ನವದೆಹಲಿ: ಉತ್ತರ ಪ್ರದೇಶದಿಂದ 10 ಮಂದಿ ಹಾಗೂ ಉತ್ತರಾಖಂಡದಿಂದ ಒಬ್ಬ ಅಭ್ಯರ್ಥಿ ರಾಜ್ಯಸಭೆಗೆ ಸೋಮವಾರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ನ ನಿರಂತರ ಪತನದ ಹಾದಿಯ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದ್ದು, ಭಾರತದ ರಾಜಕೀಯ ವಲಯದಲ್ಲಿ ಮಹಾ ಘಟಬಂಧನದ ಅಪ್ರಸ್ತುತತೆಯೂ ಜಗಜ್ಜಾಹೀರಾಗಿದೆ.
2014ರಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೇರಿದ ನಂತರದ ಆರು ವರ್ಷಗಳಲ್ಲಿ ಕಾಂಗ್ರೆಸ್ ಮಹಾ ಪತನ ಕಾಣುತ್ತಿದೆ. ಇದೀಗ ಹೊಸ ಸಂಸದರ ಆಯ್ಕೆಯೊಂದಿಗೆ, ಸಂಸತ್ತಿನ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆಯು 40ರಿಂದ 38ಕ್ಕೆ ಇಳಿದಿದೆ. 2014ರ ಮಹಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಅಂದು 51 ಮೇಲ್ಮನೆ ಸದಸ್ಯರನ್ನು ಹೊಂದಿತ್ತು.
ಇದೇ ವೇಳೆ, ಬಿಜೆಪಿಯ ಬಲವು 86ರಿಂದ 92ಕ್ಕೇರಿದೆ. 245 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಜಾರಿಗೊಳಿಸುವ ಯಾವುದೇ ಶಾಸನಗಳು ಅಂಗೀಕಾರಗೊಳ್ಳುವುದು ಮತ್ತಷ್ಟು ಸುಲಭವಾಗಲಿದೆ.
ವಿವಿಧ ರಾಜ್ಯಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ನಿರಂತರ ಸೋಲೇ ರಾಜ್ಯಸಭೆ ಸದಸ್ಯತ್ವದ ಮೇಲೂ ಪರಿಣಾಮ ಬೀರುತ್ತಿದೆ. ಇದೀಗ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿ ಕಾಂಗ್ರೆಸ್ನ ಬಲವು 100ಕ್ಕಿಂತಲೂ ಕಡಿಮೆ ಇದೆ. 51 ಮಂದಿ ಕಾಂಗ್ರೆಸ್ ಲೋಕಸಭಾ ಸದಸ್ಯರಿದ್ದು, ಒಟ್ಟು ಬಲವೇ 89 ಆಗಿಬಿಟ್ಟಿದೆ.
ಸತತ ಎರಡು ಲೋಕಸಭೆ ಚುನಾವಣೆಗಳಲ್ಲಿನ ಹೀನಾಯ ಸೋಲು ಕಾಂಗ್ರೆಸ್ಸನ್ನು ಕಂಗೆಡಿಸಿದೆ.
ಮೇಲ್ಮನೆ ಅಂದರೆ ಜ್ಞಾನಿಗಳು, ಪ್ರಾಜ್ಞರು ಮತ್ತು ಹಿರಿಯರಿರುವ ರಾಜ್ಯಸಭೆಯಲ್ಲಿ ಕಾಂಗ್ರೆಸ್ಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಸಿಕ್ಕಿಮ್, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರಗಳಲ್ಲಿ ಒಬ್ಬನೇ ಒಬ್ಬ ಪ್ರತಿನಿಧಿಯೂ ಇಲ್ಲ.
ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಿಂದ ಸೋಮವಾರ ಆಯ್ಕೆಯಾದ ಎಂಟು ಮಂದಿಯಲ್ಲಿ 6 ಮಂದಿ ಬಿಜೆಪಿಯವರಾಗಿದ್ದರೆ ತಲಾ ಒಬ್ಬರು ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿಯಿಂದ ಆಯ್ಕೆಯಾಗಿದ್ದಾರೆ.
ನವೆಂಬರ್ 25ರಂದು ನಿವೃತ್ತರಾಗಲಿರುವ 10 ಮಂದಿ ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿಯ ಮೂವರಿದ್ದಾರೆ. ಅವರೆಂದರೆ, ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ, ಅರುಣ್ ಸಿಂಗ್ ಮತ್ತು ನೀರಜ್ ಶೇಖರ್. ಎಸ್ಪಿಯ ನಾಲ್ವರಾದ ಚಂದ್ರಪಾಲ್ ಸಿಂಗ್ ಯಾದವ್, ರಾಮ್ ಗೋಪಾಲ್ ಯಾದವ್, ರಾಮ್ ಪ್ರಕಾಶ್ ವರ್ಮಾ ಮತ್ತು ಜಾವೇದ್ ಅಲಿ ಖಾನ್, ಬಿಎಸ್ಪಿಯ ರಾಜರಾಮ್ ಮತ್ತು ವೀರ್ ಸಿಂಗ್ ಹಾಗೂ ಕಾಂಗ್ರೆಸಿನ ಪಿ.ಎಲ್.ಪುನಿಯಾ ಅವರು ಕೂಡ ನಿವೃತ್ತರಾಗುತ್ತಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating