ಹೈದರಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನಡೆಯಲಿದೆ. ದಶಕಗಳ ಕಾಲದ ಹೋರಾಟದ ಬಳಿಕ ಇಲ್ಲಿ ರಾಮ ಮಂದಿರ ಮರು ನಿರ್ಮಾಣಕ್ಕೆ ಭಾರತೀಯರು ಸಜ್ಜಾಗುತ್ತಿದ್ದರೆ, ಇತ್ತ ರಾಜಕೀಯ ಕೆಸರೆರಚಾಟವೂ ಆರಂಭವಾಗಿದೆ.
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸಿಗ ಕಮಲ್ನಾಥ್ ಅವರ ಟ್ವೀಟ್ ಒಂದು ಈಗ ವಿವಾದದ ಕಿಡಿ ಹೊತ್ತಿಸಿದೆ. “ರಾಮ ಮಂದಿರ ನಿರ್ಮಾಣವನ್ನು ನಾನು ಸ್ವಾಗತಿಸುತ್ತೇನೆ. ದೇಶವಾಸಿಗಳ ಬಹುಕಾಲದ ನಿರೀಕ್ಷೆ ಮತ್ತು ಆಕಾಂಕ್ಷೆಯಿದು. ರಾಮ ಮಂದಿರ ನಿರ್ಮಾಣವು ಪ್ರತಿಯೊಬ್ಬ ಭಾರತೀಯನ ಸಹಮತದಿಂದಲೇ ಆಗುತ್ತಿದ್ದು, ಇಂಥದ್ದು ಭಾರತದಲ್ಲಿ ಮಾತ್ರ ಸಾಧ್ಯ” ಎಂದು ಕಮಲ್ನಾಥ್ ಟ್ವೀಟ್ ಮಾಡಿದ್ದರು.
ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಟ್ವಿಟರ್ ಖಾತೆಯಿಂದ ಇದನ್ನು ಟ್ವೀಟ್ ಮಾಡಲಾಗಿತ್ತು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಕೊನೆಗೂ ತನ್ನ ಹೃದಯದೊಳಗಿದ್ದ ಅಭಿಲಾಷೆಯನ್ನು ಬಹಿರಂಗಪಡಿಸಿದೆ ಎಂದು ಕಿಡಿ ಕಾರಿದ್ದಾರೆ. ಶುಕ್ರವಾರ ಮಧ್ಯಪ್ರದೇಶ ಮಾಜಿ ಸಿಎಂ ವಿಡಿಯೊ ಟ್ವೀಟ್ ಮಾಡಿದ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಓವೈಸಿ, ಹೃದಯದ ಮಾತು ನಾಲಿಗೆಯಲ್ಲಿ ಬಂದಿದೆ. ಇಷ್ಟಕ್ಕೇ ನಿಲ್ಲಿಸಬೇಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಂದು ಕಾಂಗ್ರೆಸ್ ಕಚೇರಿ ಕೂಡ ಮರಳನ್ನು ದಾನವಾಗಿ ನೀಡಲಿ ಎಂದು ಕುಟುಕಿದ್ದಾರೆ.
ಇದೇ ವೇಳೆ, ಭೂಮಿ ಪೂಜನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಭಾಗವಹಿಸುತ್ತಿರುವುದನ್ನೂ ಟೀಕಿಸಿರುವ ಓವೈಸಿ, ಅಧಿಕೃತವಾಗಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡರೆ, ಪ್ರಧಾನಿಯವರು ಜಾತ್ಯತೀತತೆ ಕುರಿತ ಸಾಂವಿಧಾನಿಕ ಪ್ರಮಾಣ ವಚನವನ್ನು ಮೀರಿದಂತಾಗುತ್ತದೆ ಎಂದಿದ್ದಾರೆ. ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೈದರಾಬಾದ್ ಸಂಸದ ಈ ಮಾತನ್ನು ಹೇಳಿದ್ದು, ಬಾಬರಿ ಮಸೀದಿಯು 400ಕ್ಕೂ ಹೆಚ್ಚು ವರ್ಷಗಳಿಂದ ಅಯೋಧ್ಯೆಯಲ್ಲಿತ್ತು, 1992ರಲ್ಲಿ ಅದನ್ನು ಕ್ರಿಮಿನಲ್ಗಳ ಗುಂಪೊಂದು ಧ್ವಂಸ ಮಾಡಿತ್ತು ಎಂದಿದ್ದಾರೆ.

Average Rating