ನವದೆಹಲಿ/ಅಸ್ಸಾಂ/ಕಾಶ್ಮೀರ: ಸರ್ಕಾರದಿಂದ ನಡೆಸಲಾಗುತ್ತಿದ್ದ ಮದರಸಾಗಳನ್ನು ಮುಚ್ಚುವ ಅಸ್ಸಾಂ ಸರ್ಕಾರದ ನಿರ್ಧಾರವು ನಿರೀಕ್ಷಿತವಾಗಿ ಸೋಕಾಲ್ಡ್ ‘ಜಾತ್ಯತೀತ’ ವಲಯದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಕಳೆದ ತಿಂಗಳಲ್ಲೇ ಅಲ್ಲಿನ ಶಿಕ್ಷಣ ಸಚಿವ ಹಿಮಂತಾ ಬಿಸ್ವ ಶರ್ಮಾ ಅವರು ಈ ವಿಷಯವನ್ನು ಅಸೆಂಬ್ಲಿಯಲ್ಲೇ ಹೇಳಿದ್ದರು. ಏನೆಂದರೆ, ರಾಜ್ಯ ಸರ್ಕಾರವು ಜಾತ್ಯತೀತ ಮತ್ತು ಆಧುನಿಕ ಶಿಕ್ಷಣವನ್ನಷ್ಟೇ ಪ್ರೋತ್ಸಾಹಿಸುತ್ತದೆ. ನವೆಂಬರ್ ತಿಂಗಳಿಂದ ಮದರಸಾಗಳನ್ನು ಮುಚ್ಚುತ್ತೇವೆ ಎಂದಿದ್ದರು ಅವರು.
ಈ ಬಗ್ಗೆ ರಿಪಬ್ಲಿಕ್ ಟಿವಿ ಚರ್ಚೆಯಲ್ಲಿಯೂ ಭಾಗವಹಿಸಿ ಮಾತನಾಡಿದ್ದ ಹಿಮಂತ ಬಿಸ್ವ ಶರ್ಮ ಅವರು, ಇಸ್ಲಾಮಿಕ್ ಪಂಡಿತ ಎಂದು ಕರೆದುಕೊಳ್ಳುತ್ತಿರುವ ಅತಿಕ್ ಉರ್ ರಹಮಾನ್ಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದರು.
ಭಾರತದ ಅಲ್ಪಸಂಖ್ಯಾತರು ಜಾತ್ಯತೀತತೆ ಬಲಪಡಿಸುವುದಕ್ಕಾಗಿ ತಮ್ಮ ಪ್ರತ್ಯೇಕ ಮತದ ಹಕ್ಕನ್ನೇ ತ್ಯಾಗ ಮಾಡಿದ್ದವರು. ಸಂವಿಧಾನದಲ್ಲಿ ಧಾರ್ಮಿಕ, ಅಲ್ಪಸಂಖ್ಯಾತ ಭಾಷಾ ಹಕ್ಕುಗಳನ್ನು ಖಾತ್ರಿಪಡಿಸಲಾಗುತ್ತದೆ ಎಂದ ಬಳಿಕವ ಮುಸ್ಲಿಮರು ತ್ಯಾಗ ಮಾಡಿ ಅಂದು ಸರ್ದಾರ್ ಪಟೇಲ್ ಮಾತಿಗೆ ಒಪ್ಪಿದ್ದರು. ಈಗೇನು ಮಾಡುತ್ತಿದ್ದೀರಿ? ಇದು ಅಸಂವಿಧಾನಿಕವಲ್ಲವೇ? ಎಂಬ ಅತಿಕ್ ಉರ್ ಪ್ರಶ್ನಿಸಿದ್ದರು.
ಆಗ ಉತ್ತರಿಸಿದ್ದ ಶರ್ಮಾ, ‘ಮೌಲಾನಾ ಸಾಬ್, ಸರ್ಕಾರವೇ ಮದರಸಾಗಳನ್ನು ನಡೆಸಬೇಕು ಎಂದು ಸರ್ದಾರ್ ಪಟೇಲ್ ಹೇಳಿರುವ ಬಗ್ಗೆ ಒಂದೇ ಒಂದು ದಾಖಲೆಯನ್ನಾದ್ರೂ ತೋರಿಸಿ’ ಎಂದು ಸವಾಲು ಹಾಕಿದರು.
ಇದಕ್ಕೆ ಉತ್ತರಿಸಲಾಗದ ಅತಿಕ್ ಉರ್, ಜಾತ್ಯತೀತತೆ ಎಂದರೇನೆಂಬುದನ್ನು ವಿವರಿಸಿ ಎಂದು ಮರುಸವಾಲು ಹಾಕಿದರಷ್ಟೇ.
ಅಸ್ಸಾಂನಲ್ಲಿ ಸುಮಾರು 1000ದಷ್ಟು ಮದರಸಾಗಳನ್ನು ಸರ್ಕಾರವೇ ನಡೆಸುತ್ತಿದೆ. ಪ್ರತಿ ವರ್ಷವೂ ಇದಕ್ಕಾಗಿ ಸುಮಾರು 260 ಕೋಟಿ ರೂ. ವ್ಯಯ ಮಾಡುತ್ತಿದೆ. ಇದೀಗ ಪರಿಸ್ಥಿತಿಯನ್ನು ಸರ್ಕಾರ ಪರಾಮರ್ಶಿಸಿದ್ದು, ಸಾರ್ವಜನಿಕರ ಹಣ ಬಳಸಿ ಖುರಾನ್ ಕಲಿಸುವುದಾಗಲೀ, ಪಠಣಕ್ಕೆ ಬೆಂಬಲಿಸುವುದಾಗಲೀ ರಾಜ್ಯ ಸರ್ಕಾರ ಮಾಡಬಾರದೆಂದು ನಿರ್ಧರಿಸಲಾಗಿದೆ. ಸರ್ಕಾರವೇ ಮದರಸಗಳನ್ನು ನಡೆಸುವುದರಿಂದ, ಸರ್ಕಾರಿ ಶಾಲೆಗಳಲ್ಲಿ ಬೈಬಲ್ ಕಲಿಸಿ, ಭಗವದ್ಗೀತೆ ಕಲಿಸಿ ಅಂತ ಹಲವು ಸಂಘಟನೆಗಳು ಬೇಡಿಕೆ ಮುಂದೊಡ್ಡಿವೆ. ಶಾಲೆಗಳಲ್ಲಿ ಧರ್ಮದ ವಿಚಾರಗಳನ್ನು ಬೋಧಿಸುವುದು ಸೂಕ್ತವಾಗುವುದಿಲ್ಲ ಎಂದು ಶರ್ಮ ವಿವರಿಸಿದರು.
ಈ ಕುರಿತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ನಿರ್ಧಾರ ಬದಲಿಸುವುದಿಲ್ಲ ಎಂದೂ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಕಾಶ್ಮೀರದಲ್ಲಿಯೂ ಬೋಧನಾ ಕೇಂದ್ರಗಳ ಮೇಲೆ ಕಟ್ಟೆಚ್ಚರ
ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಹಾಗೂ ಪುಲ್ವಾಮಗಳಲ್ಲಿರುವ ಕೆಲವೊಂದು ಶಾಲೆಗಳು ಕಮ್ ಧಾರ್ಮಿಕ ಶಿಕ್ಷಣ ಕೇಂದ್ರಗಳ ಮೇಲೆ ಗುಪ್ತ ದಳ ಹದ್ದಿನ ಕಣ್ಣಿರಿಸಿದೆ ಎಂದು ವರದಿಯಾಗಿದೆ.
ಕಣಿವೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಿಗೆ ಸೇರುವ ಇಚ್ಛೆ ಇರುವವರನ್ನು ಗುರುತಿಸಲು ಈ ಔಪಚಾರಿಕ ಶಿಕ್ಷಣ ಕೇಂದ್ರಗಳನ್ನು ಬಳಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಗುಪ್ತ ದಳ ಈ ಕ್ರಮ ಕೈಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಿಷೇಧಿತ ಜಮಾತೆ ಇಸ್ಲಾಮಿ, ಸಿರಾಜ್ ಉಲ್ ಉಲೂಮ್ಗೆ ಸೇರಿರುವ ಶೋಪಿಯಾನ್ನ ಶಾಲೆಯೊಂದು ಧಾರ್ಮಿಕ ಶಿಕ್ಷಣದೊಂದಿಗೆ, ಮೆಟ್ರಿಕ್ಯುಲೇಟ್ ಮತ್ತು ಇಂಟರ್ಮೀಡಿಯೇಟ್ ಶಿಕ್ಷಣವನ್ನೂ. ಕಲಾ ಪದವಿ ಶಿಕ್ಷಣವನ್ನೂ ನೀಡುತ್ತಿದೆ.
ಈ ಧಾರ್ಮಿಕ ಶಿಕ್ಷಣ ಕೇಂದ್ರದ 15 ಮಂದಿ ಮಾಜಿ ವಿದ್ಯಾರ್ಥಿಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪುಲ್ವಾಮದಲ್ಲಿ ಯೋಧರ ಮೇಲೆ ದಾಳಿ ನಡೆಸಿದ ಘಟನೆಯ ಆರೋಪಿ ಸಜ್ಜಾದ್ ಬಟ್ ಕೂಡ ಸೇರಿದ್ದಾನೆ. ಇವರೆಲ್ಲರ ಮೇಲೆ ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಹೆಚ್ಚಿನ ಶಾಲೆಗಳು ದೇವಬಂದಿ ತತ್ವಸಿದ್ಧಾಂತದಿಂದ ಪ್ರೇರಿತವಾಗಿವೆ ಮತ್ತು/ಅಥವಾ ಜಮಾತೆ ಇಸ್ಲಾಮಿಗೆ ಸಂಬಂಧ ಹೊಂದಿವೆ. ಈ ಸಂಘಟನೆಯನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲೇ ಅಕ್ರಮ ಒಕ್ಕೂಟ ಎಂದು ಯುಎಪಿಎ ಅಡಿ ನಿಷೇಧಿಸಲಾಗಿತ್ತು. ಹೀಗಾಗಿ, ಭಯೋತ್ಪಾದಕರಾಗಲು ಮಕ್ಕಳನ್ನು ಪ್ರೇರೇಪಿಸುವ ಈ ಶಿಕ್ಷಣ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿದ್ದಾರೆ.

Average Rating