ಮುಂಬಯಿ: ನಟ, ಉದ್ಯಮಿ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ನಡೆಸುವಂತೆ ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಆದೇಶವು ಮಹಾರಾಷ್ಟ್ರ ಸರ್ಕಾರಕ್ಕೆ, ವಿಶೇಷವಾಗಿ ಮುಂಬಯಿ ಪೊಲೀಸರಿಗಿದ್ದ ಹೆಸರಿಗೆ ದೊಡ್ಡ ಆಘಾತ. ಇದು ಸ್ವಯಂಕೃತಾಪರಾಧವೂ ಹೌದು.
ಜೂ.14ರಂದು ಸಾವನ್ನಪ್ಪಿದ್ದರು ಸುಶಾಂತ್ ಸಿಂಗ್. ಎರಡು ತಿಂಗಳು ಕಳೆದರೂ ಮುಂಬಯಿ ಪೊಲೀಸರಿಗೆ ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಯಾವುದೇ ಆಧಾರ ದೊರೆತಿರಲಿಲ್ಲ ಮತ್ತು ಇದೊಂದು ಆಕಸ್ಮಿಕ ಸಾವು ಎಂದೇ ವಾದಿಸುತ್ತಾ, ವಿಚಾರಣೆ ನಡೆಸುತ್ತಿದ್ದರು.
ಜುಲೈ 25ರಂದು ಬಿಹಾರದವರಾದ ಸುಶಾಂತ್ ಸಿಂಗ್ ಅವರ ತಂದೆ ಕೆ.ಕೆ.ಸಿಂಗ್ ಅವರು ಪಟನಾ ಪೊಲೀಸರ ಮೊರೆ ಹೋಗಿ, ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬ ಸದಸ್ಯರ ವಿರುದ್ಧ ಪಟನಾದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.
ತನ್ನ ”ವಿಚಾರಣೆ’ಯ ಅವಧಿಯಲ್ಲಿ 56 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದ್ದ ಮುಂಬಯಿ ಪೊಲೀಸರು ರಾಜಕೀಯ ಒತ್ತಡದಿಂದಾಗಿ ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಹಾರ ಪೊಲೀಸರು ನೇರವಾಗಿ ಆರೋಪ ಮಾಡಬೇಕಾಯಿತು. ಯಾಕೆಂದರೆ, ತನಿಖೆಗೆ ಅಲ್ಲಿಂದ ಮುಂಬಯಿಗೆ ಬಂದ ಪೊಲೀಸ್ ಅಧಿಕಾರಿಗಳನ್ನು ಮುಂಬಯಿ ಪೊಲೀಸರು ಕೊರೊನಾ ವೈರಸ್ ನೆಪದಲ್ಲಿ ಬಲವಂತವಾಗಿ ಕ್ವಾರಂಟೈನ್ನಲ್ಲಿರಿಸಿದ್ದರು.
ತನಿಖಾಧಿಕಾರದ ವ್ಯಾಪ್ತಿ ಮತ್ತು ಪಟನಾದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ರಾಜಕೀಯವಿದೆ ಎಂದು ಬಿಂಬಿಸುವ ಮಹಾರಾಷ್ಟ್ರ ಸರ್ಕಾರ ಹಾಗೂ ಆರೋಪಿ ರಿಯಾ ಚಕ್ರವರ್ತಿ ಕುಟುಂಬದ ಪ್ರಯತ್ನಗಳಿಗೆ ಬಿಹಾರ ಸರ್ಕಾರ ಕಡಿವಾಣ ಹಾಕಿತು. ಯಾಕೆಂದರೆ, ತನಿಖೆಯನ್ನು ಅದು ತಕ್ಷಣವೇ ಸಿಬಿಐಗೆ ವರ್ಗಾಯಿಸುವ ಮೂಲಕ ಮಹಾರಾಷ್ಟ್ರ ಸರ್ಕಾರದ ಕೈಕಟ್ಟಿ ಹಾಕಿತು ಬಿಹಾರ. ಸುಪ್ರೀಂ ಕೋರ್ಟ್ ಮೊರೆ ಹೋದ ಮಹಾರಾಷ್ಟ್ರ ಸರ್ಕಾರ ಹಾಗೂ ಮುಂಬಯಿ ಪೊಲೀಸರಿಗೆ ಅಲ್ಲಿ ನಿರಾಸೆ ಕಾದಿತ್ತು.
ಸುಪ್ರೀಂ ಕೋರ್ಟ್ ಏನು ಹೇಳಿತ್ತು? ಇಲ್ಲಿ ಓದಿ.
ಮುಂಬಯಿ ಪೊಲೀಸರ ತನಿಖಾ ವಿಧಾನವು ಸುಶಾಂತ್ ಕುಟುಂಬದ ಪರವಾಗಿ ಸಾರ್ವಜನಿಕ ಬೆಂಬಲವೊಂದು ಬೆಳೆದು ನಿಲ್ಲಲು ಕಾರಣವಾಯಿತು. ಸುಶಾಂತ್ ಅವರೊಂದಿಗೆ ಸಹಜೀವನ (ಲಿವ್-ಇನ್) ನಡೆಸುತ್ತಿದ್ದ ರಿಯಾ ಅವರೇ ಏನೋ ಮಾಡಿದ್ದಾರೆ, ವಂಚಿಸಿದ್ದಾರೆ ಮತ್ತು ಆತನ ಆಸ್ತಿ ಕಬಳಿಸುವ ಪ್ರಯತ್ನ ನಡೆಸಿದ್ದಾಳೆ ಎಂದೆಲ್ಲಾ ಜನರು ಬಹಿರಂಗವಾಗಿ ಆರೋಪಿಸತೊಡಗಿದರು. ಇದರೊಂದಿಗೆ ಪರ-ವಿರೋಧ ಚರ್ಚೆ ಕಾವೇರತೊಡಗಿರುವಂತೆಯೇ, ಸುಶಾಂತ್ ಸಿಂಗ್ ಸಾವಿನ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈವಾಡವಿರುವ ಸಾಧ್ಯತೆಗಳ ಬಗೆಗೂ ಸಾಕಷ್ಟು ಮಾತುಗಳು ಕೇಳಿಬರತೊಡಗಿದವು.
ಇದರಲ್ಲಿ ಮುಂಬಯಿ ಪೊಲೀಸರು ತಪ್ಪು ಮಾಡಿದ್ದಾರೆಂಬುದಕ್ಕೆ ಯಾವುದೇ ನೇರ ಆಧಾರಗಳಿಲ್ಲವಾದರೂ, ತನಿಖೆಗೆ ಆಗಮಿಸಿದ ಬಿಹಾರ ಪೊಲೀಸ್ ತಂಡಕ್ಕೆ ಮುಂಬಯಿಯಲ್ಲಿ ತಡೆಯೊಡ್ಡುವುದನ್ನು ತಪ್ಪಿಸಬಹುದಾಗಿತ್ತು. ಇದು ಶಂಕೆಯು ಮತ್ತಷ್ಟು ಬಲಗೊಳ್ಳಲು ಕಾರಣವಾಯಿತು ಎಂದು ಬುಧವಾರ ತೀರ್ಪು ನೀಡಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಅಭಿಪ್ರಾಯಪಟ್ಟಿದ್ದರು.
ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆಯನ್ನೊಳಗೊಂಡ ಮಹಾ ಅಘಾಡಿ ಸರ್ಕಾರವೇಕೆ ಸೂಕ್ತವಾದ ತನಿಖೆಗೆ ಹಿಂದೇಟು ಹಾಕುತ್ತಿದೆ ಎಂಬುದು ಉತ್ತರ ಸಿಗದ ಪ್ರಶ್ನೆ.
ಆರಂಭದಲ್ಲಿ ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸಿದ್ದ ರಿಯಾ ಚಕ್ರವರ್ತಿ, ಬಳಿಕ ಸಿಬಿಐ ತನಿಖೆ ವಿರೋಧಿಸಿದ್ದೇಕೆ ಎಂಬುದು ಮತ್ತೊಂದು ಪ್ರಶ್ನೆ.
ಇದೀಗ, ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆ ಬಾಗುತ್ತೇವೆ, ತನಿಖೆಗೆ ಸಹಕರಿಸುತ್ತೇವೆ ಎಂದು ಅನಿವಾರ್ಯವಾಗಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿಕೆ ನೀಡಿದ್ದಾರೆ. ಮುಂಬಯಿ ಪೊಲೀಸರು ತಪ್ಪು ಮಾಡಿಲ್ಲ ಎಂದು ಹೇಳಿರುವುದು ಮುಂಬಯಿ ಪೊಲೀಸರಿಗೂ ಹೆಮ್ಮೆಯ ವಿಷಯ ಎಂದೂ ಅವರು ಹೇಳಿದ್ದಾರೆ.
ಇದೀಗ ಸಿಬಿಐ ಪೊಲೀಸರು ಮುಂಬಯಿಗೆ ಆಗಮಿಸಲು ಮತ್ತು ಕ್ವಾರಂಟೈನ್ ಮಾಡದಂತಿರಲು ಬೃಹನ್ಮುಂಬಯಿ ನಗರಪಾಲಿಕೆಯ ಬಳಿ ಅನುಮತಿ ಕೇಳಿದ್ದು, ಅದಕ್ಕೆ ಸಮ್ಮತಿಯೂ ಸಿಕ್ಕಿದೆ. ಬಿಹಾರ ಎಸ್ಪಿ ವಿನಯ್ ತಿವಾರಿ ಅವರನ್ನೇ ಇದೇ ಬಿಎಂಸಿ ಕ್ವಾರಂಟೈನ್ಗೊಳಪಡಿಸಿ ವಿವಾದವನ್ನು ಮೈಮೇಲೆಗೆಳೆದುಕೊಂಡಿತ್ತು.
ಸತ್ಯದ ಮೇಲೆ ಬೆಳಕು ಚೆಲ್ಲಿದಾಗ, ಬದುಕಿರುವವರಿಗಷ್ಟೇ ಅಲ್ಲದೆ, ಅಗಲಿದ ಆತ್ಮಕ್ಕೂ ನೆಮ್ಮದಿ ಸಿಗಬಹುದು. ಸತ್ಯಮೇವ ಜಯತೇ ಎಂದು ನ್ಯಾಯಾಲಯವು ಹೇಳಿದ್ದು ಇದೇ ಕಾರಣಕ್ಕೆ.

Average Rating