ಲಖನೌ: ವರ್ಣ ರಂಜಿತ ರಾಜಕಾರಣಿ, ರಾಜಕೀಯ ಚಾಣಾಕ್ಷ, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ (64) ಅವರು ಸುದೀರ್ಘ ಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಹಲವಾರು ತಿಂಗಳಿಂದ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಮ್ಮ ರಾಜಕೀಯ ಚಾಣಾಕ್ಷ ನಡೆಗಳಿಂದ 90ರ ದಶಕದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಶ್ರಮಿಸಿದ್ದರಲ್ಲದೆ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಆತ್ಮೀಯರಾಗಿ, ಪಕ್ಷದ ಏಳಿಗೆಗೆ ಕಾರಣರಾಗಿದ್ದರು.
2017ರಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು. 2013ರಲ್ಲಿ ದುಬೈಯಲ್ಲಿ ಕಿಡ್ನಿ ವೈಫಲ್ಯಕ್ಕೀಡಾಗಿ ಬಳಿಕ ಚೇತರಿಸಿಕೊಂಡು 2016ರಲ್ಲಿ ಸಾರ್ವಜನಿಕ ಜೀವನಕ್ಕೆ ಮರಳಿದ್ದರು. ಅವರಿಗೆ ಪತ್ನಿ ಪಂಕಜಾ ಹಾಗೂ ಅವಳಿ ಹೆಣ್ಣು ಮಕ್ಕಳಿದ್ದಾರೆ.
2010ರವರೆಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಮಾಜವಾದಿ ಪಕ್ಷದ ಬೆಂಬಲದಿಂದಲೇ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಅನಾರೋಗ್ಯದ ಹೊರತಾಗಿಯೂ ಅಮರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ (ಟ್ವಿಟರ್ನಲ್ಲಿ) ಸಕ್ರಿಯರಾಗಿದ್ದರು. ಕೆಲವೇ ಕ್ಷಣಗಳ ಮುನ್ನ ಅವರು ಬಾಲ ಗಂಗಾಧರ ತಿಳಕರ 100ನೇ ಪುಣ್ಯತಿಥಿ ಪ್ರಯುಕ್ತ ಗೌರವ ಸಲ್ಲಿಸಿದ್ದರು ಮತ್ತು ಈದ್ ಶುಭಾಶಯ ಕೋರಿದ್ದರು.
ಕಳೆದ ಮಾರ್ಚ್ನಲ್ಲೇ ಅಮರ್ ಸಿಂಗ್ ನಿಧನದ ವದಂತಿ ಹಬ್ಬಿದಾಗ, ಅವರು ‘ಟೈಗರ್ ಜಿಂದಾ ಹೈ’ ಎಂದು ಟ್ವೀಟ್ ಮಾಡಿ, ವದಂತಿಗಳಿಗೆ ಕೊನೆ ಹಾಡಿದ್ದರು.
1996ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, 2013ರಲ್ಲಿ ಮರು ಆಯ್ಕೆಯಾಗಿದ್ದರು. 2010ರಲ್ಲಿ ಉಚ್ಚಾಟನೆಯಾದ ಆರು ವರ್ಷಗಳ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಉತ್ತರ ಪ್ರದೇಶದಿಂದ ಮುಲಾಯಂ ಬೆಂಬಲದಿಂದಲೇ ಆಯ್ಕೆಯಾಗಿದ್ದರು.
ಭಾರತ-ಅಮೆರಿಕ ಪರಮಾಣು ಒಪ್ಪಂದದ ಸಂದರ್ಭ, ಯುಪಿಎ-1 ಸರ್ಕಾರಕ್ಕೆ ಎಡ ರಂಗ ಬೆಂಬಲ ಹಿಂತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ 2008ರ ಜುಲೈ 22ರಂದು ಬಿಜೆಪಿ ಸಂಸದರು ಸಂಸತ್ತಿನಲ್ಲಿ ಕರೆನ್ಸಿ ನೋಟುಗಳನ್ನು ಪ್ರದರ್ಶಿಸಿದ್ದರು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ವಿಶ್ವಾಸಮತದ ವೇಳೆ, ಸರ್ಕಾರ ಉಳಿಯುವುದಕ್ಕಾಗಿ ಬಿಜೆಪಿ ಸಂಸದರಿಗೆ ಲಂಚದ ಆಮಿಷವೊಡ್ಡಲಾದ ‘ವೋಟಿಗಾಗಿ ನೋಟು’ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಅಮರ್ ಸಿಂಗ್ ಅವರನ್ನು ತಿಹಾರ್ ಜೈಲಿಗೆ ತಳ್ಳಲಾಗಿತ್ತು. ನಂತರ ಅವರು ದೋಷಮುಕ್ತರಾಗಿ ಹೊರಬಂದಿದ್ದರು.

Average Rating