ ಇಂತಹಾ ಪ್ರಸ್ತಾಪವನ್ನು ಬೆಂಬಲಿಸಿದ ವಿಡಿಯೊ ಕೂಡ ಈಗ ಮರಳಿ ಕಾಣಿಸಿಕೊಳ್ಳತೊಡಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಇದನ್ನು ಇಂಟರ್ನೆಟ್ನಲ್ಲಿ ಜನರೆದುರು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ಬೆಂಬಲಿಸಿದ ರೈತರು | 20 ಸಾವಿರಕ್ಕೂ ಹೆಚ್ಚು ಮಂದಿಯ ಟ್ರ್ಯಾಕ್ಟರ್ ರ್ಯಾಲಿ
2020ರ ಸೆಪ್ಟೆಂಬರ್ ತಿಂಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಸಿಂಗ್ ಅವರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ ಕುರಿತಾದ ದಾಖಲೆ ಇಲ್ಲಿದೆ. ಅದು ಸ್ವತಃ ಇದೇ ಕಾಂಗ್ರೆಸ್ ಮುಖ್ಯಮಂತ್ರಿಯು ಕೃಷಿ ಕಾನೂನಿನ ಪರವಾಗಿ ರಚಿಸಿದ ಟಾಸ್ಕ್ ಫೋರ್ಸ್ ಕುರಿತಾದದ್ದು.
ಮಾರುಕಟ್ಟೆ ಸುಧಾರಣೆಗಳ ಕುರಿತಾದ ದಾಖಲೆ ಇದಾಗಿದ್ದು, ಅದರಲ್ಲಿ ‘ಎಪಿಎಂಸಿಗಳ ಹೊರತಾಗಿ ಕೃಷಿ ಮಾರುಕಟ್ಟೆ ವಿಸ್ತರಿಸಿದರೆ ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಿ, ಹೆಚ್ಚು ಲಾಭ ಪಡೆಯಲು ಕಾರಣವಾಗುತ್ತದೆ’ ಎಂದಿದ್ದರು ಅವರು. ಅಷ್ಟೇ ಅಲ್ಲ, ಇದೇ ದಾಖಲೆಯಲ್ಲಿ ಇದೇ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ಇವೇ ಅಂಶಗಳೂ ಇದ್ದವು.
ಇದು ರಾಜಕೀಯಕ್ಕಾಗಿ ಕಾಂಗ್ರೆಸ್ನ ಯು-ಟರ್ನ್ ಎಂಬುದು ಇದರಿಂದ ಬಯಲಾದಂತಾಗಿದೆ.
ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ತಮ್ಮದೇ ವಿಧಾನಸಭೆಯಲ್ಲಿ ಇದೇ ರೈತರ ಪರ ಕಾಯ್ದೆಗೆ ಅಂಗೀಕಾರ ನೀಡಿ, ನಂತರ ರಾಜಕೀಯಕ್ಕಾಗಿ ಇದೇ ಕಾಯ್ದೆಯ ಪ್ರತಿಯನ್ನು ತಮ್ಮದೇ ವಿಧಾನಸಭೆಯಲ್ಲಿ ಹರಿದು ನಾಟಕ ಮಾಡಿದ ಪ್ರಕರಣ ಎಲ್ಲರಿಗೂ ಗೊತ್ತಿದೆ.
ಅದರ ಮುಂದುವರಿದ ಭಾಗವಿದು. ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಎರಡನೇ ಬಾರಿ ಸಿಂಘು ಗಡಿಗೆ ಹೋಗಿದ್ದಾರೆ. ಭಾನುವಾರ ಅವರು ಅಲ್ಲಿಗೆ ಭೇಟಿ ನೀಡಿ, ಸರ್ಕಾರವು ರೈತರ ಜಮೀನನ್ನು ವಶಪಡಿಸಿಕೊಳ್ಳುತ್ತದೆ, ಎಪಿಎಂಸಿ ಮಂಡಿಗಳನ್ನು ಅವರು ಮುಚ್ಚುತ್ತಾರೆ, ಕನಿಷ್ಠ ಬೆಂಬಲ ಬೆಲೆ ನೀಡುವುದಿಲ್ಲ, ಕಾರ್ಪೊರೇಟ್ ಕಂಪನಿಗಳು ಕೃಷಿ ವಲಯದ ಮೇಲೆ ಹಿಡಿತ ಸಾಧಿಸುತ್ತವೆ ಎಂದೆಲ್ಲಾ ಸುಳ್ಳು ಹೇಳಿ ಬಂದಿದ್ದಾರೆ.
ಅವರು ರೈತರನ್ನು ಪ್ರಚೋದಿಸಿದ್ದು ಹೀಗೆ: “ಕೃಷಿಯನ್ನು ರೈತರಿಂದ ಕಸಿದುಕೊಂಡರೆ ರೈತರೇನು ಮಾಡಬೇಕು? ಹಿರಿಯರು, ಮಕ್ಕಳೊಂದಿಗೆ ಕೃಷಿಕರು ಈ ಗಡಿಯಲ್ಲಿ ಕೂತು ಪ್ರತಿಭಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ಕೃಷಿ ವಲಯದ ಮೇಲೆ ಹಿಡಿತ ಸಾಧಿಸಿದರೆ, ರೈತರಿಗೆ ಏನೂ ಇರುವುದಿಲ್ಲ” ಎಂದರಷ್ಟೇ ಅಲ್ಲ, ದೊಡ್ಡ ದೊಡ್ಡ ನಾಯಕರೆಲ್ಲ ಈ ಕಾನೂನಿನಿಂದ ಕೃಷಿಕರಿಗೆ ಲಾಭ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಏನು ಲಾಭ ಎಂದು ಯಾರೂ ಹೇಳುತ್ತಿಲ್ಲ ಎಂದು ಮತ್ತೊಂದು ಹಸಿ ಸುಳ್ಳು ನುಡಿದಿದ್ದಾರೆ.
ಕೇಂದ್ರ ಸರ್ಕಾರ, ಮಂತ್ರಿಗಳು, ಪ್ರಧಾನಿ ಸಹಿತ ಪ್ರಮುಖ ಮುಖಂಡರೆಲ್ಲರೂ ಕೃಷಿಕರಿಗೆ ಈ ಕಾಯ್ದೆಯ ಲಾಭದ ಬಗ್ಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದರು.
ಇದಕ್ಕೆ ಭಾನುವಾರ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೃಷಿ ಬಗ್ಗೆ ಏನೂ ಗೊತ್ತಿಲ್ಲದವರು ಮುಗ್ಧ ರೈತರ ದಾರಿ ತಪ್ಪಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಸ್ಥಗಿತಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕೆ ಇಲ್ಲವೇ ಇಲ್ಲ. ಮಂಡಿಗಳನ್ನು ಕೂಡ ಉಳಿಸಿಕೊಳ್ಳಲಾಗುತ್ತದೆ. ಯಾವ ಮಗನೂ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲಾರ ಎಂದು ಗುಡುಗಿದ್ದಾರೆ.

Average Rating